
ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪ್ರತಿಭಟನಕಾರರು ಮಂಗಳವಾರ ಕಾಂಗ್ರೆಸ್ ಪ್ರಕಟಿಸಿದ್ದ ಪ್ರಣಾಳಿಕೆ ದಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಹನುಮಂತಗೌಡ ಕಲ್ಮನಿ ಮಾತನಾಡಿ, ‘15 ವರ್ಷಗಳಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಡಿಮೆ ಗೌರವಧನಕ್ಕೆ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರು ಇಂದು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಇದಕ್ಕೆ ಸರ್ಕಾರ ಕೈಗೊಂಡಿರುವ ಅಮಾನವೀಯ, ಅವೈಜ್ಞಾನಿಕ ನೀತಿಯೇ ಕಾರಣ’ ಎಂದು ಕಿಡಿಕಾರಿದರು.
‘2023ರ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವ ಭರವಸೆ ನೀಡಿತ್ತು. ಆದರೆ ಅಧಿಕಾರ ಸಿಕ್ಕ ನಂತರ ಅತಿಥಿ ಉಪನ್ಯಾಸಕರನ್ನು ಮರೆತಿದೆ. ಇಷ್ಟು ವರ್ಷಗಳ ಕಾಲ ದುಡಿದಿರುವ ಅತಿಥಿ ಉಪನ್ಯಾಸಕರ ಸೇವಾಭದ್ರತೆ ವಿಷಯದಲ್ಲಿ ಸರ್ಕಾರ ಉದಾಸೀನ ಧೋರಣೆ ತಾಳುವುದು ಸರಿಯಲ್ಲ’ ಎಂದರು.
‘ಈಗ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯ ಕೌನ್ಸೆಲಿಂಗ್ನ್ನು ತಕ್ಷಣ ನಿಲ್ಲಿಸಬೇಕು. ಸೇವಾನುಭವ ಇರುವ ಅತಿಥಿ ಉಪನ್ಯಾಸಕರ ಸೇವೆಗೆ ಸರ್ಕಾರ ಭದ್ರತೆ ನೀಡಬೇಕು. ಇಲ್ಲದಿದ್ದರೆ ಈ ಹೋರಾಟ ಮತ್ತೊಂದು ನರಗುಂದ ಬಂಡಾಯ ಮಾದರಿ ಆಗಲಿದೆ’ ಎಂದು ಎಚ್ಚರಿಕೆ ನೀಡಿದರು.
ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಮುಂಡರಗಿ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜ ದೇಸಾಯಿ, ಪಂಚಾಕ್ಷರಿ ಗವಾಯಿಗಳ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಎಸ್. ದಂಡತಿ ಬೆಂಬಲ ಸೂಚಿಸಿದರು.
ಮಂಗಳವಾರ ನಡೆದ ಪ್ರಣಾಳಿಕೆ ದಹನ ಹೋರಾಟದಲ್ಲಿ ವಿಜಯಪುರದ ರಾಮನಗೌಡ ಕಲ್ಲಿ, ಬೆಳ್ತಂಗಡಿಯ ಸಂತೋಷಕುಮಾರ, ಧರ್ಮಸ್ಥಳದ ಗಿರೀಶ್ ನಾಯಕ, ಉಡುಪಿಯ ಪವನಕುಮಾರ, ಧಾರವಾಡದ ದಾನೇಶ್ವರಿ, ಶಿರೂರು, ಕುಂದಗೋಳ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭ ಆಗುವುದರೊಳಗೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಬೆಳಗಾವಿಯಲ್ಲಿ ನಡೆಯಲಿರುವ ನಮ್ಮ ಹೋರಾಟ ಸರ್ಕಾರಕ್ಕೆ ನಡುಕ ಹುಟ್ಟಿಸುವುದುನಿಶ್ಚಿತ ಹನುಮಂತಗೌಡ ಕಲ್ಮನಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ
ಅತಿಥಿ ಉಪನ್ಯಾಸಕರು 10ಕ್ಕೂ ಹೆಚ್ಚು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪಾಠ ಹೇಳಿದ್ದಾರೆ. ಆದರೆ ಸರ್ಕಾರ 6 ಸಾವಿರ ಮಂದಿ ಅತಿಥಿ ಉಪನ್ಯಾಸಕರನ್ನು ಹೊರಗಿಟ್ಟು ಕೌನ್ಸೆಲಿಂಗ್ ನಡೆಸುತ್ತಿದೆ. ತಕ್ಷಣವೇ ಈ ಪ್ರಕ್ರಿಯೆ ನಿಲ್ಲಿಸಿ ನಮ್ಮನ್ನು ಮುಂದುವರಿಸಬೇಕುಚಂದ್ರಕಾಂತೆ ಶಿರೋಳೆ ಕಲಬುರಗಿಯ ಅತಿಥಿ ಉಪನ್ಯಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.