ಡಂಬಳ: ‘ಆರ್.ಎಸ್.ಎಸ್ ಹಾಗೂ ಬಿಜೆಪಿಯ ಮೂಲ ಉದ್ದೇಶ ಸಂವಿಧಾನ ಬದಲಾಯಿಸಿ ಸಮಾನ ನಾಗರಿಕ ಕಾನೂನು ಜಾರಿಗೆ ತರುವುದಾಗಿದೆ. ಬಿಜೆಪಿ ನಾಯಕರ ಬಣ್ಣದ ಮಾತಿಗೆ ಮರುಳಾದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಬ್ರಿಟಿಷ ಆಡಳಿತ ಬರಲಿದ್ದು, ಜನರು ಜಾಗೃತರಾಗಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಜಿ.ಎಸ್.ಪಾಟೀಲ ನುಡಿದರು.
ಇಲ್ಲಿನ ತೋಂಟದಾರ್ಯ ಕಲಾಭವನದ ಆವರಣದಲ್ಲಿ ಶನಿವಾರ ಮುಂಡರಗಿ ತಾಲೂಕ ಬ್ಲಾಕ ಕಾಂಗ್ರೇಸ್ ಸಮಿತಿ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ದೇಶದ ಪ್ರತಿಯೊಂದು ಜಾತಿ ಧರ್ಮದವರು ನೆಮ್ಮದಿಯ ಜೀವನ ಕಳೆಯಬೇಕೆಂದರೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಆಡಳಿದಲ್ಲಿರಬೇಕು. ದೇಶದಲ್ಲಿ ಯಾವುದೇ ಸಮಾಜಕ್ಕೆ ಗಂಡಾಂತರ ಬಂದರೆ ಆ ಸಮುದಾಯ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ’ ಎಂದರು.
‘ಪಕ್ಷದ ಎಲ್ಲಾ 22 ಮುಂಚೂಣಿ ಘಟಕಗಳ ಪದಾಧಿಕಾರಿಗಳು ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ತಳಹಂತದಿಂದ ಪಕ್ಷವನ್ನು ಸಂಘಟಿಸಬೇಕು’ ಎಂದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ‘ನೀರಾವರಿ, ಕೃಷಿ, ಹೈನುಗಾರಿಕೆ, ಕೈಗಾರಿಕೆಗಳ ಸ್ಥಾಪನೆ, ಮಾಹಿತಿ ತಂತ್ರಜ್ಞಾನ, ಶಿಕ್ಷಣ ಕ್ಷೇತ್ರ ಸೇರಿದಂತೆ ದೇಶ ಇವತ್ತು ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ’ ಎಂದರು.
‘ಬಿಜೆಪಿಯ ಬಣ್ಣದ ಮಾತಿಗೆ ಮರುಳಾಗಬಾರದು. ಪ್ರತಿಯೊಂದು ವಸ್ತುಗಳ ದರ ಏರಿಕೆಯಿಂದಾಗಿ ಜೀವನ ನಿರ್ವಹಣೆಯೇ ಕಷ್ಟವಾಗುತ್ತಿದ್ದು, ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು’ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸುಜಾತಾ ಎನ್. ದೊಡ್ಡಮನಿ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನೀಲಮ್ಮ ಬೋಳನ್ನವರ ಮಾತನಾಡಿದರು.
ಕಾರ್ಯಕರ್ತರಆಕ್ರೋಶ:
ರೋಣ ಮತಕ್ಷೇತ್ರದ ವ್ಯಾಪ್ತಿಗೆ ಡಂಬಳ ಹೋಬಳಿ 28 ಗ್ರಾಮಗಳು ಬರುತ್ತವೆ. ಮುಂಡರಗಿ ಬ್ಲಾಕ್ ಕಾಂಗ್ರೆಸ್ ಘಟಕದಲ್ಲಿ ಡಂಬಳ ಹೋಬಳಿ ಸೇರ್ಪಡೆ ಮಾಡಿದ್ದರಿಂದ ನಮಗೆ ಬಹಳಷ್ಟು ಅನ್ಯಾಯವಾಗುತ್ತಿದೆ. ಪ್ರತ್ಯೇಕವಾಗಿ ಡಂಬಳ ಬ್ಲಾಕ್ ಕಾಂಗ್ರೆಸ್ ಘಟಕ ರಚನೆ ಮಾಡಬೇಕು ಎಂದು ವಿವಿಧ ಗ್ರಾಮಗಳ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾ ಘಟಕದ ಅಧ್ಯಕ್ಷರ ಎದುರು ಬೇಡಿಕೆ ಮಂಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ವಿರ್.ಆರ್.ಗುಡಿಸಾಗರ, ಬ್ಲಾಕ್ ಕಾಂಗ್ರೆಸ್ ಘಟಕದ ರಾಮಚಂದ್ರ ಕಲಾಲ,ಹೇಮಂತಗೌಡ ಪಾಟೀಲ, ಬಸವರಾಜ ಮುಂಡವಾಡ, ರುದ್ರಗೌಡ ಪಾಟೀಲ್, ಎಸ್.ಡಿ.ಮಕಾಂದಾರ, ಕುಮಾರಸ್ವಾಮಿ ಹಿರೇಮಠ, ಜ್ಯೋತಿ ಕುರಿಯವರ, ಶೋಭಾ ಮೇಟಿ, ಅಶೋಕ ಮಂದಾಲಿ, ಬಸವರಾಜ ನವಲಗುಂದ, ವಿ.ಟಿ.ಮೇಟಿ, ಮರಿಯಪ್ಪ ಸಿದ್ದಣ್ಣವರ, ಬಸವರಡ್ಡಿ ಬಂಡಿಹಾಳ, ಬಸವರಾಜ ಪೂಜಾರ, ಪುಲಿಕೇಶಗೌಡ ಪಾಟೀಲ, ಕುಬೇರಪ್ಪ ಕೊಳ್ಳಾರ, ಅಮರೇಶ ಹಿರೇಮಠ, ಬಾಬುಸಾಬ್ ಸರ್ಕವಾಸ, ಜಾಕೀರ್ ಮೂಲಿಮನಿ, ಅಶೋಕ ಕಬ್ಬೇರಳ್ಳಿ, ಪ್ರಕಾಶ ಸಜ್ಜನರ, ನಾಗರಾಜ ಸಜ್ಜನರ, ಶರಣು ಬಂಡಿಹಾಳ ಸೇರಿದಂತೆ 22 ಮುಂಚೂಣಿ ಘಟಕಗಳ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿಶ್ವನಾಥ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.