
ಲಕ್ಷ್ಮೇಶ್ವರ: ‘ವರ್ಷದಲ್ಲಿ ಒಂದು ದಿನ ಶಿವರಾತ್ರಿ ಆಚರಣೆಯಿಂದ ವರ್ಷವಿಡೀ ನಮ್ಮ ದುಗುಡ, ದುಮ್ಮಾನಗಳನ್ನು ದೂರಾಗುತ್ತವೆ. ಶಿವಜ್ಞಾನದ ಅರಿವು ಸಂಪಾದಿಸಿಕೊಳ್ಳಬೇಕು ಎನ್ನುವವರು ಕಡಿಮೆ. ದೇವಸ್ಥಾನಗಳಲ್ಲಿ ನಿತ್ಯ ಪ್ರಜೆ, ಪುನಸ್ಕಾರಗಳ ಜೊತೆ ಇಂತಹ ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು’ ಎಂದು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಹೇಳಿದರು.
ಶಿವರಾತ್ರಿ ಉತ್ಸವದ ಅಂಗವಾಗಿ ಪಟ್ಟಣದ ಇತಿಹಾಸ ಪ್ರಸಿದ್ದ ಸೋಮೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪಿಎಸ್ಐ ನಾಗರಾಜ ಗಡದ ಕಾರ್ಯಕ್ರಮ ಉದ್ಘಾಟಿಸಿ, ‘ದೇವಸ್ಥಾನಗಳು ಹೆಮ್ಮೆಯ ಪ್ರತೀಕ. ಅಲ್ಲಿ ನಿರಂತರವಾಗಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರಬೇಕು. ಪ್ರಾಚೀನ ದೇವಸ್ಥಾನಗಳಲ್ಲಿ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವುದರಿಂದ ನಮ್ಮ ಆಚರಣೆ, ಪರಂಪರೆಗಳು ಉಳಿಯುತ್ತವೆ. ಮಕ್ಕಳು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.
ಯುವ ಮುಖಂಡರಾದ ಆನಂದ ಗಡ್ಡದೇವರಮಠ ಹಾಗೂ ಸುನೀಲ ಮಹಾಂತಶೆಟ್ಟರ ಮಾತನಾಡಿ, ‘ಸುಧಾಮೂರ್ತಿಯವರು ದೇವಸ್ಥಾನ ಜೀರ್ಣೋದ್ಧಾರಗೊಳಿಸಿದ ನಂತರ ದೇವಸ್ಥಾನಕ್ಕೆ ಬರುವಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಪುಲಿಗೆರೆ ಉತ್ಸವದಂತೆ ಶಿವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವೂ ಮೆರುಗು ನೀಡುವಂತೆ ಕಾರ್ಯಕ್ರಮ ಆಯೋಜಿಸುತ್ತಿರುವುದು ಹೆಮ್ಮೆ ವಿಷಯ’ ಎಂದು ತಿಳಿಸಿದರು.
ಸೋಮೇಶ್ವರ ದೇವಸ್ಥಾನದ ಅರ್ಚಕರ ಸಮಿತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ದಿಗಂಬರ ಪೂಜಾರ, ಉಪಾಧ್ಯಕ್ಷರಾಗಿ ರಾಘವೇಂದ್ರ ಪೂಜಾರ, ಕಾರ್ಯದರ್ಶಿಯಾಗಿ ಸಮೀರ ಪೂಜಾರ ಹಾಗೂ ಖಜಾಂಚಿ ಕೃಷ್ಣ ಪೂಜಾರ ಅವರ ಪದಗ್ರಹಣ ನೆರವೇರಿತು.
ನಿಂಗನಗೌಡ ಚ.ಪಾಟೀಲ ಅವರು ಪಟ್ಟಣದ ಸೋಮೇಶ್ವರ ದೇವರ ಕುರಿತು ರಚಿಸಿದ ‘ತಿರುಳ್ಗನ್ನಡನಾಡು ಪುಲಗೆರೆಯ ಶ್ರೀ ಸೋಮೇಶ್ವರ ಮಹಿಮೆ’ ಕೃತಿಯನ್ನು ಶ್ರೀಗಳು ಬಿಡುಗಡೆಗೊಳಿಸಿದರು.
ಸೋಮೇಶ್ವರ ದೇವಸ್ಥಾನ ಅರ್ಚಕರ ಸಮಿತಿ ಅಧ್ಯಕ್ಷ ದಿಗಂಬರ ಪೂಜಾರ ಅಧ್ಯಕ್ಷತೆ ವಹಿಸಿದ್ದರು.
ಜಾತ್ರಾ ಕಮಿಟಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ ಅರ್ಚಕರಾದ ಸೋಮನಾಥ ಪೂಜಾರ, ರಾಘವೇಂದ್ರ ಪೂಜಾರ, ನಾಗರಾಜ ಪೂಜಾರ, ಚಿಕ್ಕರಸಯ್ಯ ಪೂಜಾರ, ಕೃಷ್ಣ ಪೂಜಾರ, ಗುರುರಾಜ ಪೂಜಾರ ಶ್ವೇತಾ ಪೂಜಾರ, ಅಲಕನಂದಾ ಕುಲಕರ್ಣಿ, ದರ್ಶಿನಿ ಪೂಜಾರ ಇದ್ದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.