ಗದಗ: ಇಲ್ಲಿನ ಸೆಟ್ಲ್ಮೆಂಟ್ ಏರಿಯಾದ ಸಬ್ ಜೈಲ್ ಪಕ್ಕದಲ್ಲಿರುವ ಕೃಷ್ಣ ಮಂದಿರದಲ್ಲಿ ಯೋಗೇಶ್ವರ ಕೃಷ್ಣ ಮಂದಿರ ಟ್ರಸ್ಟ್ ಕಮಿಟಿ ವತಿಯಿಂದ ಎರಡು ದಿನಗಳ ಕಾಲ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಗೆ ಮಂಗಳವಾರ ವರ್ಣರಂಜಿತ ತೆರೆ ಬಿದ್ದಿತು.
ಕಂಜರ್ ಭಾಟ್ ಸಮುದಾಯದ ಜನರು ಎರಡು ದಿನಗಳ ಕಾಲ ಶ್ರೀಕೃಷ್ಣನಿಗೆ ಬಗೆ ಬಗೆಯ ಪೂಜೆ ಸಲ್ಲಿಸಿ ಪುಳಕಗೊಂಡರು. ಜನ್ಮಾಷ್ಟಮಿ ಅಂಗವಾಗಿ ಸೋಮವಾರ ಇಡೀ ದಿನ ಉಪವಾಸವಿದ್ದ ಸಮುದಾಯದ ಜನರು ಮಧ್ಯರಾತ್ರಿ 12ಕ್ಕೆ ಕೃಷ್ಣನ ವಿಗ್ರಹವನ್ನು ತೊಟ್ಟಿಲಲ್ಲಿ ಮಲಗಿಸಿಮಹಿಳೆಯರು, ಮಕ್ಕಳು ಪ್ರೀತಿಯಿಂದ ತೂಗಿದರು. ಬಳಿಕ ಕುಟ್ಟಿ ಪುಡಿಮಾಡಿದ ಶುಂಠಿ ಹಾಗೂ ಸಕ್ಕರೆ ಸವಿದು ಉಪವಾಸ ಮುರಿದರು.
ಕಂಜರ್ ಭಾಟ್ ಸಮುದಾಯದ ಜನರು ತೊಟ್ಟಿಲಲ್ಲಿ ಪವಡಿಸಿದ್ದ ಶ್ರೀಕೃಷ್ಣನನ್ನು ಮಂಗಳವಾರ ಬೆಳಿಗ್ಗೆ ಭಜನೆ ಮೂಲಕ ಕೃಷ್ಣನನ್ನು ಎಚ್ಚರಿಸಿದರು. ನೃತ್ಯ ಭಜನೆ ಮೂಲಕ ಕೃಷ್ಣನಿಗೆ ಬೆಳಗಿನ ವಂದನೆ ಸಲ್ಲಿಸಿದರು. ಬಳಿಕ ದಿಂಡಿಯಾತ್ರೆ ಮಾಡುತ್ತಾ ಓಣಿಯಲ್ಲಿ ಕೃಷ್ಣನನ್ನು ಮೆರೆಸಿದರು. ರಾಧೆ ವೇಷದಲ್ಲಿದ್ದ ಯುವತಿಯರು, ಕೃಷ್ಣರಾಗಿದ್ದ ಪುಟಾಣಿ ಮಕ್ಕಳು ಮೆರವಣಿಗೆಯ ಮೆರುಗು ಹೆಚ್ಚಿಸಿದರು. ಬಳಿಕ ಯುವಕರು ಮಕ್ಕಳು ಮೊಸರು ಕುಡಿಕೆ ಒಡೆದು ಸಂಭ್ರಮಿಸಿದರು.
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪುಟಾಣಿ ಮಕ್ಕಳಿಗಾಗಿ ರಾಧಾ ಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ದೊಡ್ಡವರು ನೃತ್ಯ ಭಜನೆ ಮಾಡಿ ಭಕ್ತಿ ಮೆರೆದರು. ಕೋಲಾಟ ಆಡಿ ಸಂಭ್ರಮಿಸಿದರು.
ಬಳಿಕ ಸಿಹಿಊಟ ಸವಿದು ಜನ್ಮಾಷ್ಟಮಿಗೆ ತೆರೆ ಎಳೆಯಲಾಯಿತು’ ಎಂದು ಯೋಗೇಶ್ವರ ಕೃಷ್ಣ ಮಂದಿ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಗಣೇಶ ಬಾಗಡೆ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.