ADVERTISEMENT

ಜನರ ನಿರೀಕ್ಷೆಯಂತೆ ಕೆಲಸ ಮಾಡಿ– ಎಚ್‌.ಕೆ.ಪಾಟೀಲ

ರಾಜಕೀಯ ಆಟಾಟೋಪಗಳಿಂದ ಜನರಲ್ಲಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 4:33 IST
Last Updated 11 ಆಗಸ್ಟ್ 2021, 4:33 IST
ಎಚ್‌.ಕೆ.‍‍ಪಾಟೀಲ
ಎಚ್‌.ಕೆ.‍‍ಪಾಟೀಲ   

ಗದಗ: ‘ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಗಂಭೀರ ಸನ್ನಿವೇಶದಲ್ಲಿ ರಾಜಕೀಯ ಆಟಾಟೋಪಗಳಿಗೆ ಅವಕಾಶ ನೀಡದೇ ಸರ್ಕಾರಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಶ್ರದ್ಧೆಯಿಂದ ಕೆಲಸ ಮಾಡಬೇಕು’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಎಚ್.ಕೆ.ಪಾಟೀಲ ಆಗ್ರಹಿಸಿದರು.

ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ಪರಿಸ್ಥಿತಿಯಿಂದ ಜನ ಆಕ್ರೋಶಗೊಂಡಿದ್ದಾರೆ. ವಿವಿಧ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಸಂಭಾವ್ಯ ಮೂರನೇ ಅಲೆ ಕುರಿತಾಗಿ ತಜ್ಞರು ಎಚ್ಚರಿಕೆ
ನೀಡುತ್ತಿದ್ದಾರೆ. ಇಂತಹ ಕಠಿಣ ಸಂದರ್ಭದಲ್ಲಿ ಅತೃಪ್ತ ಸಚಿವರು ಖಾತೆ ಬದಲಿಸಿಕೊಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಗಡುವು ನೀಡಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ವಿಪ್ಲವಗಳನ್ನೆಲ್ಲಾ ಬೇಗ ಬಗೆಹರಿಸಿಕೊಂಡು ಕೋವಿಡ್‌–19 ನಿರ್ವಹಣೆ ಬಗ್ಗೆ ಗಂಭೀರವಾಗಿ ಯೋಚಿಸಬೇಕು’ ಎಂದು ಹೇಳಿದರು.

ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಎಚ್‌.ಕೆ.ಪಾಟೀಲ, ‘ರಾಜಕೀಯ ನಾಯಕರು ಪ್ರಚೋದನ ಕಾರಿ ಹೇಳಿಕೆ ನೀಡುವುದು ರಾಜಕಾರಣ ಕ್ಕೂ ಸರಿಯಲ್ಲ, ಸಮಾಜಕ್ಕೂ ಸರಿಯಲ್ಲ’ ಎಂದು ಹೇಳಿದರು.

ADVERTISEMENT

‘ಇಡಿ, ಐಟಿ, ಸಿಬಿಐನಂತಹ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ರಾಜಕೀಯ ಪ್ರೇರಿತ ದಾಳಿ ನಡೆಸುವ ಮೂಲಕ ಕೇಂದ್ರ ಸರ್ಕಾರ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಜತೆಗೆ ಐಟಿ, ಇಡಿ, ಸಿಬಿಐನ ವಿಶ್ವಾಸಾರ್ಹತೆಯನ್ನೂ ಕಳೆದಿದೆ’ ಎಂದು ಆರೋಪ ಮಾಡಿದರು.

‘ಚುನಾವಣೆ ಪೂರ್ವದಲ್ಲಿ ಬಹಳಷ್ಟು ಕಡೆಗಳಲ್ಲಿ ಬೇರೆ ಬೇರೆ ಪಕ್ಷಗಳ ನಾಯಕರ ಮನೆಗಳ ಮೇಲೆ ಐಟಿ ದಾಳಿ ನಡೆದಿವೆ. ಯಾರ ಮನೆ, ಕಂಪನಿ, ಕಚೇರಿಗಳ ಮೇಲೆ ದಾಳಿ ನಡೆದರೂ ಪಾರದರ್ಶಕತೆ ಕಾಪಾಡಬೇಕು. ದಾಳಿ ಸಂದರ್ಭದಲ್ಲಿ ಏನೇನು ಸಿಕ್ಕಿದವು, ಇಲ್ಲ ಎಂಬುದನ್ನು ಪಟ್ಟಿ ಮಾಡಬೇಕು. ಇದರಿಂದಾಗಿ ಒಂದು ವ್ಯವಸ್ಥೆ ಹಾದಿ ತಪ್ಪುವುದು ತಪ್ಪುತ್ತದೆ’ ಎಂದು ಹೇಳಿದರು.

‘ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ವತಿಯಿಂದ ಇಡೀ ದೇಶದಾದ್ಯಂತ ನಿರಂತರವಾಗಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಿವೆ’ ಎಂದು ಹೇಳಿದರು.

***

ಬಸವರಾಜ ಬೊಮ್ಮಾಯಿ ಸಿಎಂ ಆಗಿರುವುದರಿಂದ ಅಭಿವೃದ್ಧಿ ವಿಚಾರವಾಗಿ ಉತ್ತರ ಕರ್ನಾಟಕದ ಜನ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಸಿಎಂ ಈ ನಿಟ್ಟಿನಲ್ಲಿ ಯೋಚಿಸಲಿ

- ಎಚ್‌.ಕೆ.ಪಾಟೀಲ, ಗದಗ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.