
ಲಕ್ಷ್ಮೇಶ್ವರ: ‘ಸರ್ಕಾರವು ಕಾಟಾಚಾರಕ್ಕೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿದೆ. ಇದರಿಂದ ರೈತರಿಗೆ ಯಾವುದೇ ಉಪಯೋಗವಾಗಿಲ್ಲ’ ಎಂದು ಸಮಗ್ರ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಂಜುನಾಥ ಮಾಗಡಿ ಆರೋಪಿಸಿದರು.
ಪಟ್ಟಣದ ಪೂರ್ಣಾಜಿ ಕರಾಟೆ ಅವರ ಮಿಲ್ಲಿನಲ್ಲಿ ಶನಿವಾರ ನಡೆದ ರೈತಪರ ಹೋರಾಟದ ಸಭೆಯಲ್ಲಿ ಅವರು ಮಾತನಾಡಿದರು.
‘ರೈತರು ಬೆಳೆದ ಎಲ್ಲ ಮೆಕ್ಕೆಜೋಳವನ್ನು ಖರೀದಿಸಲು ಜಿಲ್ಲಾಧಿಕಾರಿ ಕ್ರಮ ವಹಿಸದಿದ್ದರೆ ರೈತರು ಮತ್ತೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ರವಿಕಾಂತ ಅಂಗಡಿ ಮಾತನಾಡಿ, ‘ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಿದೆ. ರಾಜ್ಯದಲ್ಲಿ ಈ ವರ್ಷ ರೈತರು ಅತಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಹೀಗಾಗಿ, ಬೆಲೆ ಕುಸಿತವಾಗಿದೆ’ ಎಂದರು.
‘ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೆಂಬಲಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ 18 ದಿನಗಳ ಹೋರಾಟ ನಡೆಸಲಾಯಿತು. ಸರ್ಕಾರದ ಗಮನ ಸೆಳೆದ ನಂತರ ಖರೀದಿ ಕೇಂದ್ರ ಆರಂಭಿಸಲು ಅನುಮತಿ ದೊರೆಯಿತು. ಆದರೆ, ಈ ವ್ಯವಸ್ಥೆ ಸಮರ್ಪಕವಾಗಿಲ್ಲ’ ಎಂದು ಕಿಡಿಕಾರಿದರು.
ಸ್ಪಷ್ಟನೆ: ರೈತಪರ ಹೋರಾಟದ ವೇದಿಕೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಯಾವುದೇ ರೀತಿಯ ಅಪಮಾನ ಮಾಡಿಲ್ಲ. ಅಚಾತುರ್ಯದಿಂದ ಸಣ್ಣ ತಪ್ಪು ನಡೆದಿರಬಹುದು. ಉದ್ದೇಶಪೂರ್ವಕವಾಗಿ ಯಾರೂ ಅಗೌರವ ತೋರಿಸಿಲ್ಲ’ ಎಂದು ರೈತ ಮುಖಂಡರ ಸ್ಪಷ್ಟನೆ ನೀಡಿದರು.
ಮುಖಂಡರಾದ ಪೂರ್ಣಾಜಿ ಕರಾಟೆ, ನಾಗರಾಜ ಚಿಂಚಲಿ, ಚನ್ನಪ್ಪ ಷಣ್ಮುಖಿ, ಸೋಮಣ್ಣ ಡಾಣಗಲ್ಲ, ಹೊನ್ನಪ್ಪ ವಡ್ಡರ, ಸುರೇಶ ಹಟ್ಟಿ, ಟಾಕಪ್ಪ ಸಾತಪೂತೆ, ಗುರಪ್ಪ ಮುಳಗುಂದ. ಖಾನಸಾಬ್ ಸೂರಣಗಿ, ಪ್ರಕಾಶ ಕೊಂಚಿಗೇರಿಮಠ ಇದ್ದರು.
‘ನೋಂದಣಿ ಪುನರಾರಂಭಿಸಿ’
‘ಸರ್ಕಾರದ ಧೋರಣೆಯಿಂದಾಗಿ ಸಾವಿರಾರು ರೈತರು ಬೆಳೆದಿರುವ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಹೋರಾಟ ನಿಲ್ಲಿಸಿದ ನಂತರ ಸರ್ಕಾರಿ ಅಧಿಕಾರಿಗಳು ಹಾಗೂ ಖರೀದಿ ಕೇಂದ್ರದ ಅಧಿಕಾರಿಗಳು ಇಷ್ಟಬಂದಂತೆ ಮೆಕ್ಕೆಜೋಳ ಖರೀದಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ರವಿಕಾಂತ ಅಂಗಡಿ ಹೇಳಿದರು. ‘ಮೆಕ್ಕೆಜೋಳ ಖರೀದಿಗೆ ನೋಂದಣಿ ಮಾಡಿಸುವುದನ್ನು ಸ್ಥಗಿತಗೊಳಿಸಲಾಗಿದ್ದು ಇದನ್ನು ಪುನರಾರಂಭಿಸಬೇಕು. ಈಗಾಗಲೇ ನೋಂದಣಿ ಮಾಡಿರುವ ಎಲ್ಲ ರೈತರ ಬೆಳೆದ ಮೆಕ್ಕೆಜೋಳವನ್ನು ಖರೀದಿಸಬೇಕು. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.