ADVERTISEMENT

ಪ್ರವಾಹ: ಮನೆತುಂಬಾ ಕೆಸರು; ಸ್ವಚ್ಛತೆಯದ್ದೇ ಸವಾಲು

ಮೂರು ತಾಲ್ಲೂಕುಗಳಲ್ಲಿ ಕೃಷಿ ಇಲಾಖೆಯಿಂದ ಬೆಳೆಹಾನಿ ಸಮೀಕ್ಷೆ

ಜೋಮನ್ ವರ್ಗಿಸ್
Published 17 ಆಗಸ್ಟ್ 2019, 19:45 IST
Last Updated 17 ಆಗಸ್ಟ್ 2019, 19:45 IST
ಮಲಪ್ರಭಾ ಪ್ರವಾಹದಿಂದ ಹೊಳೆಮಣ್ಣೂರು ಗ್ರಾಮದಲ್ಲಿ ಮನೆಯೊಳಗೆ ಸೇರಿಕೊಂಡಿರುವ ಕೆಸರನ್ನು ಬಕೆಟ್‌ನಲ್ಲಿ ತುಂಬಿ ಹೊರಹಾಕುತ್ತಿರುವ ಗ್ರಾಮಸ್ಥ
ಮಲಪ್ರಭಾ ಪ್ರವಾಹದಿಂದ ಹೊಳೆಮಣ್ಣೂರು ಗ್ರಾಮದಲ್ಲಿ ಮನೆಯೊಳಗೆ ಸೇರಿಕೊಂಡಿರುವ ಕೆಸರನ್ನು ಬಕೆಟ್‌ನಲ್ಲಿ ತುಂಬಿ ಹೊರಹಾಕುತ್ತಿರುವ ಗ್ರಾಮಸ್ಥ   

ಗದಗ: ಕೂಗಳತೆಯ ದೂರದಲ್ಲೇ ಮಲಪ್ರಭಾ ನದಿ ಹರಿಯುತ್ತಿದ್ದರೂ ಕುಡಿಯಲು ಹನಿ ನೀರಿಲ್ಲ. ಮನೆ ಸ್ವಚ್ಛಗೊಳಿಸಬೇಕಾದರೂ ನೆರೆಯ ನೀರೇ ಆಶ್ರಯ. ಕೆಸರು ನೀರು ಬಳಸಿ ಕೆಸರನ್ನೇ ತೊಳೆಯುವ ಸಾಹಸ. ಹೊಳೆಆಲೂರು ಸುತ್ತಮುತ್ತಲಿನ ನದಿದಂಡೆಯ ಗ್ರಾಮಗಳಲ್ಲಿ ಪ್ರವಾಹದ ಸಂದರ್ಭಕ್ಕಿಂತಲೂ, ಪ್ರವಾಹದ ನಂತರ ಸ್ಥಿತಿ ಭೀಕರವಾಗಿದೆ.

ಪ್ರವಾಹದಲ್ಲಿ ಹೊಳೆಆಲೂರು, ಹೊಳೆ ಮಣ್ಣೂರು, ಯಾ.ಸ ಹಡಗಲಿ,ಅಮರಗೋಳ, ಗಾಡಗೋಳಿ, ಮಾಳವಾಡ, ಮೆಣಸಗಿ, ಬಿ.ಎಸ್‌. ಬೇಲೇರಿ, ಬಸರಕೋಡ, ಹೊಳೆ ಹಡಗಲಿ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದವು. ನೆರೆ ಇಳಿದ ನಂತರ ಈ ಎಲ್ಲ ಗ್ರಾಮಗಳಲ್ಲಿ ಕೆಸರು ತುಂಬಿಕೊಂಡು ನಿಂತಿದೆ. ಪ್ರತಿಯೊಂದು ಮನೆಯಲ್ಲೂ ಮೊಣಕಾಲುಮಟ್ಟ ಕೆಸರು ನಿಂತಿದೆ. ಮನೆಯೊಳಗೆ ಸೇರಿದ ಕೊಳಚೆ ರಾಡಿಯನ್ನು ಹೊರ ಹಾಕಲು ಜನರು ಪರದಾಡುತ್ತಿದ್ದಾರೆ.

ಪ್ರವಾಹದ ಸಂದರ್ಭದಲ್ಲಿ ಈ ಗ್ರಾಮಗಳನ್ನು ಹೊಳೆಆಲೂರು–ರೋಣ ರಸ್ತೆಯ ನಡುವೆ ನಿರ್ಮಿಸಲಾಗಿದ್ದ ಆಸರೆ ಮನೆಗಳಿಗೆ ಸ್ಥಳಾಂತರಿಸಲಾಗಿತ್ತು. ಈಗ ನೆರೆ ಇಳಿದ ನಂತರ ಒಬ್ಬೊಬ್ಬರಾಗಿ ಸ್ವ ಗ್ರಾಮಗಳಿಗೆ ಮರಳುತ್ತಿದ್ದಾರೆ. ಪುರುಷರು ಮೊದಲು ಹೋಗಿ ಮನೆ ವಾಸಯೋಗ್ಯವೇ ಎನ್ನುವುದನ್ನು ಪರಿಶೀಲಿಸಿಕೊಂಡು ಬರುತ್ತಿದ್ದಾರೆ. ಕೆಲವೆಡೆ ಮನೆಗಳು ಮುಟ್ಟಿದರೆ ಬೀಳುವ ಸ್ಥಿತಿಯಲ್ಲಿವೆ. ಅಂತವರು ‘ಆಸರೆ’ ಮನೆಗಳಲ್ಲೇ ಉಳಿದುಕೊಂಡಿದ್ದಾರೆ. ಹೊಸದಾಗಿ ಮನೆ ಕಟ್ಟಿಸಿದವರು, ಕಾಂಕ್ರಿಟ್‌ ಮನೆಗಳನ್ನು ಹೊಂದಿವರು, ತಮ್ಮ ಕುಟುಂಬದ ಸದಸ್ಯರ ಜತೆಗೆ ಊರಿಗೆ ಮರಳಿ, ಮನೆ ಸ್ಚಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.

ADVERTISEMENT

ಅಡುಗೆಕೋಣೆ, ಊಟದ ಕೋಣೆ, ಮಲಗುವ ಕೋಣೆ ಸೇರಿದಂತೆ ಹೆಜ್ಜೆಯೂರಲೂ ಜಾಗವಿಲ್ಲದಂತೆ ಇಡೀ ಮನೆ ತುಂಬಾ ಕೆಸರು ತುಂಬಿಕೊಂಡಿದೆ. ಪುರುಷರು ಬಕೆಟ್‌ಗಳಲ್ಲಿ ಮನೆಯ ಒಳಗಿನ ಕೆಸರನ್ನು ತುಂಬಿಕೊಂಡು ಬಂದು ಹೊರಚೆಲ್ಲುತ್ತಿದ್ದಾರೆ. ಮಹಿಳೆಯರು ಪಾತ್ರೆಗಳನ್ನು, ಬಟ್ಟೆಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಲು ಹಾಕುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ.

‘ಎಲ್ಲರ ಮನೆಗಳಲ್ಲಿ ಸಂಗ್ರಹಿಸಿಟ್ಟದ ದವಸ –ಧಾನ್ಯಗಳು ನೀರಿನಲ್ಲಿ ಮುಳುಗಿದೆ. ದಾನಿಗಳು ನೀಡಿದ ಆಹಾರದಲ್ಲೇ ದಿನ ಕಳೆಯುತ್ತಿದ್ದೇವೆ. ಅವರಿಂದಲೇ ನಾವು ಬದುಕಿದ್ದೇವೆ’ ಎಂದು ಗಾಡಗೋಳಿ ಗ್ರಾಮದ ನಿಂಗಪ್ಪ ಸೂಡಿ ಕೈ ಮುಗಿಯುತ್ತಾ ಹೇಳಿದರು.

‘10 ಎಕರೆ ಪ್ರದೇಶದ ಗೋವಿನಜೋಳ, ಸೂರ್ಯಕಾಂತಿ ಬೆಳೆ ಸಂಪೂರ್ಣ ನಾಶವಾಗಿದೆ. ಜನರಿಗೆ ತಿನ್ನಲು ಕೂಳಿಲ್ಲ, ಜಾನುವಾರುಗಳಿಗೆ ಮೇವಿಲ್ಲದಂತಹ ಪರಿಸ್ಥಿತಿ ಎದುರಾಗಿದೆ’ ಎಂದು ಮೆಣಸಗಿ ಗ್ರಾಮದ ನಿಂಗನಗೌಡ ಭರಮಗೌಡರ ಪ್ರವಾಹದಿಂದ ನಾಶವಾಗಿರುವ ತಮ್ಮ ಜಮೀನನನ್ನು ತೋರಿಸುತ್ತಾ ಹೇಳಿದರು.

ಪ್ರವಾಹ ಸಂದರ್ಭದಲ್ಲಿ ಒಟ್ಟು 44 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿತ್ತು. ಪ್ರವಾಹ ಇಳಿದ 40 ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ಗ್ರಾಮಸ್ಥರ ಬೇಡಿಕೆಯ ಹಿನ್ನೆಲೆಯಲ್ಲಿ ಹೊಳೆಮಣ್ಣೂರು, ಕುರುವಿನಕೊಪ್ಪ, ಮೆಣಸಗಿ ಗ್ರಾಮಗಳಲ್ಲಿ ಮಾತ್ರ ಪರಿಹಾರ ಕೇಂದ್ರಗಳು ಮುಂದುವರಿದಿವೆ.

ಶಾಲೆ ಆರಂಭಗೊಂಡಿಲ್ಲ: ಪ್ರವಾಹ ಪೀಡಿತ ಗ್ರಾಮಗಳಲ್ಲಿ ಶಾಲೆಗಳು ಇನ್ನೂ ಪ್ರಾರಂಭವಾಗಿಲ್ಲ. ಕುರುವಿನಕೊಪ್ಪ, ಹೊಳೆ ಮಣ್ಣೂರು, ಗಾಡಗೋಳಿ ಗ್ರಾಮಗಳ ಸರ್ಕಾರಿ ಶಾಲೆಗಳ ಆವರಣದಲ್ಲಿ ಸಂಪೂರ್ಣ ಕೆಸರು ನೀರು ನಿಂತಿದೆ. ಮನೆಗಳನ್ನು ಜನರು ಬೇಗ ಸ್ಚಚ್ಛಗೊಳಿಸುತ್ತಾರೆ. ಆದರೆ, ಶಾಲೆಯನ್ನು ಸ್ವಚ್ಛಗೊಳಿಸಿ, ತರಗತಿ ಪ್ರಾರಂಭಿಸಲು ವಾರಗಳೇ ಬೇಕಾಗಬಹುದು ಎನ್ನುತ್ತಿದ್ದಾರೆ ಸಾರ್ವಜನಿಕರು. ಹಾನಿಯಾಗಿರುವ ಶಾಲೆಗಳನ್ನು ಗುರುತಿಸಿ, ಅಲ್ಲಿ ಪ್ರಾಥಮಿಕ ದುರಸ್ತಿ ಕಾರ್ಯ ಕೈಗೊಂಡು, ಮೇಲ್ಛಾವಣಿ ಹೋಗಿರುವ ಶಾಲೆಗಳಿಗೆ ತಾತ್ಕಾಲಿಕವಾಗಿ ತಗಡಿನ ಶೀಟ್‌ಗಳನ್ನು ಹಾಕಿ ಶಾಲೆ ಪುನರಾರಂಭಿಸಲು ಜಿಲ್ಲಾಡಳಿತವು ಕ್ರಮ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.