ADVERTISEMENT

ಕಲಹ ಮರೆದು ಮತ್ತೆ ಒಂದಾದ ದಂಪತಿ

ರಾಜಿ ಸಂಧಾನದ ಮೂಲಕ 3,137 ಪ್ರಕರಣಗಳು ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 2:34 IST
Last Updated 20 ಡಿಸೆಂಬರ್ 2021, 2:34 IST
ವಿವಾಹ ವಿಚ್ಛೇದನ ಹಾಗೂ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದ 8 ಪ್ರಕರಣಗಳಲ್ಲಿ ದಂಪತಿಯನ್ನು ಪುನಃ ಒಂದುಗೂಡಿಸಿ ಹಾರ ಬದಲಾಯಿಸಿ ಅವರಿಗೆ ಸಿಹಿ ಹಂಚಿ ಕಳುಹಿಸಿಕೊಡಲಾಯಿತು
ವಿವಾಹ ವಿಚ್ಛೇದನ ಹಾಗೂ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದ 8 ಪ್ರಕರಣಗಳಲ್ಲಿ ದಂಪತಿಯನ್ನು ಪುನಃ ಒಂದುಗೂಡಿಸಿ ಹಾರ ಬದಲಾಯಿಸಿ ಅವರಿಗೆ ಸಿಹಿ ಹಂಚಿ ಕಳುಹಿಸಿಕೊಡಲಾಯಿತು   

ಗದಗ: ಕರ್ನಾಟಕ ಹೈಕೋರ್ಟ್‌, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದನ್ವಯ ಇಲ್ಲಿ ನಡೆದ ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ 3,019 ಪ್ರಕರಣಗಳನ್ನು ₹11,46,42,644ಗೆ ರಾಜಿ ಮೂಲಕ ಇತ್ಯರ್ಥಪಡಿಸಲಾಯಿತು.

ಲೋಕ್‌ ಅದಾಲತ್‌ಗೆ ಜಿಲ್ಲೆ ಎಲ್ಲಾ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿ ಇರುವ 3,762 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಪೈಕಿ 3,019 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಇತ್ಯರ್ಥಗೊಂಡ ಪ್ರಕರಣಗಳಲ್ಲಿ ಮೋಟಾರು ಅಪಘಾತ ಪ್ರಕರಣಗಳಲ್ಲಿ 22 ಪ್ರಕರಣಗಳನ್ನು ₹1,28,87,758ಗೆ, 155 ಚೆಕ್‍ಬೌನ್ಸ್ ಪ್ರಕರಣಗಳನ್ನು ₹2,12,85,261ಗೆ, 30 ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳನ್ನು ₹3,600ಗೆ, 226 ಅಸಲುದಾವೆ ಪ್ರಕರಣಗಳನ್ನು ₹7,54,75,939ಗೆ, 42 ಸ್ವಾಧೀನ ದರಖಾಸ್ತು ಪ್ರಕರಣಗಳನ್ನು ₹9,13,409ಗೆ ಹಾಗೂ 2,459 ಇತರೆ ಕ್ರಿಮಿನಲ್ ಪ್ರಕರಣಗಳನ್ನು ₹5,63,989ಗೆ, 38 ಎಂ.ಎಂ.ಆರ್.ಡಿ ಪ್ರಕರಣಗಳನ್ನು ₹4,22,000ಗೆ, 6 ವೈವಾಹಿಕ ಪ್ರಕರಣಗಳು, 23 ವಿದ್ಯುಚ್ಛಕ್ತಿ ಪ್ರಕರಣಗಳು, 2 ಕಾರ್ಮಿಕ ಪ್ರಕರಣಗಳು, 7 ಹಣ ವಸೂಲಾತಿ ಪ್ರಕರಣಗಳನ್ನು ಸೇರಿಸಿ ಒಟ್ಟು 3,019 ಚಾಲ್ತಿ ಪ್ರಕರಣಗಳನ್ನು ಒಟ್ಟು ₹11,46,42,644 ಪರಿಹಾರ ಒದಗಿಸುವುದರ ಮೂಲಕ ರಾಜಿ ಸಂಧಾನ ಮಾಡಲಾಯಿತು.

ADVERTISEMENT

ಅದೇ ರೀತಿ, 34 ಬಿಎಸ್‍ಎನ್‍ಎಲ್ ದೂರವಾಣಿ ಪ್ರಕರಣಗಳು ಹಾಗೂ 84 ಬ್ಯಾಂಕ್ ಪ್ರಕರಣಗಳ ವ್ಯಾಜ್ಯಪೂರ್ವ ಪ್ರಕರಣಗಳನ್ನು ₹1,04,32,646ಗೆ ರಾಜಿ ಸಂಧಾನ ಮಾಡಲಾಗಿದೆ. ಎಲ್ಲಾ ಸೇರಿ ಒಟ್ಟು 3,137 ಪ್ರಕರಣಗಳನ್ನು ₹12,50,75,290ಗೆ ರಾಜಿ ಸಂಧಾನಗೊಳಿಸಲಾಗಿದೆ.

ವಿಶೇಷವಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಹಾಗೂ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ 8 ಪ್ರಕರಣಗಳಲ್ಲಿ ದಂಪತಿಯನ್ನು ಪುನಃ ಒಂದುಗೂಡಿಸಿ ಹಾರ ಬದಲಾಯಿಸಿ ಅವರಿಗೆ ಸಿಹಿ ಹಂಚಿ ಕಳುಹಿಸಿಕೊಡಲಾಯಿತು.

ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಮಹಾಲಕ್ಷ್ಮೀ ನೇರಳೆ, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಿ.ಮಧುಸೂದನ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ನರಶಿಂಸಾ ಎಂ.ವಿ., ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಪಿ.ಜಿ.ಚಲುವಮೂರ್ತಿ, ಪ್ರಧಾನ ಹಿರಿಯ ನ್ಯಾಯಾಧೀಶ ರಾಜಣ್ಣಾ ಸಂಕಣ್ಣವರ, ಜೆಎಂಎಫ್‍ಸಿ ನ್ಯಾಯಾಧೀಶ ಎಸ್.ಚಿನ್ನಸ್ವಾಮಿ, ಶ್ರೀಕಾಂತ ರವೀಂದ್ರ, ಅರುಣ ಚೌಗಲೆ, ನಿಖಿತಾ ಎಸ್. ಅಕ್ಕಿ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಂ.ಎ.ಮಾಲ್ವಿ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಮತ್ತೂರ, ಉಪಾಧ್ಯಕ್ಷರಾದ ವಿ.ವಿ.ಪಾಟೀಲ, ಜಂಟಿ ಕಾರ್ಯದರ್ಶಿ ಕುಮಾರ ಜಿ.ವಿ. ಖಜಾಂಚಿ ಎಂ.ಎ.ನಾಯ್ಕರ ಹಾಗೂ ವಕೀಲರ ವೃಂದದವರು, ಸಂಧಾನಕಾರ ವಕೀಲರು, ಪಕ್ಷಗಾರರು ಉಪಸ್ಥಿತರಿದ್ದು ಲೋಕ ಅದಾಲತ್ ಯಶಸ್ವಿಗೊಳಿಸಿದರು.

ಎಲ್ಲಾ ತಾಲ್ಲೂಕುಗಳ ನ್ಯಾಯಾಧೀಶರು ಹಾಗೂ ವಕೀಲರು ಕೂಡಾ ಆಯಾ ತಾಲ್ಲೂಕು ನ್ಯಾಯಾಲಯಗಳಲ್ಲಿ ಲೋಕ ಅದಾಲತ್‍ನಲ್ಲಿ ಪಾಲ್ಗೊಂಡು ರಾಜಿ ಸಂಧಾನ ಯಶಸ್ವಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.