ADVERTISEMENT

ಓದುಗರಿಗೆ ಸಾಕ್ಷಾತ್‌ ಅನುಭವ ನೀಡುವ ಪ್ರವಾಸ ಕಥನ: ರಾಜಾರಾಮ ಪವಾರ

ಮಲ್ಲಿಕಾರ್ಜುನ ಕುಂಬಾರರ ‘ಕಾಲಿಗೆ ಗಾಲಿ ಕಟ್ಟಿಕೊಂಡು’ ಪ್ರವಾಸ ಕಥನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 4:30 IST
Last Updated 9 ಜುಲೈ 2025, 4:30 IST
ಗದಗ ನಗರದಲ್ಲಿ ಭಾನುವಾರ ಗೆಳೆಯರ ಬಳಗದ ವತಿಯಿಂದ ಏರ್ಪಡಿಸಿದ್ದ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಕುಂಬಾರ ಅವರ ‘ಕಾಲಿಗೆ ಗಾಲಿ ಕಟ್ಟಿಕೊಂಡು’ ಪ್ರವಾಸ ಕಥನ ಪುಸ್ತಕ ಲೋಕಾರ್ಪಣೆ ಮಾಡಿ ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಮಾತನಾಡಿದರು.
ಗದಗ ನಗರದಲ್ಲಿ ಭಾನುವಾರ ಗೆಳೆಯರ ಬಳಗದ ವತಿಯಿಂದ ಏರ್ಪಡಿಸಿದ್ದ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಕುಂಬಾರ ಅವರ ‘ಕಾಲಿಗೆ ಗಾಲಿ ಕಟ್ಟಿಕೊಂಡು’ ಪ್ರವಾಸ ಕಥನ ಪುಸ್ತಕ ಲೋಕಾರ್ಪಣೆ ಮಾಡಿ ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಮಾತನಾಡಿದರು.   

ಗದಗ: ‘ಕನ್ನಡದ ಪ್ರವಾಸ ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದೆ. ದೇಶ ಸುತ್ತು ಕೋಶ ಓದು ಎನ್ನುವಂತೆ ದೇಶ ತಿರುಗುವುದರಿಂದ ಪ್ರವಾಸದಲ್ಲಿ ಹೊಸ ಹೊಸ ಅನುಭವಗಳು ಆಗುತ್ತವೆ. ಅಂತಹ ಅನುಭವ ಕಥನಗಳು ಓದುಗರಿಗೆ ಸಾಕ್ಷಾತ್ ಪ್ರವಾಸ ಮಾಡಿದ ಅನುಭವ ನೀಡುತ್ತವೆ’ ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಹೇಳಿದರು.

ನಗರದ ಗದಗ ರೆಸ್ಟೋರೆಂಟ್ ಸಭಾಂಗಣದಲ್ಲಿ ಭಾನುವಾರ ಗೆಳೆಯರ ಬಳಗದ ವತಿಯಿಂದ ಏರ್ಪಡಿಸಿದ್ದ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಕುಂಬಾರ ಅವರ ‘ಕಾಲಿಗೆ ಗಾಲಿ ಕಟ್ಟಿಕೊಂಡು’ ಪ್ರವಾಸ ಕಥನ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

‘ಪ್ರವಾಸ ಪ್ರಯಾಸವಾದರೂ ಪ್ರವಾಸಿಗನ ಜ್ಞಾನದ ದಿಗಂತ ಹೆಚ್ಚುವುದು. ಪ್ರವಾಸಿ ತಾಣ, ಪ್ರದೇಶ, ಜನಾಂಗ, ಭಾಷೆ, ಆಹಾರ ವಿಹಾರ ಎಲ್ಲವೂ ಹೊಸ ಅನುಭವ ನೀಡಬಲ್ಲವು. ಅಂತಹ ಅನುಭವಗಳನ್ನು ಪಡೆದುಕೊಂಡ ಹಿರಿಯ ಸಾಹಿತಿ ಪ್ರವಾಸ ಕಥನ ಪ್ರಪಂಚಕ್ಕೆ ಹೊಸ ಕೊಡುಗೆ ನೀಡಿದ್ದಾರೆ’ ಎಂದರು.

ADVERTISEMENT

ರೋಣ ಗುಲಗಂಜಿಮಠದ ಗುರುಪಾದದೇವರು, ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಕೆ.ರವೀಂದ್ರನಾಥ ಮಾತನಾಡಿ, ಸರಳ ವ್ಯಕ್ತಿತ್ವದ ಕುಂಬಾರರು ಕನ್ನಡ ಸಾಹಿತ್ಯಕ್ಕೆ ವೈವಿಧ್ಯಮಯವಾದ ಸಾಹಿತ್ಯಿಕ ಕೃತಿಗಳನ್ನು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತಿ ಶಿವನಗೌಡ ಗೌಡರ, ಐ.ಕೆ.ಕಮ್ಮಾರ ಅವರು ಮಲ್ಲಿಕಾರ್ಜುನ ಕುಂಬಾರರ ಕೃತಿಗಳ ಬಗ್ಗೆ, ಉಪನ್ಯಾಸಕ ಮತ್ತು  ಪತ್ರಕರ್ತರಾಗಿ ಸಲ್ಲಿಸಿದ ಸೇವೆಯನ್ನು ಅಭಿನಂದಿಸಿದರು. ಶಶಿಧರ ಮಂಗಳೂರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕುಂಬಾರ ಅವರನ್ನು ರೋಣ ಗುಲಗಂಜಿಮಠದ ಗುರುಪಾದದೇವರು, ಗೆಳೆಯರ ಬಳಗ, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಗೌರವಿಸಲಾಯಿತು.

ಶಿವಾನಂದ ಮಠದ ಸ್ವಾಗತಿಸಿದರು. ಕೆ.ಸಿ.ಲಮಾಣಿ ಪರಿಚಯಿಸಿದರು. ಎಸ್.ಬಿ.ಮಾಮನಿ ನಿರೂಪಿಸಿದರು. ಬಸವರಾಜ ದಂಡಿನ ಕೃತಿ ಪರಿಚಯಿಸಿದರು. ಪಿ.ಎನ್.ರಾಠೋಡ ವಂದಿಸಿದರು.

ಪ್ರವಾಸದಿಂದ ನನಗೆ ಆತ್ಮತೃಪ್ತಿ ದೊರೆತಿದೆ. ಪ್ರವಾಸ ಕಥನಗಳ ಈ ಗ್ರಂಥವನ್ನು ಪ್ರಕಟಿಸಿದ ಸಂತೃಪ್ತಿ ದೊರೆತಿದೆ. ಬರಲಿರುವ ದಿನಗಳಲ್ಲಿ ಅಧ್ಯಯನ ಬರವಣಿಗೆ ಮುಂದುವರಿಸಲಾಗುವುದು
ಮಲ್ಲಿಕಾರ್ಜುನ ಕುಂಬಾರ, ಹಿರಿಯ ಸಾಹಿತಿ

ಸಮಾರಂಭದಲ್ಲಿ ಪ್ರಾಚ್ಯ ವಸ್ತು ಸಂಶೋಧಕ ಅ.ದ.ಕಟ್ಟಿಮನಿ, ಡಾ.ರಾಜಶೇಖರ ದಾನರಡ್ಡಿ, ವೈ.ಜಿ.ಪಾಟೀಲ, ಹುಲ್ಲಪ್ಪ ಅರಗಂಜಿ, ಕಲ್ಲಯ್ಯ ಹಿರೇಮಠ, ಅಂದಾನೆಪ್ಪ ವಿಭೂತಿ, ಬಸವರಾಜ ಬಂಡಿವಾಡ, ಪ್ರೊ.ಕಿಶೋರಬಾಬು ನಾಗರಕಟ್ಟಿ, ಬಸವರಾಜ ವಾರಿ, ಬಸವರಾಜ ಕರಮುಡಿ ಇದ್ದರು.  

ಹೆಚ್ಚಿದ ಪ್ರವಾಸ ಕಥನ ಸಾಹಿತ್ಯದ ಮಹತ್ವ   

‘ನೂರು ವರ್ಷಗಳ ಹಿಂದೆ ಪ್ರವಾಸ ಸಾಹಿತ್ಯದ ಕೊರತೆ ಇತ್ತು. ಪ್ರವಾಸ ಎಂದರೆ ಅದೊಂದು ತೀರ್ಥಯಾತ್ರೆ ಎಂಬ ಭಾವನೆ ಇತ್ತು. ಪ್ರಾಚ್ಯ ಪ್ರಜ್ಞೆ ಬೆಳೆದಂತೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಜಾಗೃತಗೊಂಡಂತೆ ಪ್ರವಾಸ ಮತ್ತು ಪ್ರವಾಸ ಕಥನ ಸಾಹಿತ್ಯಕ್ಕೆ ಹೆಚ್ಚಿನ ಮಹತ್ವ ಬಂತು’ ಎಂದು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು. ‘ಸಾರಿಗೆ ಸಾಧನಗಳಲ್ಲಿ ಆದ ಕ್ರಾಂತಿಕಾರಕ ಸುಧಾರಣೆಯಿಂದಾಗಿ ಪ್ರವಾಸೋದ್ಯಮ ಪ್ರಗತಿಯಾಗುತ್ತ ಬಂದಿದೆ. ಪ್ರಯಾಸದ ಪ್ರವಾಸ ಇಂದಿನ ಹೆಚ್ಚು ಅನುಕೂಲತೆ ಸೌಲಭ್ಯಗಳಿಂದಾಗಿ ಉಲ್ಲಾಸದ ಪ್ರವಾಸವಾಗಿ ಮಾರ್ಪಡುತ್ತ ಬಂದಿದೆ. ಇಂದು ಪ್ರವಾಸ ಒಂದು ಉದ್ಯಮವಾಗಿ ಬೆಳೆದು ಬಂದಿದೆ. ದೇಶದ ಹಲವಾರು ರಾಜ್ಯಗಳ ಪ್ರವಾಸ ಮಾಡಿರುವ ಸಾಹಿತಿ ಕುಂಬಾರ ಅವರು ತಾವು ಕೈಗೊಂಡ ಪ್ರವಾಸದ ಸಾರವನ್ನು ಮೌಲ್ಯಿಕ ಗ್ರಂಥವಾಗಿ ಪ್ರಕಟಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.