ADVERTISEMENT

ಲಕ್ಷ್ಮೇಶ್ವರ: ಒಣಗುತ್ತಿದ್ದ ಗಿಡಗಳಿಗೆ ಟ್ಯಾಂಕರ್‌ ನೀರಿನ ಆಸರೆ

ರಸ್ತೆಬದಿ ನೆಟ್ಟಿರುವ ಗಿಡಗಳನ್ನು ಉಳಿಸಿಕೊಳ್ಳಲು ಮುಂದಾದ ಅರಣ್ಯ ಇಲಾಖೆ

ನಾಗರಾಜ ಎಸ್‌.ಹಣಗಿ
Published 11 ಮಾರ್ಚ್ 2025, 4:31 IST
Last Updated 11 ಮಾರ್ಚ್ 2025, 4:31 IST
ಲಕ್ಷ್ಮೇಶ್ವರ ತಾಲ್ಲೂಕಿನ ಪುಟಗಾಂವ್‍ಬಡ್ನಿ ಗ್ರಾಮದ ರಸ್ತೆಗುಂಟ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಬೆಳೆಸುತ್ತಿರುವ ಗಿಡಗಳಿಗೆ ನೀರು ಹಾಕುತ್ತಿರುವ ಸಿಬ್ಬಂದಿ
ಲಕ್ಷ್ಮೇಶ್ವರ ತಾಲ್ಲೂಕಿನ ಪುಟಗಾಂವ್‍ಬಡ್ನಿ ಗ್ರಾಮದ ರಸ್ತೆಗುಂಟ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಬೆಳೆಸುತ್ತಿರುವ ಗಿಡಗಳಿಗೆ ನೀರು ಹಾಕುತ್ತಿರುವ ಸಿಬ್ಬಂದಿ   

ಲಕ್ಷ್ಮೇಶ್ವರ: ಗಿಡ–ಮರಗಳನ್ನು ಬೆಳೆಸಲು ಸರ್ಕಾರ ಪ್ರತಿವರ್ಷ ಕೋಟ್ಯಂತರ ಹಣ ಖರ್ಚು ಮಾಡುತ್ತದೆ. ಆದರೆ, ಬಹುತೇಕ ಕಡೆಗಳಲ್ಲಿ ಗಿಡಮರಗಳನ್ನು ನೆಟ್ಟ ಬಳಿಕ ಅರಣ್ಯ ಇಲಾಖೆ ಅವುಗಳ ಪೋಷಣೆ ಮಾಡುವುದನ್ನು ಮರೆಯುತ್ತದೆ. ಹೀಗಾಗಿ, ‘ಗಿಡ ಬೆಳೆಸಿ, ನಾಡು ಉಳಿಸಿ’ ಎಂಬ ಘೋಷವಾಕ್ಯ ಕೇವಲ ಘೋಷಣೆಯಾಗಿಯೇ ಉಳಿಯುತ್ತದೆ.

ಆದರೆ ಈಗ, ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಸಾಮಾಜಿಕ ಅರಣ್ಯ ಇಲಾಖೆ ತಾನೇ ಹಚ್ಚಿದ ಗಿಡ ಮರಗಳನ್ನು ಒಣಗಲು ಬಿಡದೆ ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ಜನರಲ್ಲಿ ಮೆಚ್ಚುಗೆ ಮೂಡಿಸಿದೆ.

ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ರಸ್ತೆಯ ಎರಡೂ ಬದಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಬೆಳೆಸುತ್ತಿರುವ ಗಿಡಗಳನ್ನು ಸುಡು ಬಿಸಿಲಿನಿಂದ ಉಳಿಸಿಕೊಳ್ಳಲು ಮುಂದಾಗಿದೆ. ರಸ್ತೆಗಳ ಎರಡೂ ಬದಿಯಲ್ಲಿ ಅರಣ್ಯ ಇಲಾಖೆ ಹಚ್ಚಿ ಬೆಳೆಸುತ್ತಿರುವ ಗಿಡಗಳು ಮಳೆಗಾಲದಲ್ಲಿ ಚೆನ್ನಾಗಿ ಇರುತ್ತವೆ. ಆದರೆ ಬೇಸಿಗೆ ಬಂದರೆ ನೀರಿಲ್ಲದೆ ಅವುಗಳ ಮುಖ ಬಾಡುತ್ತದೆ. ಕಷ್ಟಪಟ್ಟು ಬೆಳೆಸುತ್ತಿರುವ ಗಿಡಗಳು ಒಣಗಿ ಹಾಳಾಗಬಾರದು ಎಂಬ ಉದ್ದೇಶದಿಂದ ಇದೀಗ ಟ್ಯಾಂಕರ್ ಮೂಲಕ ಗಿಡಗಳಿಗೆ ನೀರುಣಿಸುವ ಕೆಲಸ ನಡೆಯುತ್ತಿದೆ.

ADVERTISEMENT

ಲಕ್ಷ್ಮೇಶ್ವರ ತಾಲ್ಲೂಕಿನ ಪುಟಗಾಂವ್‍ಬಡ್ನಿ, ಬಟ್ಟೂರು, ಆದರಳ್ಳಿ, ಅಡರಕಟ್ಟಿ, ಸೂರಣಗಿ, ಯತ್ನಳ್ಳಿ ಸೇರಿದಂತೆ ಮತ್ತಿತರ ರಸ್ತೆಗುಂಟ ಬೆಳೆಯುತ್ತಿರುವ ಗಿಡಗಳಿಗೆ ಇಲಾಖೆ ಸಿಬ್ಬಂದಿ ನೀರು ಹಾಕುತ್ತಿದ್ದಾರೆ. ಒಂದು ರಸ್ತೆಯಲ್ಲಿ 900 ಗಿಡಗಳನ್ನು ಬೆಳೆಸಲಾಗುತ್ತಿದ್ದು 14 ರಸ್ತೆಗಳ ಎರಡೂ ಬದಿಯಲ್ಲಿ ಹಚ್ಚಿರುವ ಸಾವಿರಾರು ಗಿಡಗಳಿಗೆ ನೀರು ಉಣಿಸುವ ಕೆಲಸ ಭರದಿಂದ ಸಾಗಿದೆ. ಇಲಾಖೆ ರಸ್ತೆಗುಂಟ ಬೇವು, ಆಲ, ಅರಳಿ, ಸಿಹಿಹುಣಸೆ, ತಪಸಿ, ಹೊಂಗೆ ಸೇರಿದಂತೆ ಅಂದಾಜು ಸಾವಿರಾರು ಗಿಡಗಳನ್ನು ಬೆಳೆಸುತ್ತಿದೆ.

‘ತಾಲ್ಲೂಕಿನಾದ್ಯಂತ ಸಾವಿರಾರು ಗಿಡಗಳನ್ನು ಹೆಚ್ಚಿದ್ದೇವೆ. ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಅವುಗಳನ್ನು ಹಾಳು ಮಾಡುತ್ತಿದ್ದಾರೆ. ಇದರಿಂದ ನಮ್ಮ ಪ್ರಯತ್ನ ವ್ಯರ್ಥವಾಗುತ್ತಿದೆ. ಈಗ ಮಳೆ ಇಲ್ಲದ್ದರಿಂದ ಗಿಡಗಳು ಒಣಗುತ್ತಿದ್ದವು. ಹೀಗಾಗಿ ನೀರು ಹಾಕುತ್ತಿದ್ದೇವೆ. ಗಿಡ ಮರಗಳು ಬೆಳೆಯಬೇಕಾದರೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ’ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ರಂಗಪ್ಪ ಕಂಬಳಿ ತಿಳಿಸಿದರು.

‘ಬೇವಿನ ಗಿಡಗಳು ಸ್ವಲ್ಪ ದೊಡ್ಡವು ಆಗುತ್ತಿದ್ದಂತೆ ಕುರಿಗಾರರು ಅವುಗಳಿಗೆ ಕೊಡಲಿ ಏಟು ಹಾಕುತ್ತಾರೆ. ಇದರಿಂದಾಗಿ ಬೆಳೆಯುವ ಗಿಡ ಹಾಗೆಯೇ ಒಣಗಿ ಹೋಗುತ್ತದೆ. ಈ ಕುರಿತು ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕಾದ ಅಗತ್ಯ ಇದೆ. ಅರಣ್ಯ ಇಲಾಖೆ ಗಿಡಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್‌ನಿಂದ ನೀರು ಹಾಕುತ್ತಿರುವುದು ಶ್ಲಾಘನೀಯ. ಗಿಡಮರಗಳ ರಕ್ಷಣೆಗೆ ಜನರು ಕೂಡ ಇಲಾಖೆಯೊಂದಿಗೆ ಕೈಜೋಡಿಸಬೇಕು’ ಎಂದು ಪರಿಸರಪ್ರೇಮಿ ಶಕ್ತಿ ಹೇಳಿದರು.

ಬೇಸಿಗೆಯಲ್ಲಿ ಗಿಡಗಳನ್ನು ಒಣಗಲು ಬಿಡದೆ ಅವುಗಳಿಗೆ ನೀರು ಹಾಕಿ ಕಾಪಾಡುವ ಕೆಲಸವನ್ನು ಇಲಾಖೆ ವತಿಯಿಂದ ಮಾಡಲಾಗುತ್ತಿದೆ.
ಡಿ.ಬಿ.ಕಾಳೆ ಸಾಮಾಜಿಕ ಅರಣ್ಯ ಇಲಾಖೆ ಉಪವಲಯ ಅರಣ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.