ADVERTISEMENT

ಮಾಲಾರ್ಪಣೆಗೆ ಮುಂದಾದ ರಾಜಕೀಯ ಪಕ್ಷಗಳು, ಸಂಘಟನೆಗಳು: ರೈತರ ಬೇಸರ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 5:09 IST
Last Updated 22 ಜುಲೈ 2022, 5:09 IST
ನರಗುಂದದಲ್ಲಿ ಮಾಜಿ ಸಚಿವ ಬಿ.ಆರ್.ಯಾವಗಲ್ ರೈತ ವೀರಗಲ್ಲಿಗೆ ನಮನ ಸಲ್ಲಿಸಿ ಮಾತನಾಡಿದರು.
ನರಗುಂದದಲ್ಲಿ ಮಾಜಿ ಸಚಿವ ಬಿ.ಆರ್.ಯಾವಗಲ್ ರೈತ ವೀರಗಲ್ಲಿಗೆ ನಮನ ಸಲ್ಲಿಸಿ ಮಾತನಾಡಿದರು.   

ನರಗುಂದ: ಪಟ್ಟಣದಲ್ಲಿ ಗುರುವಾರ ನಡೆದ 42ನೇ ಹುತಾತ್ಮ ರೈತ ದಿನಾಚರಣೆ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ರಾಜ್ಯ ಹಾಗೂ ಸ್ಥಳೀಯ ಸಂಘಟನೆಗಳ ಮುಖಂಡರು ರೈತ ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ತಾ ಮುಂದು, ನಾ ಮುಂದು ಎಂದು ಮಾಲಾರ್ಪಣೆ ಮಾಡಿದರೇ ಹೊರತು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಮಾತು ಕೇಳಿಬರಲೇ ಇಲ್ಲ. ಇದನ್ನು ದೂರದಿಂದಲೇ ವೀಕ್ಷಿಸಿದ ಪ್ರಾಮಾಣಿಕ ರೈತರು ಬೇಸರ ವ್ಯಕ್ತಪಡಿಸಿದರು.

ಇವರಿಗೆ ಪ್ರತಿ ವರ್ಷ ಜುಲೈ 21ರಂದು ಮಾತ್ರ ನೆಪಾಗುತ್ತೇವೆ. ಉಳಿದ ದಿನಗಳಲ್ಲಿ ರೈತರ ಸಮಸ್ಯೆ ಬಗ್ಗೆ ಗಟ್ಟಿ ಧ್ವನಿಯಿಂದ ಮಾತನಾಡಿ ನ್ಯಾಯ ಕೊಡಿಸುವ ನಾಯಕರು ಯಾರೂ ಇಲ್ಲ’ ಎಂದು ರೈತರೊಬ್ಬರು ಆಕ್ರೋಶ ಹೊರಹಾಕಿದರು.

ಈ ವರ್ಷ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತಪರ, ಕನ್ನಡಪರ ಸಂಘಟನೆಗಳು, ಆಮ್‌ ಆದ್ಮಿ ಪಕ್ಷ, ಕರ್ನಾಟಕ ರಾಜ್ಯ ಸಮಿತಿ ಪಕ್ಷ ಹೀಗೆ ಹಲವಾರು ಸಂಘಟನೆಗಳು ಪುರಸಭೆಯಿಂದ ಮೆರವಣಿಗೆ ಬಂದು ರೈತ ವೀರಗಲ್ಲಿಗೆ ಮಾಲಾರ್ಪಣೆ ಸಲ್ಲಿಸಿದರು.

ADVERTISEMENT

ಕಳೆದ ಬಾರಿ ಒಂದೇ ವೇದಿಕೆಯಡಿ 20ಕ್ಕೂ ಹೆಚ್ಚು ರೈತ ಸಂಘಟನೆಗಳು ಕೂಡಿ ಹುತಾತ್ಮ ರೈತ ದಿನಾಚರಣೆಗೆ ಸಾಕ್ಷಿಯಾಗಿದ್ದವು. ಆದರೆ ಈ ಸಲ ಅದು ಕಾಣಲಿಲ್ಲ.

ಮಾಜಿ ಸಚಿವ ಬಿ.ಆರ್.ಯಾವಗಲ್ ನೇತೃತ್ವದಲ್ಲಿ ಪುರಸಭೆಯಿಂದ ಹೊರಟ ಪಾದಯಾತ್ರೆ ರೈತ ವೀರಗಲ್ಲಿಗೆ ಬಂದು ಮಾಲಾರ್ಪಣೆ ಸಲ್ಲಿಸಿತು. ಕಾಂಗ್ರೆಸ್ ಮುಖಂಡರು ಇದ್ದರು.

ಪ್ರತ್ಯೇಕವಾಗಿ ತಮ್ಮ ಬೆಂಬಲಿಗರೊಂದಿಗೆ ಬಂದ ಕೆಪಿಸಿಸಿ ವೈದ್ಯಕೀಯ ವಿಭಾಗದ ಉಪಾಧ್ಯಕ್ಷ ಡಾ.ಸಂಗಮೇಶ ಕೊಳ್ಳಿಯವರ ವೀರಗಲ್ಲಿಗೆ ಮಾಲಾರ್ಪಣೆ ಸಲ್ಲಿಸಿದರು.

ದಿನಾಚರಣೆ ಆರಂಭದಲ್ಲಿ ಬೆಳಿಗ್ಗೆ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಎನ್.ವರ್ಮ ನೇತೃತ್ವದಲ್ಲಿ ರೈತ ವೀರಗಲ್ಲಿಗೆ ಮಾಲಾರ್ಪಣೆ ಸಲ್ಲಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟಾರೆ ಈ ವರ್ಷ ಹುತಾತ್ಮ ರೈತ ದಿನಾಚರಣೆ, ರೈತ ಸಮಾವೇಶ ನಡೆದದ್ದು ಬಿಟ್ಟರೆ ಸಾಂಕೇತಿಕ ಎಂಬಂತೆ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.