ಗದಗ: ‘ಗ್ಯಾರಂಟಿಗಳಿಂದ ಹಳ್ಳಿಗಳ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ’ಎಂಬ ಹೇಳಿಕೆ ನೀಡುವ ಮೂಲಕ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ದೊಡ್ಡ ಪ್ರಮಾದ ಮಾಡಿದ್ದಾರೆ. ಅವರು ತಕ್ಷಣವೇ ಮಹಿಳೆಯ ಪಾದ ಮುಟ್ಟಿ ಕ್ಷಮೆ ಕೇಳಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ದೊಡ್ಡ ದುರಂತ ಎದುರಿಸಬೇಕಾಗುತ್ತದೆ’ ಎಂದು ಸಚಿವ ಎಚ್.ಕೆ.ಪಾಟೀಲ ಎಚ್ಚರಿಸಿದರು.
‘ಕಾಂಗ್ರೆಸ್ನವರು ಹೇಳಿಕೆ ತಿರುಚಿ ರಾಜಕೀಯ ಮಾಡುತ್ತಿದ್ದಾರೆ ಎಂಬ ಅವರ ಆರೋಪ ಸತ್ಯಕ್ಕೆ ದೂರವಾದುದು. ಇವತ್ತಿನ ದಿನಗಳಲ್ಲಿ ಹಿಟ್ ಆ್ಯಂಡ್ ರನ್ ಆಟ ನಡೆಯುವುದಿಲ್ಲ. ಅವರ ಹೇಳಿಕೆ ರೆಕಾರ್ಡ್ ಆಗಿದೆ. ಅದನ್ನು ನಾವು ತಿರುಚುವುದು ಎಲ್ಲಿಂದ ಬಂತು’ ಎಂದು ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಮಾಜಿ ಮುಖ್ಯಮಂತ್ರಿಯೊಬ್ಬರು ಮಹಿಳೆಯರ ಬಗ್ಗೆ ಆಡಿರುವ ಅಗೌರವದ ಮಾತುಗಳು ರಾಜಕೀಯ ಕ್ಷೇತ್ರದ ಅತ್ಯಂತ ಅವಮಾನಕರ ಹೇಳಿಕೆ’ ಎಂದು ಖಂಡಿಸಿದರು.
‘ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಆತಂಕ ತಂದೊಡ್ಡಿದೆ. ಮಹಿಳೆಯರು ನಮಗೆ ಮತ ಹಾಕುವುದಿಲ್ಲ ಎಂಬ ಭಾವನೆ ಆವರಿಸಿಕೊಂಡಿದೆ. ಈ ಕಾರಣಕ್ಕಾಗಿ ಅವರು ಮಹಿಳೆಯರನ್ನು ಅಪಹಾಸ್ಯ ಮಾಡಿದ್ದಾರೆ. ಮತ್ತೊಬ್ಬರು ಬೆಳಗಾವಿಯಲ್ಲಿ ಮಹಿಳಾ ಸಚಿವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅಮಹಿಳೆಯನ್ನು ಅಪಹಾಸ್ಯ ಮಾಡುವುದು, ಚಾರಿತ್ರ್ಯದ ಬಗ್ಗೆ ಲಘು ಮಾತು ಆಡುವುದು ಅವರಿಗೆ ದುರಂತ ತರುತ್ತವೆ’ ಎಂದು ಎಚ್ಚರಿಸಿದರು.
‘ಈ ವಿಷಯವನ್ನು ಲಘುವಾಗಿ ಪರಿಗಣಿಸಿ ಮುಗಿಸಬಾರದು. ಈ ಸಮಯದಲ್ಲಿ ಚುನಾವಣಾ ಆಯೋಗ ಯಾಕೆ ಸುಮ್ಮನೆ ಕುಳಿತಿದೆಯೋ ಗೊತ್ತಿಲ್ಲ. ತಕ್ಷಣವೇ ಸುಮೊಟೊ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.