ADVERTISEMENT

ವಸ್ತುಸ್ಥಿತಿ ಅರಿತು ಮಾತನಾಡಲಿ: ಸಚಿವ ಜೋಶಿ

​ಪ್ರಜಾವಾಣಿ ವಾರ್ತೆ
Published 23 ಮೇ 2021, 5:39 IST
Last Updated 23 ಮೇ 2021, 5:39 IST

ಗದಗ: ‘ಕಾಂಗ್ರೆಸ್ ಆಡಳಿತ ಹಾಗೂ ಪ್ರಧಾನಿ ಮೋದಿ ಅವಧಿಯಲ್ಲಿ ಆಗಿರುವ ಸುಧಾರಣೆಗಳನ್ನು ತುಲನೆ ಮಾಡಿ ನೋಡಬೇಕು. ಇಲ್ಲವಾದರೆ, ಈಗಾಗಲೇ ವಿರೋಧ ಪಕ್ಷ ಸ್ಥಾನವನ್ನೂ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಮತ್ತಷ್ಟು ಅವನತಿ ಕಾಣಬೇಕಾಗುತ್ತದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.

ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕಾಂಗ್ರೆಸ್‌ನವರಿಗೆ ಜಾಣ ಮರೆವು ಜಾಸ್ತಿ. ದೇಶದ ವೈದ್ಯಕೀಯ ಸೇವೆ ಮತ್ತು ಸೌಲಭ್ಯಗಳ ಬಗ್ಗೆ ವಸ್ತುಸ್ಥಿತಿ ಅರಿತುಕೊಂಡು ಕಾಂಗ್ರೆಸ್ ನಾಯಕರು ಮಾತನಾಡಬೇಕು. ಆರಂಭದಲ್ಲಿ ಕಾಂಗ್ರೆಸ್ ಸಾಥ್ ನಿಡಿದ್ದರೆ ಈಗಾಗಲೇ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವುದು ಮುಕ್ತಾಯವಾಗುತ್ತಿತ್ತು. ಕಾಂಗ್ರಸ್‌ನವರಿಗೆ ಜನಸಾಮಾನ್ಯರಿಗಿಂತ ನಾಮದಾರ್ ಕುಟುಂಬದ ಬಗ್ಗೆ ಹೆಚ್ಚು ಕಳಕಳಿ ಇದೆ’ ಎಂದು ಟಾಂಗ್ ನೀಡಿದರು.

‘ಪಿಎಂ ಕೇರ್ ನಿಧಿ ಅಡಿ 50 ಸಾವಿರ ವೆಂಟಿಲೇಟರ್‌ಗಳನ್ನು ಖರೀದಿಸಲಾಗಿದೆ. ಎಲ್ಲವೂ ಉತ್ಕೃಷ್ಟ ಗುಣಮಟ್ಟ ಹೊಂದಿವೆ. ಇದೇ ವೆಂಟಿಲೇಟರ್‌ಗಳು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಸೇನಾ ಆಸ್ಪತ್ರೆಗಳಲ್ಲಿ ಬಳಕೆಯಾಗುತ್ತಿವೆ. ಆದರೆ, ಈ ಬಗ್ಗೆ ಪರಿಪೂರ್ಣ ಮಾಹಿತಿ ಇಲ್ಲದೇ ಕೆಲವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಪರೋಕ್ಷವಾಗಿ ಮಾಜಿ ಸಚಿವ ಎಚ್.ಕೆ.ಪಾಟೀಲ ವಿರುದ್ಧ ಹರಿಹಾಯ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.