
ಗದಗ: ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಬಿಜೆಪಿ ಸರ್ಕಾರಗಳು ಸರಣಿ ದಾಳಿಗಳನ್ನು ಮಾಡುತ್ತಾ ಬಂದಿವೆ ಎಂದು ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಆರೋಪಿಸಿದರು.
ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿಯ ಆಶ್ರಯದಲ್ಲಿ ನಗರದ ಗಂಗಿಮಡಿಯಲ್ಲಿರುವ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಎಸ್.ಜೆ.ಕೆ ಸಂಘಟನೆಯ ಉದ್ದೇಶಗಳು ಹಾಗೂ ಪ್ರಸಕ್ತ ಸಂದರ್ಭದಲ್ಲಿ ಸ್ಲಂ ಜನರ ಸಂಘಟನೆ ಬಲವರ್ಧನೆ ಕುರಿತು ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ನೆಪ್ಪದಲ್ಲಿ ದೇಶದ ಲಕ್ಷಾಂತರ ಜನರ ಮತದಾನದ ಹಕ್ಕನೇ ಕಸಿಯುವ ಹುನ್ನಾರವನ್ನು ಬಿಜೆಪಿ ನಡೆಸುತ್ತಿದೆ. ಇದೊಂದು ಸಂವಿಧಾನ ವಿರೋಧಿ ನಡೆ. ಇದರಿಂದಾಗಿ ದೇಶದ ಲಕ್ಷಾಂತರ ದುರ್ಬಲ ವರ್ಗದ ಜನ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್. ಮಾನ್ವಿ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಅವರು ಹಾಕಿ ಕೊಟ್ಟ ಹೋರಾಟದ ಹೆಜ್ಜೆಯನ್ನು ಸ್ವಾರ್ಥ ರಹಿತವಾಗಿ ನಗರ ವಂಚಿತ ಸಮುದಾಯಗಳ ಮತ್ತು ಮಹಿಳೆಯರ ಧ್ವನಿಯಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಗದಗ ಜಿಲ್ಲಾ ದಲಿತ ಸಂಘರ್ಸ ಸಮಿತಿ ಸಂಚಾಲಕರಾದ ವೆಂಕಟೇಶಯ್ಯ, ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೆಹಬೂಬಸಾಬ ಬಳ್ಳಾರಿ, ಶರಣಪ್ಪ ಸೂಡಿ, ಮೆಹರುನಿಸಾ ಡಾಲಾಯತ, ವೆಂಕಟೇಶ ಬಿಂಕದಕಟ್ಟಿ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲ್, ಸಾಕ್ರುಬಾಯಿ ಗೋಸಾವಿ, ವಿಶಾಲಕ್ಷಿ ಹಿರೇಗೌಡ್ರ, ಮೈಮುನ ಬೈರಕದಾರ, ಗೌಸಸಾಬ ಅಕ್ಕಿ, ಮೆಹಬೂಬ ಮುಲ್ಲಾ, ದಾದು ಗೋಸಾವಿ, ಮಕ್ತುಮಸಾಬ ಮುಲ್ಲಾನವರ ಮಲ್ಲೇಶಪ್ಪ ಕಲಾಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.