
ಗಜೇಂದ್ರಗಡ: ‘ಇಷ್ಟಲಿಂಗ ಧರಿಸಿ ಭಕ್ತಿ, ಜ್ಞಾನ ಮಾರ್ಗದ ಮೂಲಕ ಬದುಕನ್ನು ಹಸನುಗೊಳಿಸಿಕೊಳ್ಳಬೇಕು. ಲಿಂಗದೀಕ್ಷೆಯು ಮನಸ್ಸನ್ನು ಏಕಾಗ್ರತೆ ಕಡೆಗೆ, ದೈವಿಕತೆಯತ್ತ ಕೊಂಡೊಯ್ಯುತ್ತದೆ’ ಎಂದು ಗದುಗಿನ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಹೇಳಿದರು.
ನಗರದ ಕುರುಹಿನಶೆಟ್ಟಿ ಸಮಾಜದ ವತಿಯಿಂದ ಕುರುಹಿನಶೆಟ್ಟಿ ಸಭಾಭವನದಲ್ಲಿ ನಡೆದ ಲಿಂಗಧಾರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಮಕ್ಕಳಿಗೆ ಧಾರ್ಮಿಕ ವಿಧಿವಿಧಾನಗಳನ್ನು ಕಲಿಸುವ ಮೂಲಕ ಅವರನ್ನು ಜ್ಞಾನವಂತರನ್ನಾಗಿಸಬೇಕು’ ಎಂದು ಹೇಳಿದರು.
ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಎಸ್.ಎಸ್.ಡೊಳ್ಳಿನ ಮಾತನಾಡಿ, ‘ಲಿಂಗಾಧಾರಣೆ ಮೂಲಕ ಗುರುಗಳು ದೀಕ್ಷೆ ನೀಡಿದ್ದಾರೆ. ಅದರ ಪೂಜಾ ವಿಧಿ ವಿಧಾನಗಳನ್ನು ತಂದೆ ತಾಯಂದಿರು ಮಕ್ಕಳಿಗೆ ಹೇಳಿಕೊಡಬೇಕು. ಆಗ ಮಕ್ಕಳು ಸಂಸ್ಕಾರವಂತರಾಗುತ್ತಾರೆ’ ಎಂದರು.
ಕೇಂದ್ರ ಕುರುಹಿನಶೆಟ್ಟಿ ಸಮಾಜದ ಸದಸ್ಯ ಅಶೋಕ ವನ್ನಾಲ ಮಾತನಾಡಿ, ‘ಸಮಾಜ ನಿಂತನೀರಾಗಬಾರದು. ಸಮಾಜ ಬೆಳವಣಿಗೆ ಹೊಂದಬೇಕಾದರೆ ಯುವಕರ ಪಾತ್ರ ಮಹತ್ವದ್ದಾಗಿದೆ. ಹಿರಿಯರ ಮಾರ್ಗದರ್ಶನದೊಂದಿಗೆ ಯುವಕರು ಮುನ್ನಡೆದಾಗ ಸಮಾಜ ಬೆಳವಣಿಗೆ ಹೊಂದಲು ಸಾಧ್ಯ. ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆಯಲು ಹೋರಾಟ ರೂಪಿಸುವ ಅವಶ್ಯಕತೆ ಇದೆ’ ಎಂದರು.
ಕಾರ್ಯಕ್ರಮದಲ್ಲಿ ಪಿ. ಎನ್.ಡೊಳ್ಳಿನ, ನಿಂಗಪ್ಪ ಸಮಗಂಡಿ, ಅಂಬರೀಶ ಸಂಕನೂರ ಮಾತನಾಡಿದರು.
ರತ್ನಾಕರ ಸ್ವಾಮೀಜಿ ನೀಲಕಂಠಮಠ, ದೇವಣ್ಣ ಬನಿಕಲ್, ಚನ್ನು ಸಮಗಂಡಿ, ಮಂಜುನಾಥ ಸಂಕನೂರ, ಗಿರೀಶ ಸಂಕನೂರ, ಅನಿಲ ಡೊಳ್ಳಿನ, ನಾಗರಾಜ ಸಂಕನೂರ, ರಾಚಪ್ಪ ಡೊಳ್ಳಿನ, ಬಸವರಾಜ ಹಗರಟಗಿ, ವಿರೂಪಾಕ್ಷ ಅಳವಂಡಿ, ಶರಣಪ್ಪ ಸಂಕನೂರ, ವಿಶ್ವನಾಥ ಗೌಡರ, ಕಳಕೇಶ ಅಳವಂಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.