ADVERTISEMENT

ಸಪ್ತ ಗ್ರಾಮಗಳಲ್ಲಿ ಬಣ್ಣದೋಕುಳಿ ನಿಷಿದ್ಧ!

ಲಕ್ಷ್ಮೀಕನಕನರಸಿಂಹನ ಜಾತ್ರೆ, ಕಲ್ಯಾಣ ಕಾರ್ಯ

ಕಾಶಿನಾಥ ಬಿಳಿಮಗ್ಗದ
Published 14 ಮಾರ್ಚ್ 2025, 8:06 IST
Last Updated 14 ಮಾರ್ಚ್ 2025, 8:06 IST
ಬಣ್ಣದೋಕುಳಿಯ ನಿಷೇಧಕ್ಕೆ ಕಾರಣವಾಗಿರುವ ಮುಂಡರಗಿ ಪಟ್ಟಣದ ಕನಕಪ್ಪನ ಗುಡ್ಡದ ಮೇಲಿರುವ ಲಕ್ಷ್ಮಿಕನಕನರಸಿಂಹ ದೇವಸ್ಥಾನ
ಬಣ್ಣದೋಕುಳಿಯ ನಿಷೇಧಕ್ಕೆ ಕಾರಣವಾಗಿರುವ ಮುಂಡರಗಿ ಪಟ್ಟಣದ ಕನಕಪ್ಪನ ಗುಡ್ಡದ ಮೇಲಿರುವ ಲಕ್ಷ್ಮಿಕನಕನರಸಿಂಹ ದೇವಸ್ಥಾನ   

ಮುಂಡರಗಿ: ದೇಶದಾದ್ಯಂತ ಬಣ್ಣದೋಕುಳಿಯಾಟವು ಹೋಳಿ ಹುಣ್ಣಿಮೆಯ ಪ್ರಮುಖ ಭಾಗವಾಗಿದ್ದು, ಸ್ತ್ರೀ ಪುರುಷರೆಂಬ ಭೇದವಿಲ್ಲದೆ ಬಣ್ಣ ಎರಚಿಕೊಂಡು ಸಂಭ್ರಮಿಸುವುದು ಸರ್ವೇ ಸಾಮಾನ್ಯ.

ಆದರೆ, ಮುಂಡರಗಿ ಪಟ್ಟಣ ಹಾಗೂ ಅದರ ಸುತ್ತಮುತ್ತಲಿನ ಏಳು ಗ್ರಾಮಗಳಲ್ಲಿ ರತಿ, ಮನ್ಮಥರ ಪ್ರತಿಷ್ಠಾಪನೆ, ಕಾಮ ದಹನ ಹಾಗೂ ಬಣ್ಣದೋಕುಳಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಟ್ಟಣದ ಕನಕಪ್ಪನ ಗುಡ್ಡದ ಮೇಲಿರುವ ಲಕ್ಷ್ಮೀಕನಕನರಸಿಂಹ ದೇವರಿರುವ ಕಾರಣದಿಂದ ಇಲ್ಲಿ ಹೋಳಿ ಹುಣ್ಣಿಮೆಯ ಸಡಗರ ಹಾಗೂ ಸಂಭ್ರಮವಿಲ್ಲ.

ಹೋಳಿ ಹುಣ್ಣಿಮೆಯಿಂದ ನಿರಂತರವಾಗಿ ಐದು ದಿನಗಳ ಕಾಲ ಲಕ್ಷ್ಮೀಕನಕನರಸಿಂಹನ ಜಾತ್ರೆ ಹಾಗೂ ಲಕ್ಷ್ಮಿ ಹಾಗೂ ಕನಕನರಸಿಂಹನ ಕಲ್ಯಾಣ ಕಾರ್ಯ ನಡೆಯುತ್ತವೆ. ಹೋಳಿ ಹುಣ್ಣಿಮೆಯ ಪ್ರಯುಕ್ತ ಜರುಗುವ ಕಾಮ ದಹನವು ಸೂತಕದ ಸಂಕೇತವಾಗಿದ್ದು, ಈ ಸಂದರ್ಭದಲ್ಲಿ ಯಾವುದೇ ಕಲ್ಯಾಣ ಕಾರ್ಯ ಕೈಗೊಳ್ಳಲು ಬರುವುದಿಲ್ಲ. ಈ ಕಾರಣದಿಂದ ಇಲ್ಲಿ 17ನೇ ಶತಮಾನದಿಂದ ಕಾಮದಹನ ಹಾಗೂ ಬಣ್ಣದೋಕುಳಿಯನ್ನು ನಿಷೇಧಿಸಲಾಗಿದೆ.

ADVERTISEMENT

ವಿವಿಧ ಸಂದರ್ಭಗಳಲ್ಲಿ ಪಟ್ಟಣದ ಲಕ್ಷ್ಮೀಕನಕನರಸಿಂಹ ದೇವರು ತಾಲ್ಲೂಕಿನ ಶಿರೂಳ, ರಾಮೇನಹಳ್ಳಿ, ನಾಗರಳ್ಳಿ, ಬೆಣ್ಣಿಹಳ್ಳಿ, ಮಕ್ತುಂಪುರ, ಬರದೂರು ಹಾಗೂ ತಾಂಬ್ರಗುಂಡಿ ಗ್ರಾಮಗಳಿಗೆ ತೆರಳುತ್ತಾನೆ. ಈ ಗ್ರಾಮಗಳೊಂದಿಗೆ ಲಕ್ಷ್ಮೀಕನಕನರಸಿಂಹ ಅವಿನಾಭಾವ ಸಂಬಂಧ ಹೊಂದಿದ್ದಾನೆ. ಆದ್ದರಿಂದ ಈ ಏಳು ಗ್ರಾಮಗಳಲ್ಲಿ ಗ್ರಾಮಸ್ಥರು ಕಾಮ ದಹನ ಹಾಗೂ ಬಣ್ಣದೋಕುಳಿ ಆಡುವುದಿಲ್ಲ.

ಹೋಳಿ ಹುಣ್ಣಿಮೆಯ ಬದಲಾಗಿ ಏಳು ಗ್ರಾಮಗಳಲ್ಲಿ ಯುಗಾದಿ ಅಥವಾ ಆಯಾ ಗ್ರಾಮಗಳ ಜಾತ್ರೆ ಹಾಗೂ ಉತ್ಸವಗಳಲ್ಲಿ ಬಣ್ಣದೋಕುಳಿಯಾಡುತ್ತಾರೆ.

ದೇವಸ್ಥಾನದಲ್ಲಿರುವ ಉದ್ಭವ ಲಕ್ಷ್ಮಿಕನಕನರಸಿಂಹ ದೇವರು
ಹೋಳಿ ಹುಣ್ಣಿಮೆಯ ಸಮಯದಲ್ಲಿ ಲಕ್ಷ್ಮೀಕನಕನರಸಿಂಹನ ಜಾತ್ರೆ ಜರುಗುತ್ತದೆ. ಹೀಗಾಗಿ 400 ವರ್ಷಗಳಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಏಳು ಗ್ರಾಮಗಳಲ್ಲಿ ಕಾಮದಹನ ಹಾಗೂ ಬಣ್ಣದೋಕುಳಿ ನಿಷೇಧಿಸಲಾಗಿದೆ
ವಿ.ಎಲ್.ನಾಡಗೌಡರ ರಂಗರಾವ್ ವಂಶಸ್ಥರು ಮುಂಡರಗಿ
ಲಕ್ಷ್ಮೀಕನಕನರಸಿಂಹ ರೂಪದಲ್ಲಿ ನೆಲೆ
17ನೇ ಶತಮಾನದಲ್ಲಿ ಪಟ್ಟಣದ ನಾಡಗೌಡರ ಮನೆತನದ ರಂಗರಾವ್ ಎಂಬುವವರು ಹೋಳಿ ಹುಣ್ಣಿಮೆಯಂದು ಕನಕಗಿರಿಯ ಲಕ್ಷ್ಮೀಕನಕನರಸಿಂಹ ದೇವಸ್ಥಾನಕ್ಕೆ ತಪ್ಪದೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡು ಬರುತ್ತಿದ್ದರು. ಒಂದು ಸಾರಿ ಅನಾರೋಗ್ಯದ ಕಾರಣದಿಂದ ರಂಗರಾಯರಿಗೆ ಕನಕಗಿರಿಗೆ ತೆರಳಲಾಗಲಿಲ್ಲ. ಮನಸ್ಸಿಗೆ ನೋವು ಮಾಡಿಕೊಂಡು ಮಲಗಿದಾಗ ಲಕ್ಷ್ಮೀಕನಕನರಸಿಂಹನು ರಂಗರಾಯರ ಕನಸಿನಲ್ಲಿ ಬಂದು ‘ನಾನು ಕನಕಪ್ಪನ ಗುಡ್ಡದಲ್ಲಿ ಸಾಲಿಗ್ರಾಮದ ರೂಪದಲ್ಲಿ ನಿನಗೆ ದರ್ಶನ ನೀಡುತ್ತೇನೆ. ಅಲ್ಲಿ ದೇವಸ್ಥಾನ ನಿರ್ಮಿಸಿ ನಿತ್ಯ ನನ್ನನ್ನು ಪೂಜಿಸು’ ಎಂದು ತಿಳಿಸುತ್ತಾನೆ. ಅಂದು ಅಲ್ಲಿ ಉದ್ಭವಗೊಂಡ ಸಾಲಿಗ್ರಾಮವು ಲಕ್ಷ್ಮೀಕನಕನರಸಿಂಹ ರೂಪದಲ್ಲಿ ನೆಲೆ ನಿಂತಿದ್ದಾನೆ ಎಂಬ ಪ್ರತೀತಿ ಇಲ್ಲಿಯ ಜನರಲ್ಲಿ ಮನೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.