
ಲಕ್ಷ್ಮೇಶ್ವರದ ಮಣ್ಣಿನ ಕೋಟೆ ಕಟ್ಟಡದಲ್ಲಿ ಇರುವ ಎರಡನೂರು ವರ್ಷಗಳ ಹಿಂದಿನ ಕಿಟ್ಟದ ಗಣಪ
ಲಕ್ಷೇಶ್ವರ: ಅಂದಾಜು ಎರಡು ಶತಮಾನಗಳ ಹಿಂದೆ ಪಟ್ಟಣದಲ್ಲಿ ಮೀರಜ್ ಸಂಸ್ಥಾನಿಕರು ತಮ್ಮ ಆಡಳಿತದ ಅವಧಿಯಲ್ಲಿ ಇಲ್ಲಿನ ಮಣ್ಣಿನ ಕೋಟೆಯಲ್ಲಿ ಪ್ರತಿಷ್ಠಾಪಿಸಿರುವ ಅತೀ ವಿಶಿಷ್ಠವಾದ ಕಿಟ್ಟದ ಗಣಪನ ಮೂರ್ತಿಯನ್ನು ರಕ್ಷಿಸಬೇಕು ಎಂದು ವಕೀಲ ಬಿ.ಎಸ್. ಬಾಳೇಶ್ವರಮಠ ಹಾಗೂ ಸಾಮಾಜಿಕ ಕಾರ್ಯಕರ್ತ ಶಂಕರ ಬ್ಯಾಡಗಿ ಆಗ್ರಹಿಸಿದರು.
ಈ ಕುರಿತು ಅವರು ಶುಕ್ರವಾರ ಮಾಹಿತಿ ನೀಡಿದ ಅವರು, ಮೀರಜ್ ಸಂಸ್ಥಾನದ ಮಹಾರಾಜರು ಲಕ್ಷ್ಮೇಶ್ವರವನ್ನು ಆಳುತ್ತಿದ್ದ ಸಂದರ್ಭದಲ್ಲಿ ಮಣ್ಣಿನ ಕೋಟೆಯನ್ನೇ ತಮ್ಮ ಆರಮನೆಯನ್ನಾಗಿ ಮಾಡಿಕೊಂಡಿದ್ದರು. ಆಗ ಅವರು ಈ ಕಿಟ್ಟದ ಗಣಪನನ್ನು ಪ್ರತಿಷ್ಠಾಪನೆ ಮಾಡಿದ್ದರು. ಆದರೆ ಇಂದು ಮಣ್ಣಿನ ಕೋಟೆ ಅವಸಾನದ ಅಂಚಿನಲ್ಲಿದ್ದು, ಅದು ಯಾವಾಗ ಬೇಕಾದರೂ ಬೀಳುವ ಸಂಭವ ಇದೆ. ಕಟ್ಟಡ ಬಿದ್ದರೆ ಗಣಪನ ಮೂರ್ತಿಗೆ ಧಕ್ಕೆ ಉಂಟಾಗುವ ಭಯ ಇದೆ. ಇದು ಬಹಳ ವಿಶೇಷ ಗಣಪನ ಮೂರ್ತಿಯಾಗಿದ್ದು, ಇದನ್ನು ಕಿಟ್ಟದಿಂದ ಸಿದ್ಧ ಪಡಿಸಲಾಗಿದೆ. ಇದೊಂದು ಜಾಗೃತ ದೇವತೆ ಕೂಡ ಆಗಿದೆ. ಕಾರಣ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿನ ಮೂರ್ತಿಯನ್ನು ಬೇರೆಡೆ ಸ್ಥಳಾಂತರಿಸಿ ಅದನ್ನು ರಕ್ಷಿಸಬೇಕು’ ಎಂದು ಅವರು ಒತ್ತಾಯಿಸಿದರು.