ADVERTISEMENT

ಗದಗ | ಕಬ್ಬು ಇಳುವರಿ ಪರಿಶೀಲನೆಗೆ ತಂಡ ರಚನೆ

ರೈತರಿಗೆ ಅನುಕೂಲವಾಗುವಂತೆ ಅಗತ್ಯ ಸೂಚನೆಗಳನ್ನು ನೀಡಿ- ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 15:59 IST
Last Updated 9 ನವೆಂಬರ್ 2023, 15:59 IST
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಮಾತನಾಡಿದರು
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಮಾತನಾಡಿದರು   

ಗದಗ: ‘ಜಿಲ್ಲೆಯಲ್ಲಿ ಕಬ್ಬು ಬೆಳೆದ ಪ್ರದೇಶಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಲು ಹಾಗೂ ಕಬ್ಬಿನ ಇಳುವರಿ ಕುರಿತು ಪರಿಶೀಲನೆ ನಡೆಸಲು ತಂಡ ರಚಿಸಲಾಗಿದ್ದು, ತಂಡದವರು ನಿಗದಿತ ಸಮಯದಲ್ಲಿಯೇ ಕಬ್ಬು ಬೆಳೆದ ಪ್ರದೇಶಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕಬ್ಬಿನ ಇಳುವರಿ ಪರಿಶೀಲನೆ ಕಾಲಕ್ಕೆ ಸಕ್ಕರೆ ಕಾರ್ಖಾನೆಯವರು ಹಾಜರಿರುವುದು ಕಡ್ಡಾಯವಾಗಿದೆ. ಕಬ್ಬು ಕಟಾವು ಪ್ರಕ್ರಿಯೆಯನ್ನು ಜೇಷ್ಠತಾ ಆಧಾರದ ಮೇಲೆ ನಡೆಸುವ ಕುರಿತು ಕ್ರಮ ಕೈಗೊಳ್ಳಬೇಕು. ಸಕ್ಕರೆ ಕಾರ್ಖಾನೆಯವರು ತಂಡದ ಮುಖ್ಯಸ್ಥರಿಗೆ ಜೇಷ್ಠತಾ ಪಟ್ಟಿ ಸಲ್ಲಿಸಬೇಕು. ಕಬ್ಬು ಕಟಾವು ಸಮಯದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಗ್ಯಾಂಗ್‌ಮನ್‍ಗಳು, ಕೂಲಿಕಾರರು, ಸಾಗಾಣಿಕೆದಾರರಿಂದ ಯಾವುದೇ ತೊಂದರೆಗಳಾಗದಂತೆ ಅಗತ್ಯ ಸೂಚನೆ ನೀಡಬೇಕು. ಕಬ್ಬು ಬೆಳೆಗೆ ರೋಗದ ಭೀತಿ ಇರುವುದರಿಂದ ತಜ್ಞರೊಂದಿಗೆ ಸಮಾಲೋಚಿಸಿ ಅಗತ್ಯ ವೈಜ್ಞಾನಿಕ ಸಲಹೆಗಳನ್ನು ನೀಡಬೇಕು. ಕಬ್ಬು ಬೆಳೆಯ ಕಟಾವು ಪ್ರಕ್ರಿಯೆ ಪ್ರಾರಂಭದಿಂದ ಮುಗಿಯುವವರೆಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ಸೂಚಿಸಿದರು.

ADVERTISEMENT

ಕಬ್ಬು ಕಟಾವು ಪ್ರಕ್ರಿಯೆಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣದ ಆಮಿಷವೊಡ್ಡಿ ಜೇಷ್ಠತಾ ಪ್ರಕ್ರಿಯೆ ಬದಲಿಸುವ ಸಂಭವನೀಯತೆ ತಡೆಗಟ್ಟಬೇಕು. ಕಟಾವು ಸಮಯದಲ್ಲಿ ರೈತರೊಂದಿಗೆ ಹಾಗೂ ಗ್ಯಾಂಗ್‍ಮನ್‍ಗಳೊಂದಿಗೆ ಮಾತನಾಡಿಕೊಂಡು ರೈತರಿಗೆ ಉಂಟಾಗಬಹುದಾದ ತೊಂದರೆ ಹಾಗೂ ನಷ್ಟ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಗಂಗಪ್ಪ ಎಂ. ಮಾತನಾಡಿ, ‘ಪ್ರಸಕ್ತ ಸಾಲಿನ ಸಕ್ಕರೆ ಹಂಗಾಮಿಗೆ ಕೇಂದ್ರ ಸರ್ಕಾರದಿಂದ ನ್ಯಾಯಯುತ ಮತ್ತು ಲಾಭದಾಯಕ (ಎಫ್‌ಆರ್‌ಪಿ) ದರ ನಿಗದಿಪಡಿಸಿದ್ದು, ಕಬ್ಬು ಅರೆಯುವ ಮುನ್ನ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಹಾಗೂ ಎಫ್‌ಆರ್‌ಪಿ ದರ ಹೆಚ್ಚಿಸುವ ಹಾಗೂ ಇತರೆ ವಿಷಯಗಳ ಕುರಿತು ಸಕ್ಕರೆ ಕಾರ್ಖಾನೆಯ ಮಂಡಳಿಯವರ ಹಾಗೂ ಕಬ್ಬು ಬೆಳೆಗಾರರ ಸಭೆ ನಡೆಸಲಾಗಿದೆ ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ವೆಂಕಟೇಶ ನಾಯ್ಕ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಎಪಿಎಂಸಿಯ ಸಹಾಯಕ ನಿರ್ದೇಶಕ ಎಂ.ಆರ್.ನದಾಫ್, ವಿಜಯನಗರ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಪರಿಶೀಲನೆಗೆ ತಂಡಗಳ ರಚನೆ  ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸಲು ಆಹಾರ ನಿರೀಕ್ಷಕರು ಕಂದಾಯ ನಿರೀಕ್ಷಕರು ಗ್ರಾಮ ಆಡಳಿತ ಅಧಿಕಾರಿ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳನ್ನೊಳಗೊಂಡಂತೆ 4 ತಂಡಗಳನ್ನು ರಚಿಸಲಾಗಿದೆ. ಉಪವಿಭಾಗಾಧಿಕಾರಿ ಜಂಟಿ ಕೃಷಿ ನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಮುಂಡರಗಿ ತಹಶೀಲ್ದಾರರು ಒಂದೊಂದು ತಂಡಗಳಿಗೆ ಮುಖ್ಯಸ್ಥರಾಗಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.