ADVERTISEMENT

ನರೇಗಲ್: ಕರ್ತವ್ಯದ ಸಮಯ, ಪ್ರಾಣತ್ಯಾಗದ ಕತೆ ಹೇಳುವ ಲಡಾಯಿ ಕಟ್ಟೆ

ಜನರ ಪ್ರಾಣ ರಕ್ಷಣೆಗೆ ಎದೆಯೊಡ್ಡಿದ ಪೊಲೀಸರು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 26 ಜೂನ್ 2022, 4:31 IST
Last Updated 26 ಜೂನ್ 2022, 4:31 IST
ನರೇಗಲ್ ಸಮೀಪದ ಹಾಲಕೆರೆ ಗ್ರಾಮದಿಂದ ಸಂಗನಾಳ ಕಡೆಗೆ ಹೋಗುವಾಗ ಗಡಿಭಾಗದ ಹೊಲದಲ್ಲಿರುವ ಲಡಾಯಿಕಟ್ಟೆ
ನರೇಗಲ್ ಸಮೀಪದ ಹಾಲಕೆರೆ ಗ್ರಾಮದಿಂದ ಸಂಗನಾಳ ಕಡೆಗೆ ಹೋಗುವಾಗ ಗಡಿಭಾಗದ ಹೊಲದಲ್ಲಿರುವ ಲಡಾಯಿಕಟ್ಟೆ   

ನರೇಗಲ್: ಕರ್ತವ್ಯದ ಸಮಯದಲ್ಲಿ ಜನರ ಪ್ರಾಣ ರಕ್ಷಣೆಗಾಗಿ ನಿಜಾಮನ ಸೈನಿಕರ ಗುಂಡಿನ ದಾಳಿಗೆ ಎದೆಯೊಡ್ಡಿ ಪ್ರಾಣತ್ಯಾಗ ಮಾಡಿದ ಪೊಲೀಸರ ಸ್ಮರಣೆಗಾಗಿ ನಿರ್ಮಿಸಿರುವ ಲಡಾಯಿ ಕಟ್ಟೆ ಮುಂಬೈ ಕರ್ನಾಟಕದ ಗಡಿ ಗ್ರಾಮ ಹಾಲಕೆರೆಯ ಸಂಗನಾಳ ರಸ್ತೆಗೆ ಹೊಂದಿಕೊಂಡಿರುವ ಗಡಿಭಾಗದ ಹೊಲದಲ್ಲಿದೆ.

ಹೈದರಾಬಾದ್‌ ನಿಜಾಮನ ಆಳ್ವಿಕೆಗೆ ಒಳಪಡುತ್ತಿದ್ದ ಪ್ರದೇಶಗಳು ಸ್ವಾತಂತ್ರ್ಯಾನಂತರ ಭಾರತದ ಒಕ್ಕೂಟಕ್ಕೆ ಸೇರುವಲ್ಲಿ ವಿಳಂಬವಾದವು. ಅಖಂಡ ಧಾರವಾಡ ಜಿಲ್ಲೆಯ ಹಾಲಕೆರೆ ಗ್ರಾಮವು ಮುಂಬೈ ಪ್ರಾಂತ್ಯದ ಕಟ್ಟಕಡೆಯ ಗ್ರಾಮವಾಗಿತ್ತು. ಶೇ 80ರಷ್ಟು ಈ ಗ್ರಾಮದ ರೈತರ ಜಮೀನುಗಳು ಹೈದರಾಬಾದ್ ಪ್ರಾಂತ್ಯದ ಗ್ರಾಮಗಳಾದ ಮುಧೋಳ, ಕರಮುಡಿ, ಯಲಬುರ್ಗಾ, ಕುಕನೂರ, ಸಂಗನಾಳ ಸೀಮೆಯಲ್ಲಿದ್ದವು. ಆದರೆ, ನಿಜಾಮನ ಸೈನಿಕರಿಂದ ಸದಾ ತೊಂದರೆಯನ್ನು ಅನುಭವಿಸುತ್ತಿದ್ದರು. ಜಮೀನಿನಲ್ಲಿ ಏನೇ ಬೆಳೆ ಬೆಳೆದರೂ ಅದನ್ನು ಆ ಪ್ರಾಂತ್ಯದ ಗ್ರಾಮಗಳಲ್ಲಿಯೇ ಮಾರಬೇಕಾಗಿತ್ತು. ಹೊಲದಲ್ಲಿ ಬೆಳೆದ ಫಸಲು, ದನಗಳಿಗೆ ಹೊಟ್ಟು ಮೇವು ಮನೆಗೆ ತರಲು ಅವಕಾಶ ಇರಲಿಲ್ಲ. ಕೆಲವೊಮ್ಮೆ ಗುಂಪು ಗುಂಪಾಗಿ ಹಾಲಕೆರೆಗೆ ಬಂದು ದರೋಡೆ ಮಾಡುತ್ತಿದ್ದರು ಎಂದು ಗ್ರಾಮಸ್ಥ ಎ.ಸಿ.ಪಾಟೀಲ ತಮ್ಮ ಹಿರಿಯರು ಹೇಳಿದ್ದನ್ನು ನೆನಪಿಸಿಕೊಂಡರು.

ನಿಜಾಮರಿಂದ ರಕ್ಷಣೆ ಪಡೆಯಲು ಗ್ರಾಮಸ್ಥರು ಚಿಕ್ಕ ಚಿಕ್ಕ ಸಂದಿಗಳು ಹೆಚ್ಚಾಗಿರುವಂತೆ ಮನೆಗಳನ್ನು ಒಂದಕ್ಕೊಂದು ಪಕ್ಕದಲ್ಲಿ ನಿರ್ಮಿಸಿದ್ದಾರೆ. ರಜಾಕರ ಹಾಗೂ ನಿಜಾಮನ ಅನುಯಾಯಿಗಳ ಹಾವಳಿ ಮಿತಿಮೀರಿದಾಗ ಗ್ರಾಮದಲ್ಲಿ ಆಡಳಿತ ನಡೆಸುತ್ತಿದ್ದ ರಾವ್ ಬಹದ್ದೂರ ಮನೆತನದವರು ಹಾಗೂ ಮುಖಂಡರು ಸ್ವಾತಂತ್ರ್ಯದ ನಂತರ ಬಾಂಬೆ ವಿಭಾಗದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಬಾಲಾಸಾಹೇಬ ಗಂಗಾಧರ ಖೇರ್ ಅವರ ಗಮನಕ್ಕೆ ತರುತ್ತಾರೆ. ಆಗ ಹಾಲಕೆರೆ ಸೀಮೆಯಲ್ಲಿ ಧಾರವಾಡ ಜಿಲ್ಲೆ ವತಿಯಿಂದ ಪೊಲೀಸರ ನೇಮಕ ಮಾಡಲಾಗಿತ್ತು ಎಂದು ಸ್ಮರಿಸಿದರು.

ADVERTISEMENT

ಹಗಲು ರಾತ್ರಿಗಳೆನ್ನದೆ ಗ್ರಾಮದ ಆಸ್ತಿ ಹಾಗೂ ನಾಗರಿಕರ ಪ್ರಾಣ, ಮಾನ, ಆಸ್ತಿ ಕಾಪಾಡಲು ಪೊಲೀಸರು ಮುಂದಾಗುತ್ತಾರೆ. 2ನೇ ಮಾರ್ಚ್‌ 1948ರಂದು ರಜಾಕರು ಗುಂಪು–ಗುಂಪಾಗಿ ಗ್ರಾಮಸ್ಥರ ಮೇಲೆ ದಾಳಿ ಮಾಡುತ್ತಾರೆ. ಸಂಪತ್ತನ್ನು ಲೂಟಿ ಮಾಡಲು ಪ್ರಯತ್ನಿಸುತ್ತಾರೆ. ಆಗ ಪೊಲೀಸರು ಹಾಗೂ ರಜಾಕರ ನಡುವೆ ಗುಂಡಿನ ಚಕಮಕಿ ನಡೆಯುತ್ತದೆ. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಹಲವಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಆಗ ಕರ್ತವ್ಯ ಪಾಲನೆಯಲ್ಲಿದ್ದ ಕಾನ್‌ಸ್ಟೆಬಲ್‌ಗಳಾದ ರಾಮಪ್ಪ ಪವಾರ, ವೀರನಗೌಡ ಅಯ್ಯನಗೌಡ್ರ ಜೀವದ ಹಂಗನ್ನು ಬದಿಗಿಟ್ಟು ವಿರೋಧಿ ಶಕ್ತಿಗಳನ್ನು ಮಟ್ಟ ಹಾಕುವಾಗ ನಿಜಾಮನ ಸೈನಿಕರ ಗುಂಡಿನ ದಾಳಿಗೆ ಪ್ರಾಣತ್ಯಾಗ ಮಾಡುತ್ತಾರೆ.

ನಂತರದ ದಿನಗಳಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದ ಮೇಲೆ ಮುಂಬೈ ಸರ್ಕಾರ ಗಡಿ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನೇಮಿಸಿ ಹಾವಳಿಯನ್ನು ತಡೆಯುವಲ್ಲಿ ಯಶಸ್ವಿಯಾಗುತ್ತದೆ. ಕಾನ್‌ಸ್ಟೆಬಲ್‌ಗಳ ಸಾಹಸದ ಸ್ಮರಣಾರ್ಥವಾಗಿ 3ನೇ ಮಾರ್ಚ್‌ 1948 ರಂದು ಹಾಲಕೆರೆಯಿಂದ ಸಂಗನಾಳ ಕಡೆಗೆ ಹೋಗುವ ಗಡಿ ಭಾಗದ ಹೊಲದಲ್ಲಿ ಅವರ ಹೆಸರಿನಲ್ಲಿ ಲಡಾಯಿ ಕಟ್ಟೆಯನ್ನು ಗ್ರಾಮಸ್ಥರ ಸಹಕಾರದಲ್ಲಿ ಸರ್ಕಾರ ನಿರ್ಮಿಸಿದೆ ಎಂದು ಹೊನ್ನಪ್ಪಗೌಡ್ರ ಪೊಲೀಸ‌ಪಾಟೀಲ, ಸೊಪ್ಪಯ್ಯಸ್ವಾಮಿ ಸೊಪ್ಪಿಹಿರೇಮಠ ತಿಳಿಸಿದರು.

ಲಡಾಯಿ ಕಟ್ಟೆ ಮರೆತ ಇಲಾಖೆ
ನಾಗರಿಕರ ಪ್ರಾಣ, ಆಸ್ತಿ, ರಕ್ಷಣೆಯಲ್ಲಿ ಕರ್ತವ್ಯ ನಿಷ್ಠೆ ಮೆರೆದು ಪ್ರಾಣತ್ಯಾಗ ಮಾಡಿದ ಪೊಲೀಸರಿಗೆ 24ನೇ ಅಕ್ಟೋಬರ್‌ 1948 ರಂದು ಆಗಿನ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಲಡಾಯಿ ಕಟ್ಟೆಗೆ ಬಂದು ಪುಷ್ಪನಮನ ಸಲ್ಲಿಸಿದರು.

ಅಂದಿನಿಂದ ಪ್ರತಿ ವರ್ಷ ಪೊಲೀಸ್‌ ಹುತಾತ್ಮರ ದಿನದಂದು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹುತಾತ್ಮರಿಗೆ ಗೌರವ ಸಲ್ಲಿಸುತ್ತಿದ್ದರು. ಆದರೆ ಪ್ರಾಣತ್ಯಾಗ ಮಾಡಿದ ಪೊಲೀಸ್‌ರಿಗೆ ಗೌರವ ಸಲ್ಲಿಸಲು ಇಲಾಖೆಯವರು 39 ವರ್ಷಗಳಿಂದ ಬರುತ್ತಿಲ್ಲ. ಲಡಾಯಿ ಕಟ್ಟೆ ಅನಾಥವಾಗಿದೆ. ಈ ವರ್ಷದಿಂದಾರೂ ಈ ಮೊದಲಿನ ಪದ್ಧತಿಯಂತೆ ಲಡಾಯಿಕಟ್ಟೆಗೆ ಬಂದು ಸ್ಮರಿಸುವ ಕಾರ್ಯ ಆರಂಭವಾಗಲಿ ಎನ್ನುವುದು ಗ್ರಾಮಸ್ಥರ ಕೋರಿಕೆ.

*
ಪೊಲೀಸ್‌ ಹುತಾತ್ಮರ ದಿನದಂದು ಇಲಾಖೆಯಿಂದ ಲಡಾಯಿ ಕಟ್ಟೆಗೆ ಗೌರವ ಸಲ್ಲಿಸುವ ಮೂಲಕ ಕರ್ತವ್ಯ ನಿಷ್ಠೆ ಮೆರೆದು ಪ್ರಾಣತ್ಯಾಗ ಮಾಡಿದ ಕಾನ್‌ಸ್ಟೆಬಲ್‌ಗಳ ಸ್ಮರಣೆ ಮುಂದುವರಿಸಬೇಕು
-ಎ. ಸಿ. ಪಾಟೀಲ, ಹಾಲಕೆರೆ ಗ್ರಾಮದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.