ಮುಂಡರಗಿ: ಪಟ್ಟಣದ ಜನಭರಿತ ಸ್ಥಳದಲ್ಲಿ ಖಾಸಗಿ ಕಂಪನಿಯವರು ಸ್ಥಾಪಿಸಿರುವ ಮೊಬೈಲ್ ಟವರ್ ಹಾಗೂ ಕಟ್ಟಿಗೆ ಅಡ್ಡೆಯನ್ನು (ಸಾಮಿಲ್) ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಸೋಮವಾರ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ 17ನೇ ವಾರ್ಡ್ನಲ್ಲಿ ಮೊಬೈಲ್ ಟವರ್ ಸ್ಥಾಪಿಸಲಾಗಿದ್ದು, ಅದರಿಂದ ಹೊರಹೊಮ್ಮುವ ವಿದ್ಯುತ್ ತರಂಗಗಳಿಂದ ಜನ ಹಾಗೂ ಜಾನುವಾರುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಲಿದೆ. ಇದರಿಂದ ಜನರಿಗೆ ನರ ದೌರ್ಬಲ್ಯ ಸೇರಿದಂತೆ ಪಶು, ಪಕ್ಷಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಆದ್ದರಿಂದ ಅದನ್ನು ತಕ್ಷಣ ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ವಾರ್ಡ್ನ ಮಧ್ಯದಲ್ಲಿ ಕಟ್ಟಿಗೆ ಅಡ್ಡೆ ಕಾರ್ಯನಿರ್ವಹಿಸುತ್ತಿದ್ದು, ಅದರಿಂದ ಹೊರಹೊಮ್ಮುವ ಶಬ್ದದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ‘ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದರು.
ಮಹಾಲಿಂಗೇಶ ಹಿರೇಮಠ, ವೆಂಕಟೇಶ ಹೆಗ್ಡಾಳ, ರಾಮಚಂದ್ರ ಡಿ. ಎನ್., ಈರಣ್ಣ ಹಾಲಗಿ, ಅಮೀನಸಾಬ ಬಿಸನಳ್ಳಿ, ಪ್ರವೀಣ ನಂದಗಾವಿ, ಸುರೇಶ ಲಿಂಗಶೇಟ್ಟರ, ಓಂಪ್ರಕಾಶ ಲಿಂಗಶೆಟ್ಟರ, ಪ್ರಮೋದ ಇನಾಮತಿ, ಮೃತ್ಯುಂಜಯ ಮೂಲಿಮನಿ, ಎಂ.ಎಂ. ಸರಗಿ, ಶಶಿಧರ ಅಡರಕಟ್ಟಿ, ರವಿ ರೇವಣಕರ, ಸಿದ್ಧಲಿಂಗೇಶ ಚವಡಿ, ರಾಯಸಾಬ ಕಲೆಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.