ADVERTISEMENT

ರೋಣ | ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 14:10 IST
Last Updated 28 ನವೆಂಬರ್ 2023, 14:10 IST
ರೋಣ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸಾರ್ವಜನಿಕರ ಅಹವಾಲು ಆಲಿಸಿದರು
ರೋಣ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸಾರ್ವಜನಿಕರ ಅಹವಾಲು ಆಲಿಸಿದರು    

ರೋಣ: ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳಾದ ವೈಶಾಲಿ ಎಂ.ಎಲ್. ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕಡತಗಳನ್ನು ಪರಿಶೀಲಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.

ಬೆಳಿಗ್ಗೆ 11 ಗಂಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ತಾಲ್ಲೂಕು ಕಚೇರಿಯ ಚುನಾವಣಾ ವಿಭಾಗಕ್ಕೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಪರಿಶೀಲಿಸಿ, ಚುನಾವಣಾ ವಿಭಾಗದ ಸಿಬ್ಬಂದಿಗೆ ಪರಿಷ್ಕರಣಾ ಕಾರ್ಯ ಕುರಿತು ಹಲವು ಸೂಚನೆಗಳನ್ನು ನೀಡಿದರು.

ಹಿರೇಹಾಳ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ, ಪರಿಶೀಲನಾ ಕಾರ್ಯ ನಡೆಸಿದ ಜಿಲ್ಲಾಧಿಕಾರಿ ನಂತರ ಪುನಃ ರೋಣ ತಾಲ್ಲೂಕು ಕಚೇರಿಗೆ ಆಗಮಿಸಿ ಸಾರ್ವಜನಿಕರ ಕುಂದು–ಕೊರತೆಗಳನ್ನು ಆಲಿಸಿದರು.

ADVERTISEMENT

ಈ ವೇಳೆ ಜಾತಿ ಪ್ರಮಾಣಪತ್ರ ಸಿಂಧುತ್ವ ಆರ್ಟಿಸಿ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಸಂಗಯ್ಯ ವಸ್ತ್ರದ ಎಂಬುವವರು ಸ್ಮಶಾನಕ್ಕೆ ಜಾಗ ನೀಡಿದ್ದು, ಅದನ್ನು ಖರೀದಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ದೂರು ನೀಡಿದಾಗ ಭೂಮಾಪನ ಇಲಾಖೆಯ ಮೇಲ್ವಿಚಾರಕಿ ಉಮಾದೇವಿ ಜಾಲಿಹಾಳ ಮೇಲೆ ಗರಂ ಆದ ಜಿಲ್ಲಾಧಿಕಾರಿ, ಭೂಮಿ ನೀಡಲು ಹಿಂಜರಿಯುವ ದಿನಗಳಲ್ಲಿ ತಾವೇ ಭೂಮಿ ನೀಡಲು ಬಂದರೂ ಖರೀದಿ ಪ್ರಕ್ರಿಯೆಯಲ್ಲಿ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿದರು. ನಂತರ ಭೂಮಾಪನ ವಿಭಾಗಕ್ಕೆ ತೆರಳಿ ಕಡತಗಳನ್ನು ಪರಿಶೀಲಿಸಿ, ಬಾಕಿ ಉಳಿದಿರುವ ಕಡತಗಳ ವಿಲೇವಾರಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ತಾಕೀತು ಮಾಡಿದರು.

ರೋಣ ತಹಶೀಲ್ದಾರ್‌ ಕೆ. ನಾಗರಾಜ ಇದ್ದರು.

ರೋಣ ತಾಲ್ಲೂಕು ಕಚೇರಿಯ ಭೂಮಾಪನ ವಿಭಾಗಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಕಡತಗಳನ್ನು ಪರಿಶೀಲಿಸಿದರು
ಹಿರೇಹಾಳ ಗ್ರಾಮ ಪಂಚಾಯ್ತಿ ಕಚೇರಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.