ADVERTISEMENT

ಆರೋಗ್ಯವಂತರಿಂದ ಸ್ವಸ್ಥ ಸಮಾಜ ನಿರ್ಮಾಣ: ಕುಲಪತಿ ಡಾ. ಬಿ.ಸಿ.ಭಗವಾನ್‌

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 6:59 IST
Last Updated 12 ಅಕ್ಟೋಬರ್ 2025, 6:59 IST
ಗದಗ ಜಿಲ್ಲೆಯ ಮೆಡಿಕಲ್, ಫಾರ್ಮಸಿ, ನರ್ಸಿಂಗ್, ಆಯುರ್ವೇದ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ನಡೆದ ಅಂಗಾಂಗದಾನ ಮತ್ತು ನಶಾಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು
ಗದಗ ಜಿಲ್ಲೆಯ ಮೆಡಿಕಲ್, ಫಾರ್ಮಸಿ, ನರ್ಸಿಂಗ್, ಆಯುರ್ವೇದ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ನಡೆದ ಅಂಗಾಂಗದಾನ ಮತ್ತು ನಶಾಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು   

ಗದಗ: ‘ಸ್ವಸ್ಥ ಸಮಾಜ ನಿರ್ಮಾಣ ನಮ್ಮೆಲ್ಲರ ಆದ್ಯತೆಯಾಗಬೇಕು. ಆರೋಗ್ಯವಂತ ಯುವಕರು ಮಾತ್ರ ಸ್ವಸ್ಥ ಸಮಾಜ ಕಟ್ಟಬಲ್ಲರು. ಹೀಗಾಗಿ ಯುವಕರನ್ನು ಆರೋಗ್ಯಪೂರ್ಣ ಜೀವನದತ್ತ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ.ಭಗವಾನ್ ಹೇಳಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಅದರ ಅಂಗ ಸಂಸ್ಥೆಗಳಾದ ಗದಗ ಜಿಲ್ಲೆಯ ಮೆಡಿಕಲ್, ಫಾರ್ಮಸಿ, ನರ್ಸಿಂಗ್, ಆಯುರ್ವೇದ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ನಡೆದ ಅಂಗಾಂಗದಾನ ಮತ್ತು ನಶಾಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ವಿದ್ಯಾರ್ಥಿಗಳನ್ನು ಹಾಗೂ ವೈದ್ಯಕೀಯ ವೃತ್ತಿಪರರನ್ನು ಗಮನದಲ್ಲಿ ಇಟ್ಟುಕೊಂಡು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ನಶಾಮುಕ್ತ ಭಾರತ ಹಾಗೂ ಅಂಗಾಂಗ ದಾನ ಸೇರಿದಂತೆ ಹಲವಾರು ಅಭಿಯಾನಗಳನ್ನು ರಾಜ್ಯವ್ಯಾಪಿಯಾಗಿ ಹಮ್ಮಿಕೊಳ್ಳಲು ಮುಂದಾಗಿದೆ. ಈ ಪ್ರಯತ್ನವನ್ನು ಗದಗ ಜಿಲ್ಲೆಯಿಂದ ಆರಂಭಿಸುತ್ತಿರುವುದು ಸಂತಸ ತಂದಿದೆ’ ಎಂದರು.

ADVERTISEMENT

‘ದೇಶದಲ್ಲಿ ಕಳೆದ ವರ್ಷ ಸುಮಾರು 17ರಿಂದ 18 ಸಾವಿರ ಅಂಗಾಂಗ ಕಸಿ ಮಾಡಲಾಗಿದೆ. ಆದರೆ, ಅಂಗಾಂಗ ಕಸಿಗಾಗಿ ಕಾಯುತ್ತಿರುವ ರೋಗಿಗಳ ಸಂಖ್ಯೆ 2ಲಕ್ಷಕ್ಕೂ ಅಧಿಕವಾಗಿದೆ. ಹೆಚ್ಚು ಹೆಚ್ಚು ಜನರು ಅಂಗಾಂಗ ದಾನ ಮಾಡಲು ಮುಂದೆ ಬರಬೇಕು. ಅದಕ್ಕೆ ನಾವು ಪ್ರೇರಣೆಯಾಗಬೇಕು ಎನ್ನುವುದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆಶಯವಾಗಿದೆ. ಎಲ್ಲರೂ ಈ ಬಗ್ಗೆ ಮಾಹಿತಿ ತಿಳಿದುಕೊಂಡು, ತಮ್ಮವರಲ್ಲಿಯೂ ಜಾಗೃತಿ ಮೂಡಿಸಬೇಕು. ಸ್ನೇಹಿತರು, ಬಂಧುಗಳು, ಕುಟುಂಬ ಹಾಗೂ ಪರಿಚಿತರನ್ನು ಅಂಗಾಂಗ ದಾನಕ್ಕೆ ಪ್ರೇರೇಪಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ‘ಶೇ 10ರಷ್ಟು ಯುವಜನರು ನಶೆಯ ಕಪಿಮುಷ್ಠಿಯಲ್ಲಿ ಸಿಲುಕಿರುವುದು ಕಳವಳಕಾರಿ. ಇದು ಒಬ್ಬ ವಿದ್ಯಾರ್ಥಿಯನ್ನು ಮಾತ್ರವಲ್ಲ, ಅವನ ಕುಟುಂಬ, ಸಮಾಜ ಹಾಗೂ ಇಡೀ ದೇಶವನ್ನೇ ಸಂಕಷ್ಟಕ್ಕೆ ದೂಡುವಂತಹ ಸಂಗತಿ. ಶಿಕ್ಷಣ ಸಂಸ್ಥೆಗಳು, ಕುಟುಂಬಗಳು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದರ ವಿರುದ್ಧ ಹೋರಾಡಬೇಕಿದೆ’ ಎಂದು ಹೇಳಿದರು.

‘ಎಲ್ಲ ವಿದ್ಯಾರ್ಥಿಗಳು, ಯುವಜನರು, ಪೋಷಕರು ಹಾಗೂ ಅಧ್ಯಾಪಕ ವರ್ಗದವರು ‘ನಾನು ನಶೆಯ ಗುಲಾಮನಾಗುವುದಿಲ್ಲ’ ಎಂದು ಪ್ರತಿಜ್ಞೆ ಕೈಗೊಳ್ಳಬೇಕು. ಹಾಗೆಯೇ ಸ್ನೇಹಿತರನ್ನು, ಬಂಧುಗಳನ್ನು ನಶೆಯ ಜಗತ್ತಿಗೆ ಪ್ರವೇಶಿಸದಂತೆ ತಡೆಯಬೇಕು. ದುಃಶ್ಚಟಗಳ ಬಳಿ ಸಾರದಂತೆ ಸ್ನೇಹಿತರನ್ನು ತಡೆಯುವುದು ಅಥವಾ ದುಶ್ಚಟಗಳಿಂದ ಅವರನ್ನು ಮುಕ್ತಗೊಳಿಸುವುದು ಸ್ನೇಹಿತರಿಗೆ ನೀವು ಕೊಡುವ ಬಹುದೊಡ್ಡ ಉಡುಗೊರೆ’ ಎಂದು ಹೇಳಿದರು.

ಕೆ.ಎಚ್.ಪಾಟೀಲ ಕ್ರೀಡಾಂಗಣದಿಂದ ಆರಂಭವಾದ ವಾಕಥಾನ್ ಗಾಂಧಿ ಸರ್ಕಲ್ ಮೂಲಕ ಹಳೆ ಡಿ.ಸಿ ಕಚೇರಿ ಸರ್ಕಲ್ ವರೆಗೆ ಸಾಗಿತು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಎಚ್.ಕೆ.ಪಾಟೀಲ ಸೇವಾ ತಂಡದ ಅಧ್ಯಕ್ಷ ಪ್ರಭು ಎಲ್.ಬುರಬುರೆ, ಡಿಎಚ್‌ಒ ಡಾ. ಎಸ್.ಎಸ್.ನೀಲಗುಂದ , ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಕಿರಣ ಕುಳಗೇರಿ, ಡಾ. ಜೀವನ್ನವರ್, ಸೆನೆಟ್ ಸದಸ್ಯರಾದ ಡಾ. ವೀರೇಶ ಹಂಚಿನಾಳ, ಡಾ. ಜಗದೀಶ ಕೋನರೆಡ್ಡಿ, ಡಾ. ಸಂಕನಗೌಡ ಪಾಟೀಲ್, ಡಾ. ಸಂತೋಷ ಇಂಡಿ ಹಾಜರಿದ್ದರು.

ಗದಗ ಜಿಲ್ಲೆಯ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು.

ದೇಶದ ಭವಿಷ್ಯ ನಿರ್ಧರಿಸುವ ಯುವಕರನ್ನು ನಶೆಯ ಹಿಡಿತದಿಂದ ಆಚೆ ತಂದರೆ ನಿಶ್ಚಯವಾಗಿ ದೇಶದ ಅಭಿವೃದ್ಧಿ ಆಗುತ್ತದೆ. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯವು ನಶಾಮುಕ್ತ ಕ್ಯಾಂಪಸ್ ನಿರ್ಮಿಸುವ ಧ್ಯೇಯೋದ್ದೇಶ ಹೊಂದಿದೆ
ಡಾ. ಬಿ.ಸಿ.ಭಗವಾನ್ ಕುಲಪತಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ
ಗದಗ ಜಿಲ್ಲೆಯನ್ನು ನಶೆಮುಕ್ತ ಮಾಡಲು ಎಲ್ಲರೂ ಪಣ ತೊಡಬೇಕಿದೆ. ರಾಜ್ಯದಾದ್ಯಂತ ನಶಾಮುಕ್ತ ಕ್ಯಾಂಪಸ್ ನಿರ್ಮಿಸುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಯತ್ನಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ
ಎಚ್.ಕೆ.ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ
ಅಂಗಾಂಗದಾನ ಗದಗ ಜಿಲ್ಲೆಗೆ 4ನೇ ಸ್ಥಾನ
‘ಅಂಗಾಂಗ ದಾನದಲ್ಲಿ ಗದಗ ಜಿಲ್ಲೆ 4ನೇ ಸ್ಥಾನದಲ್ಲಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ’ ಎಂದು ಸಚಿವ ಎಚ್‌.ಕೆ.ಪಾಟೀಲ ಹೇಳಿದರು. ‘20ನೇ ಸ್ಥಾನದಲ್ಲಿದ್ದ ಗದಗ ಜಿಲ್ಲೆ 4ನೇ ಸ್ಥಾನಕ್ಕೆ ಹೋಗಲು ಜಿಲ್ಲೆಯ ಜನರ ಒಟ್ಟು ಪ್ರಯತ್ನ ಕಾರಣವಾಗಿದೆ. ಅಂಗಾಂಗ ದಾನದ ಬಗ್ಗೆ ಗದಗ ಜಿಲ್ಲೆಯಲ್ಲಿ ಚಳವಳಿಯ ರೂಪದ ಜಾಗೃತಿ ಮೂಡಿಸಿದ ಕೀರ್ತಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ’ ಎಂದರು. ಕುಲಪತಿ ಡಾ. ಬಿ.ಸಿ.ಭಗವಾನ್ ಅವರಿಗೆ ಗದುಗಿನ ಮೇಲೆ ಹೆಚ್ಚು ಪ್ರೀತಿ. ಗದಗ ಜಿಲ್ಲೆಯ ಸಹಕಾರ ಕ್ಷೇತ್ರದ ಚಳವಳಿಯಲ್ಲಿ ನಮ್ಮ ತಂದೆ ಕೆ.ಎಚ್.ಪಾಟೀಲ ಹಾಗೂ ಬಿ.ಎಸ್.ವಿಶ್ವನಾಥ್ ಅವರ ಹೆಸರು ಮುಂಚೂಣಿಯಲ್ಲಿವೆ. ಕುಲಪತಿಗಳಾದ ಡಾ. ಬಿ.ಸಿ. ಭಗವಾನ್ ಅವರು ವಿ.ಎಸ್. ವಿಶ್ವನಾಥ್ ಅವರ ಅಳಿಯ. ಈ ನಂಟೇ ಅವರನ್ನು ಗದಗ ಜಿಲ್ಲೆಯ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಲು ಪ್ರೇರಣೆ ನೀಡಿದೆ’ ಎಂದು ತಿಳಿಸಿದರು.
ಹಾಲ್ಟ್ ಸಾಲ್ಟ್ ಅಭಿಯಾನ
ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ ಉಪ್ಪಿನ ಸೇವನೆಗೆ ಕಡಿವಾಣ ಹಾಕಲು ‘ಹಾಲ್ಟ್ ಸಾಲ್ಟ್’ ಅಭಿಯಾನ ಕೈಗೊಳ್ಳಲಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ.ಭಗವಾನ್ ಹೇಳಿದರು. ಉಪ್ಪಿನ ಬಳಕೆಯನ್ನು ಕಡಿಮೆ ಮಾಡಲು ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ. ನಾವು ಪ್ರತಿದಿನ ಶೇ 5ರಷ್ಟು ಉಪ್ಪನ್ನು ಬಳಸಬೇಕು ಎನ್ನುವ ಎಚ್ಚರಿಕೆಯನ್ನು ಮೀರಿ ಶೇ 20ರಿಂದ 30ರಷ್ಟು ಹೆಚ್ಚು ಪ್ರಮಾಣದ ಉಪ್ಪನ್ನು ಆಹಾರದಲ್ಲಿ ಬಳಸುತ್ತೇವೆ. ಇದರಿಂದ ಜನರಲ್ಲಿ ಅದರಲ್ಲೂ ಮುಖ್ಯವಾಗಿ ಯುವಸಮುದಾಯದಲ್ಲಿ ಬ್ರೈನ್‌ ಸ್ಟ್ರೋಕ್ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಅಧಿಕ ರಕ್ತದೊತ್ತಡದಂತಹ ಜೀವನಶೈಲಿ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.