
ಗದಗ: ‘ಜಾತ್ಯತೀತ, ಪ್ರಜಾಸತ್ತಾತ್ಮಕ ಭಾರತ ಇಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದೆ. ಬಹುಸಂಖ್ಯಾತ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮಾರಕವಾದ ಕೋಮುವಾದಿ ಆಡಳಿತ ಮುಕ್ತಗೊಳಿಸಿ ಭಾರತದ ಸಂವಿಧಾನಕ್ಕೆ ಪೂರಕವಾದ ಪ್ರಜಾಪ್ರಭುತ್ವ ಆಡಳಿತ ಪುನರ್ ಸ್ಥಾಪಿಸಲು ಜಾತ್ಯಾತೀತ ಶಕ್ತಿಗಳು ಒಂದಾಗುವ ಕಾಲ ಸನ್ನಿತವಾಗಿದೆ’ ಎಂದು ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸ್ವಾತಿ ಸುಂದರೇಶ ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿ ನಡೆದ ‘ಶ್ರಮ ಶಕ್ತಿಯ ಸಂಘರ್ಷದ ಶತಮಾನದ ಪಯಣ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದ ಬಹುಸಂಖ್ಯಾತರ ಅಭಿವೃದ್ಧಿಗೆ ಮಾರಕವಾದ ಕೋಮುವಾದಿ ಸರ್ಕಾರ ಕಿತ್ತೊಗೆಯಲು ನಾವೆಲ್ಲರೂ ಮತ್ತೊಮ್ಮೆ 1947ರ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಜ್ಜಾಗಬೇಕು’ ಎಂದು ಹೇಳಿದರು.
ಜಾತ್ಯತೀತ, ಹಿಂದುಳಿದ, ಅಲ್ಪಸಂಖ್ಯಾತ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸೇರಿ ಕೋಮುವಾದ ಹಿಮ್ಮೆಟ್ಟಿಸುವ ಶಪಥ ಮಾಡಿದ್ದಾರೆ’ ಎಂದು ತಿಳಿಸಿದರು.
ಸಿಪಿಐ ಶತಮಾನೋತ್ಸವ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ದಲಿತ ಮುಖಂಡ ವೆಂಕಟೇಶಯ್ಯ, ದಲಿತ ನಾಯಕರಾದ ಸತೀಶ ಹುಲಿ, ರಮೇಶ ಬಾಳಮ್ಮನವರ, ನಾರಾಯಣಸ್ವಾಮಿ, ಎಐಸಿಯುಟಿ ನವಲೂರ, ಸಿಪಿಐನ ಷಣ್ಮುಖಸ್ವಾಮಿ, ಸತೀಶ ಪಾಸಿ, ವಾಸುದೇವ ಹುಣಸಿಮರದ, ಬಸವರಾಜ ಪೂಜಾರ ಮಾತನಾಡಿದರು.
ದಲಿತ ಕಲಾಮಂಡಳಿ ಹಾಗೂ ಸಿಪಿಐ ಕಲಾ ತಂಡದಿಂದ ಕ್ರಾಂತಿ ಗೀತೆ ಹಾಡಲಾಯಿತು.
ಪ್ರಾರಂಭದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿಜಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಹಿರಿಯ ಸಾಹಿತಿ ಬಿ. ಬಾಬು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ರಾಜ್ಯದಾದ್ಯಂತ ಸಿಪಿಐ ಶತಮಾನೋತ್ಸವ ಜಾಥಾ ಸಂಚರಿಸುತ್ತಿದ್ದು ಡಿ.23ರಂದು ಬೆಂಗಳೂರನಲ್ಲಿ ಮುಕ್ತಾಯಗೊಳ್ಳಲಿದೆಸ್ವಾತಿ ಸುಂದರೇಶ ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.