
ಲಕ್ಷ್ಮೇಶ್ವರ: ‘ಸಾರ್ವಜನರಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಐದೂ ಇಲಾಖೆಗಳ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಲಕ್ಷ್ಮೇಶ್ವರ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಮಡಿವಾಳರ ತಿಳಿಸಿದರು. ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಜರುಗಿದ ಐದು ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಉದ್ಧೇಶಿಸಿ ಅವರು ಮಾತನಾಡಿದರು.
ಬಾಲೆಹೊಸೂರಿನಲ್ಲಿ ನಿರಂತರ ಜ್ಯೋತಿ ಪೂರೈಕೆಯಲ್ಲಿ ಸಮಸ್ಯೆ ಇರುವ ಬಗ್ಗೆ ಮಾಹಿತಿ ಇದ್ದು ಹೆಸ್ಕಾಂ ಅಧಿಕಾರಿಗಳು ಅದನ್ನು ಪರಿಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಮಾಡಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ವಾಲಿದ್ದು ಮಳೆಗಾಲ ಬರುವುದರೊಳಗಾಗಿ ಅವುಗಳನ್ನು ಸರಿಪಡಿಸಿ ಗ್ರಾಮಸ್ಥರಿಗೆ ಆಗುವ ತೊಂದರೆ ತಪ್ಪಿಸಬೇಕು. ಮತ್ತಿ ಟಿಸಿ ಟೆಸ್ಟಿಂಗ್ ಕೇಂದ್ರವನ್ನು ಲಕ್ಷ್ಮೇಶ್ವರದಲ್ಲಿಯೇ ಆರಂಭಿಸಲು ಕ್ರಮಕೈಗೊಳ್ಳುವ ಮೂಲಕ ಸರಿಯಾದ ಸಮಯಕ್ಕೆ ಟಿಸಿ ದೊರೆಯವ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು.
ಸಮಿತಿ ಸದಸ್ಯ ರಮೇಶ ಬಾರಕೇರ ಮಾತನಾಡಿ ರೈತರು ಹೊಸ ಟಿಸಿ ಪಡೆದುಕೊಳ್ಳಲು ಸಾಕಷ್ಟು ಹಣ ಕೊಡಬೇಕಾಗಿದೆ. ಈ ಕುರಿತು ಇಲಾಖೆಗೆ ರೈತರು ಕಟ್ಟಬೇಕಾದ ನಿಖರವಾದ ಹಣ ಎಷ್ಟು ಎಂಬುದನ್ನು ಎಲ್ಲ ಗ್ರಾಮ ಪಂಚಾಯ್ತಿಗಳ ನೋಟಿಸ್ ಬೋರ್ಡ್ನಲ್ಲಿ ಪ್ರಕಟಿಸಬೇಕು’ ಎಂದು ಆಗ್ರಹಿಸಿದರು.
ಸಮಿತಿ ಮತ್ತೋರ್ವ ಸದಸ್ಯ ರಂಜಾನ ನದಾಫ ‘ಹೊಸ ಮನೆ ಕಟ್ಟುವ ಸಂದರ್ಭದಲ್ಲಿ ಪಕ್ಕದ ಮನೆಯಿಂದ ವಿದ್ಯತ್ ತೆಗೆದುಕೊಂಡು ಇಲಾಖೆಗೆ ಮೋಸ ಮಾಡುತ್ತಿರುವ ಕೆಲಸ ನಿರಂತರ ನಡೆದಿದ್ದು ಈ ಕುರಿತು ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಮನೆ ಮಾಲೀಕರು ಶ್ರೀಮಂತರಾಗಿದ್ದಲ್ಲಿ ಅವರಿಗೆ ಯಾವುದೇ ತೊಂದರೆಯನ್ನು ಹೆಸ್ಕಾಂ ಅಧಿಕಾರಿಗಳು ಮಾಡುವುದಿಲ್ಲ. ಆದರೆ ಬಡವರಾದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ಆರೋಪಿಸಿದರು.
ಮಾಡಳ್ಳಿ ಗ್ರಾಮಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ ಎಂಬ ಸದಸ್ಯರ ಆಗ್ರಹಕ್ಕೆ ಉತ್ತರಿಸಿದ ಸಾರಿಗೆ ಇಲಾಖೆ ಅಧಿಕಾರಿ ರಾಘವೇಂದ್ರ ‘ಕಳೆದ ಮೂರು ತಿಂಗಳಿಂದ 22 ಸಿಬ್ಬಂದಿ ಕೆಲಸಕ್ಕೆ ಬರುತ್ತಿಲ್ಲ. ಹೀಗಾಗಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ’ ಎಂದು ಸಭೆಗೆ ತಿಳಿಸಿದರು.
ಫೆ.18ರಂದು ಗದಗ ನಗರದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಸಭೆ ಜರುಗಲಿದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ತಾಲ್ಲೂಕಿನ 14 ಗ್ರಾಮ ಪಂಚಾಯ್ತಿಗಳಿಂದ ಒಂದೊಂದು ಹಾಗೂ ಲಕ್ಷ್ಮೇಶ್ವರದಿಂದ ಎರಡು ಬಸ್ ಬಿಡುವ ವ್ಯವಸ್ಥೆ ಮಾಡಲಾಗುವುದು ಎಂದು ನಾಗರಾಜ ಮಡಿವಾಳರ ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಸಮಿತಿ ಸದಸ್ಯರಾದ ಶಿವರಾಜಗೌಡ ಪಾಟೀಲ, ಕಲ್ಲಪ್ಪ ಗಂಗಣ್ಣವರ, ಹಸನ್ಸಾಬ್ ಜಂಗ್ಲಿ ನದಾಫ, ಖಾದರ್ಸಾಬ್ ರಿತ್ತಿ, ಕಲ್ಲಪ್ಪ ಗಂಗಣ್ಣವರ, ಶಶಿಕಲಾ ಬಡಿಗೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.