ADVERTISEMENT

ಗದಗ ಅತಿರುದ್ರ ಮಹಾಯಜ್ಞ: ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಕೆ– ಜೆ.ವಿ.ಪಠಾಣ್

ಅನುಮತಿ ಪಡೆಯದೇ ಅತಿರುದ್ರ ಮಹಾಯಜ್ಞ ಕಾರ್ಯಕ್ರಮ ಆಯೋಜನೆ: ಆರೋಪ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 3:17 IST
Last Updated 7 ನವೆಂಬರ್ 2025, 3:17 IST
<div class="paragraphs"><p>ಬಂಟ್ವಾಳ ತಾಲ್ಲೂಕಿನ ಮಂಚಿ ಗ್ರಾಮದ ಮೋಂತಿಮಾರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾ ಪವಮಾನ ಯಾಗ, ಶ್ರೀರಾಮತಾರಕ ಯಜ್ಞ ನಡೆಯಿತು</p></div>

ಬಂಟ್ವಾಳ ತಾಲ್ಲೂಕಿನ ಮಂಚಿ ಗ್ರಾಮದ ಮೋಂತಿಮಾರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾ ಪವಮಾನ ಯಾಗ, ಶ್ರೀರಾಮತಾರಕ ಯಜ್ಞ ನಡೆಯಿತು

   

ಗದಗ: ‘ನಗರದಲ್ಲಿ ನ.11ರಿಂದ 18ರ ವರೆಗೆ ನಡೆಸಲು ಉದ್ದೇಶಿಸಿರುವ ಅತಿರುದ್ರ ಮಹಾಯಜ್ಞಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಜಾಗದ ಮಾಲೀಕರ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸುವುದಕ್ಕೆ ಆಕ್ಷೇಪ ಇದೆ. ಈ ಸಂಬಂಧ ನ.3ರಂದು 35 ಮಂದಿ ವಿರುದ್ಧ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಲಾಗಿದೆ’ ಎಂದು ವಕೀಲ ಜೆ.ವಿ. ಪಠಾಣ್‌ ತಿಳಿಸಿದರು.

‘10.20 ಎಕರೆ ಜಾಗದ ವಿಚಾರ ಈಗ ನ್ಯಾಯಾಲಯದಲ್ಲಿದೆ. ಅಲ್ಲಿ ಯಾವುದೇ ಕಾರ್ಯಕ್ರಮ ಮಾಡಬಾರದು ಎಂದು ಕೋರ್ಟ್‌ ತಡೆಯಾಜ್ಞೆ ಇದೆ. ಹೀಗಿದ್ದರೂ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ADVERTISEMENT

‘ಜಾಗಕ್ಕೆ ಸಂಬಂಧಿಸಿದಂತೆ ತಕರಾರು ನ್ಯಾಯಾಲಯದಲ್ಲಿ ಇರುವುದರಿಂದ ಇಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಬಾರದು ಎಂದು ಗದಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದೆವು. ಆದರೆ, ಈ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಹಿಂಬರಹ ನೀಡಿದ್ದಾರೆ’ ಎಂದು ತಿಳಿಸಿದರು.

‘ಈ ಹಿಂದೆ ಈ ಮೈದಾನದಲ್ಲಿ ಹಲವು ಕಾರ್ಯಕ್ರಮಗಳು ನಡೆದಿದ್ದು, ಅದಕ್ಕೆ ಬಾಡಿಗೆ ರೂಪದಲ್ಲಿ ರಾಘವೇಂದ್ರ ಕಬಾಡಿ ಅವರಿಗೆ ಹಣ ಸಂದಾಯವಾಗಿದೆ. ಈಗ ಇವರು ಅನುಮತಿ ಪಡೆಯದೇ ಕಾರ್ಯಕ್ರಮ ಮಾಡಲು ಮುಂದಾಗಿರುವುದು ಏಕೆ’ ಎಂದು ಪ್ರಶ್ನಿಸಿದರು.

‘ಈ ಕಾರಣಕ್ಕೆ ನವೆಂಬರ್‌ 3ರಂದು ರಾಘವೇಂದ್ರ ಕಬಾಡಿ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದಾರೆ. ನವೆಂಬರ್‌ 10ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ’ ಎಂದು ತಿಳಿಸಿದರು.

ರಾಘವೇಂದ್ರ ಕಬಾಡಿ ಮಾತನಾಡಿ, ‘ಯಾಗಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ದೇವರ ಕಾರ್ಯಕ್ರಮದ ನೆಪದಲ್ಲಿ ನಮ್ಮ ಜಾಗ ಕಬಳಿಸುವ ಹುನ್ನಾರ ಇದರ ಹಿಂದೆ ಅಡಗಿದೆ. ಹಾಗಾಗಿ, ನಾವು ಕಿರಣ್‌ ಭೂಮಾ, ಸದಾಶಿವಯ್ಯ ಮದರಿಮಠ, ಎಸ್‌.ಎಚ್‌.ಶಿವನಗೌಡ, ರವಿ ದಂಡಿನ, ವೆಂಕಟೇಶ ಕುಲಕರ್ಣಿ ಸೇರಿದಂತೆ 35 ಮಂದಿ ವಿರುದ್ಧ ದೂರು ನೀಡಿದ್ದೇವೆ’ ಎಂದು ತಿಳಿಸಿದರು.

ಕೌಸಲ್ಯಾಬಾಯಿ ಕಬಾಡಿ, ಮಂಜುಳಾಬಾಯಿ ಕಲಬುರಗಿ, ಅನಿತಾ, ಮುಕ್ತಾಬಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.