
ಲಕ್ಷ್ಮೇಶ್ವರ: ‘ಧರ್ಮ ಮಾರ್ಗದಲ್ಲಿ ನಡೆದಾಗ ಮಾತ್ರ ಮನಸ್ಸಿಗೆ ಶಾಂತಿ, ಸಮಾಧಾನ ದೊರೆಯುತ್ತದೆ. ಧರ್ಮದಿಂದ ವಿಶ್ವಕ್ಕೆ ಶಾಂತಿ ಎಂಬುದನ್ನು ಯಾರೂ ಮರೆಯಬಾರದು’ ಎಂದು ತಾಲ್ಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶಿವರಾತ್ರಿ ಅಂಗವಾಗಿ ಧರ್ಮಕ್ಷೇತ್ರದಲ್ಲಿ ಆರಂಭವಾದ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ವಟುಗಳಿಗೆ ಶಿವಲಿಂಗ ದೀಕ್ಷೆ ನೀಡಿ ಅವರು ಮಾತನಾಡಿದರು.
‘ದಶಕಗಳ ಹಿಂದೆಯೇ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಸರ್ವ ಜನಾಂಗಗಳ ಧರ್ಮ ಪ್ರಚಾರಕರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಇಡೀ ಜಗತ್ತಿಗೆ ಸಹೋದರತೆಯ ಭಾವ ಸಾರಿದ ಮಹಾತ್ಮರು ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿ. ಅವರು ಹಾಕಿಕೊಟ್ಟ ಧರ್ಮ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು. ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ’ ಎಂದರು.
‘ನಮ್ಮ ಧರ್ಮ, ಪರಂಪರೆ, ಆಚರಣೆ, ಸಂಸ್ಕೃತಿಗಳನ್ನು ಎಂದಿಗೂ ಮರೆಯಬಾರದು. ಇಂದು ದೀಕ್ಷೆ ಪಡೆದ ವಟುಗಳು ಧರ್ಮ ಮಾರ್ಗದಲ್ಲಿ ನಡೆದು ತಮ್ಮ ಬದುಕನ್ನು ಪಾವನಗೊಳಿಸಿಕೊಳ್ಳಬೇಕು’ ಎಂದು ಹೇಳಿದರು. 35ಕ್ಕೂ ಹೆಚ್ಚು ವಟುಗಳು ದೀಕ್ಷೆ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.