ADVERTISEMENT

ಗದಗ: ಸ್ವಚ್ಛತಾ ಅಭಿಯಾನ ಇತರರಿಗೆ ಮಾದರಿ

ನಮ್ಮ ನಿರ್ಮಲ ನಗರಕ್ಕೆ ಚಾಲನೆ– ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮದಲ್ಲಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 3:27 IST
Last Updated 3 ಅಕ್ಟೋಬರ್ 2021, 3:27 IST
ಗದುಗಿನ ವಿವೇಕಾನಂದ ನಗರದಲ್ಲಿ ಶನಿವಾರ ನಡೆದ ‘ನಮ್ಮ ನಿರ್ಮಲ ನಗರ’ ಹಾಗೂ ‘ನಮ್ಮ ಕೈತೋಟ’ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು
ಗದುಗಿನ ವಿವೇಕಾನಂದ ನಗರದಲ್ಲಿ ಶನಿವಾರ ನಡೆದ ‘ನಮ್ಮ ನಿರ್ಮಲ ನಗರ’ ಹಾಗೂ ‘ನಮ್ಮ ಕೈತೋಟ’ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು   

ಗದಗ: ‘ನಮ್ಮ ನಿರ್ಮಲ ನಗರ ಅಭಿಯಾನದ ಅಂಗವಾಗಿ ನಗರದ ಒಂದು ವಾರ್ಡ್ ಆಯ್ಕೆ ಮಾಡಿಕೊಂಡು, ಅಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಸ್ಥಳೀಯರು ಪಾಲ್ಗೊಳ್ಳುವಂತೆ ಮಾಡಿರುವ ಕಾರ್ಯ ಇತರರಿಗೆ ಮಾದರಿ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಅವಳಿ ನಗರ ಗದಗ- ಬೆಟಗೇರಿಯನ್ನು ಸ್ವಚ್ಛವಾಗಿಡುವ ಸಂಕಲ್ಪದೊಂದಿಗೆ ‘ನಮ್ಮ ನಿರ್ಮಲ ನಗರ’ ಹಾಗೂ ‘ನಮ್ಮ ಕೈತೋಟ’ ಕಾರ್ಯಕ್ರಮಕ್ಕೆ ಗಾಂಧಿ ಜಯಂತಿಯಂದು ನಗರದ 11ನೇ ವಾರ್ಡ್‍ನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಸಚಿವ ಸಿ.ಸಿ.ಪಾಟೀಲ ಮಾತನಾಡಿ, ‘ಸ್ವಚ್ಛ ಹಾಗೂ ಸ್ವಸ್ಥ ಸಮಾಜ ವೈಯಕ್ತಿಕ ಆರೋಗ್ಯದಲ್ಲಿ ಅಷ್ಟೇ ಅಲ್ಲದೇ, ದೇಶದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರವಹಿಸುತ್ತದೆ’ ಎಂದು ಹೇಳಿದರು.

ನಮ್ಮ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಅಭಿವೃದ್ಧಿಪರ ಕಾರ್ಯಗಳಲ್ಲಿ ಪಕ್ಷಾತೀತ ಪರಂಪರೆಗೆ ಒತ್ತು ನೀಡಿ, ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದರು. ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ, ‘ಸ್ವಚ್ಛ ನಗರ ಸಂಕಲ್ಪದೊಂದಿಗೆ ಆರಂಭಿಸಿರುವ ಅಭಿಯಾನ ವರ್ಷಪೂರ್ತಿ ನಡೆಯಲಿದೆ. ಪ್ರತಿ ಭಾನುವಾರ ಬೆಳಿಗ್ಗೆ 7.30ರಿಂದ 9.30ರವರೆಗೆ ಎರಡು ಗಂಟೆಗಳ ಕಾಲ ಶ್ರಮದಾನ ನಡೆಯಲಿದೆ. ರಚನಾತ್ಮಕ ಕಾರ್ಯಗಳಿಗೆ ಜನರ ಬೆಂಬಲ ದೊರೆತಾಗ ಎಲ್ಲವೂ ನಿರಾತಂಕವಾಗಿ ನಡೆಯುತ್ತವೆ’ ಎಂದು ಹೇಳಿದರು.

ADVERTISEMENT

ರಾಮಕೃಷ್ಣ ಮಿಷನ್ ಮತ್ತು ವಿವೇಕಾನಂದ ಆಶ್ರಮದ ಗುರುಗಳಾದ ನಿರ್ಭಯಾನಂದ ಸ್ವಾಮೀಜಿ, ಏಕಗಮ್ಯಾನಂದ ಸ್ವಾಮೀಜಿ, ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು, ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ ಕೌತಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಪ್ರಕಾಶ ಬೊಮ್ಮನಳ್ಳಿ, ಎಲ್.ಡಿ. ಚಂದಾವರಿ, ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ವಿ.ಕೆ.ಗುರುಮಠ, ಕಾಂಗ್ರೆಸ್ ಮುಖಂಡರಾದ ಗುರಣ್ಣ ಬಳಗಾನೂರ, ಪ್ರಭು ಬುರಬುರೆ, ನಗರಸಭೆ ಮಾಜಿ ಉಪಾಧ್ಯಕ್ಷ ಶಂಕರ ಹಾನಗಲ್ಲ, ಮಾಜಿ ಸದಸ್ಯ ಸಿ.ಕೆ.ಮಾಳಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.