ADVERTISEMENT

ಲಕ್ಷ್ಮೇಶ್ವರ | ಮೆನಸಿನಕಾಯಿ ಬೆಲೆ ಹೆಚ್ಚಳ: ರೈತರಿಗೆ ಖುಷಿ

ನಾಗರಾಜ ಎಸ್‌.ಹಣಗಿ
Published 6 ಜನವರಿ 2026, 2:15 IST
Last Updated 6 ಜನವರಿ 2026, 2:15 IST
ಲಕ್ಷ್ಮೇಶ್ವರ ತಾಲ್ಲೂಕು ಅಡರಕಟ್ಟಿ ಗ್ರಾಮದಲ್ಲಿ ಒಣ ಹಾಕಿರುವ ಮೆಣಸಿನಕಾಯಿ  
ಲಕ್ಷ್ಮೇಶ್ವರ ತಾಲ್ಲೂಕು ಅಡರಕಟ್ಟಿ ಗ್ರಾಮದಲ್ಲಿ ಒಣ ಹಾಕಿರುವ ಮೆಣಸಿನಕಾಯಿ     

ಲಕ್ಷ್ಮೇಶ್ವರ: ಚಿನ್ನದ ಬೆಲೆ ಗಗನಕ್ಕೇರಿದ್ದು ಬಡವರ ಪಾಲಿಗೆ ನಿಲುಕದ ನಕ್ಷತ್ರವಾಗಿದೆ. ಇದೀಗ ಅದೇ ಸಾಲಿನಲ್ಲಿ ಕೆಂಪು ಬಂಗಾರ ಎಂದೇ ಖ್ಯಾತಿ ಪಡೆದ ಒಣ ಮೆಣಸಿನಕಾಯಿ ಬೆಲೆ ಕೂಡ ಅಧಿಕವಾಗಿದೆ. ಈ ವರ್ಷ ತಾಲ್ಲೂಕಿನ 884 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಮೆಣಸಿನಕಾಯಿ ಬಿತ್ತನೆಯಾಗಿದ್ದು, ಬೆಲೆ ಅಧಿಕವಾಗಿದೆ.  

ಖರ್ಚು ಕಡಿಮೆ ಎಂಬ ಕಾರಣಕ್ಕೆ ತಾಲ್ಲೂಕಿನ ಶೇ 70ರಷ್ಟು ರೈತರು ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರಿಂದ ಮೆಣಸಿನಕಾಯಿ ಬಿತ್ತನೆ ಪ್ರಮಾಣ ಕುಸಿದಿದೆ. ಮೆನಸಿಕಾಯಿ ಬೇಡಿಕೆ ಹೆಚ್ಚಿದ್ದು ಪೂರೈಕೆ ಕಡಿಮೆ ಇರುವ ಕಾರಣ ದರದಲ್ಲಿ ಹೆಚ್ಚಳವಾಗಿದೆ.

ಉತ್ತಮ ಮಳೆಯಾಗಿ ಮೆಣಸಿನಕಾಯಿ ಅಧಿಕ ಇಳುವರಿ ಬರುತ್ತದೆ ಎಂಬ ಕಾರಣಕ್ಕೆ ಪ್ರತಿವರ್ಷ ರೈತರು ತಪ್ಪದೇ ಬೆಳೆಯುತ್ತಾರೆ. ಈ ಬೆಳೆಯನ್ನೇ ನೆಚ್ಚಿದ ರೈತರು ಅಪಾರವಾದ ಕನಸನ್ನು ಕಟ್ಟಿಕೊಂಡಿರುತ್ತಾರೆ.

ADVERTISEMENT

ಮೆಣಸಿನಕಾಯಿ ಬೆಳೆಗೆ ಎರೆಭೂಮಿ ಸೂಕ್ತ ಪ್ರದೇಶವಾಗಿದ್ದು, ತಾಲ್ಲೂಕಿನ ಧರ್ಮಾಪುರ, ಬಸಾಪುರ, ರಾಮಗಿರಿ, ಮಾಡಳ್ಳಿ, ಯತ್ನಳ್ಳಿ, ಯಳವತ್ತಿ, ಮಾಗಡಿ, ಗೊಜನೂರು, ಬಟ್ಟೂರು, ಪುಟಗಾಂಬಡ್ನಿ, ಅಡರಕಟ್ಟಿ, ದೊಡ್ಡೂರು, ಗೋವನಾಳ, ಶಿಗ್ಲಿ ಗ್ರಾಮಗಳಿಗೆ ಸೇರಿದ ನೂರಾರು ಎಕರೆ ಭೂಮಿಯಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡುತ್ತಾರೆ. 

ಹದವರಿತು ಮಳೆ ಆಗಿ ಉತ್ತಮ ವಾತಾವರಣ ಇದ್ದರೆ ಒಂದು ಎಕರೆ ಭೂಮಿಯಲ್ಲಿ ಐದಾರು ಕ್ವಿಂಟಲ್ ಇಳುವರಿ ಬರುತ್ತದೆ. ಈ ವರ್ಷ ಉತ್ತಮ ವಾತಾವರಣವಿದ್ದರೂ ಬಿತ್ತನೆ ಪ್ರದೇಶ ಕಡಿಮೆ ಇರುವ ಕಾರಣ ಬಂದಷ್ಟು ಫಸಲಿಗೆ ಉತ್ತಮ ದರ ಸಿಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಆದರೆ ಗ್ರಾಹಕರಿಗೆ ಮೆನಸಿಕಾಯಿ ಬೆಲೆ ಹೆಚ್ಚಳ ಹೊರೆಯಾಗಿದೆ. ಸದ್ಯ ಉತ್ತಮ ಗುಣಮಟ್ಟದ ಮೆಣಸಿನಕಾಯಿ ಕ್ವಿಂಟಲ್‍ಗೆ ಅಂದಾಜು ₹35ರಿಂದ ₹60 ಸಾವಿರಕ್ಕೆ ಮಾರಾಟವಾಗುತ್ತಿದೆ.  

‘ಈ ವರ್ಷ ಬಿತ್ತನೆ ಪ್ರದೇಶ ಕಡಿಮೆ ಇರುವುದರಿಂದ ಬೆಲೆ ಅಧಿಕವಾಗಿದೆ. ಗುಂಟೂರು ಭಾಗದಲ್ಲಿಯೂ ಮೆಣಸಿನಕಾಯಿ ಬಿತ್ತನೆ ಕಡಿಮೆ ಇರುವ ಕಾರಣ ದರ ಹೀಗೆ ಮುಂದುವರೆಯುತ್ತದೆ’ ಎಂದು ಮೆಣಸಿನಕಾಯಿ ವ್ಯಾಪಾರಸ್ಥ ಬಸಣ್ಣ ಹೇಳುತ್ತಾರೆ.

ಮೆಣಸಿನಕಾಯಿ ಒಳ್ಳೆ ಬಂದಿರುವುದು ರೈತರ ಪಾಲಿಗೆ ಖುಷಿ ತಂದಿದೆಯಾದರೂ ಬಿತ್ತನೆ ಪ್ರದೇಶ ಕಡಿಮೆ ಇರುವುದರಿಂದ ಮೆಣಸಿನಕಾಯಿ ಬೆಳೆಯದ ರೈತರು ಕೈ ಕೈ ಹಿಚುಕಿಕೊಳ್ಳುವ ಪರಿಸ್ಥಿತಿ ಉದ್ಭವಿಸಿದೆ. ಇದು ರೈತರ ಗೋಳಾದರೆ ಇನ್ನು ದರ ಹೆಚ್ಚಳ ಗ್ರಾಹಕರನ್ನು ಕಂಗೆಡಿಸಿದೆ. ಆರಂಭದಲ್ಲೇ ಮೆಣಸಿನಕಾಯಿ ದರ ಕೇಳಿಯೇ ಅವರು ಹೌಹಾರುತ್ತಿದ್ದಾರೆ.

ಗದಗ, ಧಾರವಾಡ ಹಾವೇರಿ ಜಿಲ್ಲೆಗಳಲ್ಲಿ ಬೆಳೆಯುವ ಮೆಣಸಿನಕಾಯಿ ಮಾರಾಟಕ್ಕೆ ಬ್ಯಾಡಗಿ ಮಾರುಕಟ್ಟೆ ಒಂದೇ ಆಧಾರವಾಗಿದೆ. ಈ ಮಾರುಕಟ್ಟೆಯಲ್ಲಿ ಪ್ರತಿವರ್ಷ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ.  

ಈ ವರ್ಷ ಮೆಕ್ಕೆಜೋಳ ಬಿತ್ತನೆ ಅಧಿಕವಾಗಿದ್ದು ಮೆನಸಿಕಾಯಿ ಬಿತ್ತನೆ ಪ್ರಮಾಣ ಕಡಿಮೆ. ಅದೇರೀತಿ ಮೆನಸಿಕಾಯಿ ಇಳುವರಿ ಪ್ರಮಾಣ ಕೂಡ ಕಡಿಮೆ ಆಗಿದೆ
ಪರಶುರಾಮ ಲಕ್ಕಣ್ಣವರ ರಾಮಗೇರಿ ಗ್ರಾಮ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.