
ಮುಳಗುಂದ: ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರವು ಸುಸ್ಥಿತಿಯ ಕಟ್ಟಡ ಹೊಂದಿದೆ. ಆದರೆ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿಗೆ ವಸತಿ ಸೌಕರ್ಯ ಕೊರತೆ ಕಾರಣ ಪರದಾಡುವ ಸ್ಥಿತಿ ಇದೆ.
ಕಳೆದೆರಡು ದಶಕದಿಂದ ಇಲ್ಲಿನ ಹಲವು ವಸತಿ ಕಟ್ಟಡಗಳು ಪಾಳುಬಿದ್ದ ಸ್ಥಿತಿಯಲ್ಲಿವೆ. ಇನ್ನೂ ಕೆಲವು ಶಿಥಿಲಗೊಂಡಿವೆ. ಈಗಲೂ ಆಗಲೂ ಬಿಳುವ ಕಟ್ಟಡದಲ್ಲಿ ಅನಿವಾರ್ಯತೆಯಿಂದ ಬೆರೆಳೆಣಿಕೆ ಸಿಬ್ಬಂದಿ ವಾಸ ಮಾಡಿದ್ದಾರೆ.
ವಸತಿ ಸಮುಚ್ಛದಲ್ಲಿ ಆರೋಗ್ಯ ಇಲಾಖೆಯ ಜಿಪ್ ಮತ್ತು ಅಂಬ್ಯೂಲೆನ್ಸ್ ವಾಹನ ನಿಂತಲ್ಲೆ ನಿಂತು ತುಕ್ಕು ಹಿಡಿದಿದ್ದು, ಅದರ ಮೇಲೆ ಹುಲ್ಲು ಬೆಳೆದಿದೆ. ಆವರಣದಲ್ಲಿ ಸ್ವಚ್ಛತೆಯು ಮರಿಚಿಕೆಯಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರವು ಇಬ್ಬರು ವೈದ್ಯರು, ಶುಶ್ರೂಷಕಿಯರು, ಸಹಾಯಕ ಸಿಬ್ಬಂದಿ ಸೇರದಂತೆ ಒಟ್ಟು 17 ಜನ ಸಿಬ್ಬಂದಿ ಹೊಂದಿದೆ. ಇದರಲ್ಲಿ ಒಬ್ಬ ವೈದ್ಯರ ಕೊರೆತೆ ಬಿಟ್ಟರೆ ಉಳಿದೆಲ್ಲ ಸಿಬ್ಬಂದಿ ನಿತ್ಯ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಅವರಿಗೆ ಆಸ್ಪತ್ರೆ ಆವರಣದಲ್ಲಿ ಸುಸ್ಥಿತಿಯ ವಸತಿ ಕಟ್ಟಡಗಳು ಇಲ್ಲದ ಕಾರಣ, ಕೆಲವರೂ ಸ್ವಂತ ಊರಿನಿಂದ, ಇನ್ನೂ ಕೆಲವರು ಗದಗ ನಗರದಲ್ಲಿ ಬಾಡಿಗೆ ಮನೆಯಿಂದ ನಿತ್ಯ ಸಂಚಾರ ಮಾಡುತ್ತಿದ್ದಾರೆ.
ಪಾಳುಬಿದ್ದ ಸ್ಥಿತಿ: ‘ಇಲ್ಲಿ ಸುಮಾರು 15 ವಸತಿ ಕಟ್ಟಡಗಳಿದ್ದು, 4 ಕಟ್ಟಡಗಳು ಮಾತ್ರ ವಾಸಕ್ಕೆ ಯೋಗ್ಯವಾಗಿವೆ. 2 ಕಟ್ಟಡಗಳ ಚಾವಣಿ ಶಿಥಿಲವಾಗಿದ್ದು, ಬಿಳುವ ಹಂತದಲ್ಲಿವೆ. ಶಿಥಿಲ ಕಟ್ಟಡದಲ್ಲೆ ಸಹಾಯಕ ಸಿಬ್ಬಂದಿ ಇಬ್ಬರೂ ವಾಸವಾಗಿದ್ದಾರೆ. ಇನ್ನೂಳಿದ ಕಟ್ಟಡಗಳು ಸಂಪೂರ್ಣ ಪಾಳುಬಿದ್ದ ಸ್ಥಿತಿಯಲ್ಲಿವೆ‘ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
‘ವಸತಿ ಸಮುಚ್ಛದ ಬೈಯಲು ಜಾಗವು ಅಭಿವೃದ್ದಿಯಾಗದ ಪರಿಣಾಮ ಕಸ ಬೆಳೆದಿದ್ದು, ಭಯ ಆತಂಕದಿಂದಲೆ ಸಂಚಾರ ಮಾಡಬೇಕಾಗಿದೆ. ಸ್ವಚ್ಛತೆ ಕಾರ್ಯವು ನಡೆದಿಲ್ಲ. ಮಳೆಗಾಲದಲ್ಲಿ ಕೆಸರು ರಸ್ತೆಯಲ್ಲಿ ನಡೆದು ಮನೆ ಸೇರುವಂತಾಗಿದೆ. ಹಲವು ಬಾರಿ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ, ಆದರೂ ದುರಸ್ತೆ ಕಾರ್ಯ ಕೈಗೊಂಡಿಲ್ಲ‘ ಎಂದು ದೂರುತ್ತಾರೆ.
ಸಕಾಲಕ್ಕೆ ಸಿಗದ ವೈದ್ಯರು: ‘ವಸತಿ ಕಟ್ಟಡಗಳ ಸೌಕರ್ಯ ಇಲ್ಲದ ಕಾರಣ, ಆಸ್ಪತ್ರೆಗೆ ಬರುವ ರೋಗಿಗಳಿಗೆ ತಕ್ಷಣಕ್ಕೆ ವೈದ್ಯರು ಮತ್ತು ಸಿಬ್ಬಂದಿ ಲಭ್ಯವಾಗದ ಸ್ಥಿತಿ ಉಂಟಾಗುತ್ತಿದೆ. ಮುಖ್ಯ ಎಂ.ಬಿ.ಬಿ.ಎಸ್ ವೈದ್ಯರ ಕೊರತೆ ಇದೆ. ಒಬ್ಬ ಬಿ.ಎಂ.ಎಸ್. ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಬೆಳಿಗ್ಗೆ 10 ರಿಂದ ಸಂಜೆ 5 ವರೆಗೆ ಲಭ್ಯವಿದ್ದಾರೆ. 24X7 ಹೆರಿಗೆ ಸೌಲಭ್ಯ ಇರುವ ಈ ಆಸ್ಪತ್ರೆಯಲ್ಲಿ ರಾತ್ರಿ ಹೊತ್ತು ರೋಗಿಗಳಿಗೆ, ಹೆರಿಗೆ ನೋವಿನಿಂದ ಬರುವ ಗರ್ಭಿಣಿಯರಿಗೆ ವೈದ್ಯರಂತು ಸಿಗೋದೆ ಇಲ್ಲ’ ಎನ್ನುವ ದೂರುಗಳಿವೆ.
ಈಚೆಗೆ ಹೆರಿಗೆ ನೋವಿನಿಂದ ಬಂದ ಗರ್ಭಿಣಿಗೆ ವೈದ್ಯರು ಮತ್ತು ಸಿಬ್ಬಂದಿ ಸಿಗದ ಹಿನ್ನೆಲೆ ಸುಮಾರು 5 ತಾಸುಗಳ ಕಾಲ ಆಸ್ಪತ್ರೆಯಲ್ಲಿ ಕಾಯ್ದು ನೋವು ಅನುಭವಿಸಿ, ಜಿಮ್ಸ್ಗೆ ರವಾನೆ ಮಾಡಿದ ಪ್ರಸಂಗವು ನಡೆಯಿತು. ಇದಕ್ಕೆಲ್ಲ ಸಿಬ್ಬಂದಿ ಕಟ್ಟಡಗಳ ಸೌಕರ್ಯ ಕೊರತೆ ಎನ್ನುವುದು ಪ್ರಮುಖ ಕಾರಣವಾಗಿದೆ. ಕೊಡಲೆ ಸಂಬಂಧಿಸಿದ ಆರೋಗ್ಯ ಇಲಾಖೆ ವಸತಿ ಕಟ್ಟಡಗಳ ದುರಸ್ತಿ ಹಾಗೂ ಹೊಸ ಕಟ್ಟಡಗಳ ನಿರ್ಮಾಣ ಕಾರ್ಯ ಕೈಗೊಳ್ಳಬೇಕು. ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
‘ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆರಿಸುವುದು ಸೇರಿದಂತೆ ಸಿಬ್ಬಂದಿಗೆ ವಸತಿ ಸೌಕರ್ಯ ಒದಗಿಸುವ ಬೇಡಿಕೆ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದೆ, ಬೇಡಿಕೆ ಈಡೆರಿಕೆಗಾಗಿ ಇಲಾಖೆ ವಿರುದ್ದ ಹೋರಾಟ ಅನಿವಾರ್ಯವಾಗಲಿದೆ’ ಎನ್ನುತ್ತಾರೆ ಸ್ಥಳಿಯ ಬಿಜೆಪಿ ಘಟಕದ ಅಧ್ಯಕ್ಷ ಮಲ್ಲಪ್ಪ ಕುಂದಗೋಳ.
ಆರೋಗ್ಯ ಕೇಂದ್ರದ ಸಿಬ್ಬಂದಿಗೆ ವಾಸ ಯೋಗ್ಯ ಗೃಹಗಳ ನಿರ್ಮಾಣ ಕಾರ್ಯ ಕೈಗೊಳ್ಳಬೇಕು. ಇದರಿಂದ ವೈದ್ಯರು ಮತ್ತು ಸಿಬ್ಬಂದಿಗೆ ಅನುಕೂಲವಾಗಲಿದೆ.ಖಾನಸಾಬ ಲಾಡಮ್ಮನವರ ಸ್ಥಳಿಯ ನಿವಾಸಿ.
ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ ವಸತಿ ಗೃಹಗಳ ಸಮಸ್ಯೆಯಿಂದಾಗಿ ಸಿಬ್ಬಂದಿಗೆ ತೊಂದರೆ ಆಗುತ್ತಿದೆ. ಕೂಡಲೆ ಆರೋಗ್ಯ ಇಲಾಖೆ ಸಮಸ್ಯೆ ನಿವಾರಣೆ ಮಾಡಬೇಕು.ದತ್ತಪ್ಪ ಯಳವತ್ತಿ ರೈತ ಸಂಘದ ಮುಖಂಡ.
- ವಸತಿ ಕಟ್ಟಡ ದುರಸ್ತಿ ಕಾರ್ಯ ಶೀಘ್ರದಲ್ಲಿ ಮಾಡಲಾಗುವುದು. ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತನೆ ಆದ ನಂತರ ಎಲ್ಲ ವಸತಿ ಹೊಸ ಕಟ್ಟಡಗಳ ನಿರ್ಮಾಣ ಕಾರ್ಯ ಆಗುತ್ತದೆ. ಡಾ.ಪ್ರೀತ್ ಖೋನಾ.ಗದಗ ತಾಲ್ಲೂಕು ವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.