
ಮುಂಡರಗಿ: ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ತಾಲ್ಲೂಕು ಡಿಪ್ಲೊಮಾ ಹಾಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಂಜೂರಾತಿ ಹೋರಾಟ ಸಮಿತಿ ಕಾರ್ಯಕರ್ತರು ತಾಲ್ಲೂಕಿನಲ್ಲಿ ಸರ್ಕಾರಿ ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಕಾಲೇಜು ಪ್ರಾರಂಭ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
ಸಮಿತಿ ಅಧ್ಯಕ್ಷ ದೇವಪ್ಪ ಇಟಗಿ ಮಾತನಾಡಿ, ‘ನಂಜುಂಡಪ್ಪ ವರದಿಯ ಪ್ರಕಾರ ಮುಂಡರಗಿ ತಾಲ್ಲೂಕು ಹಿಂದುಳಿದ ತಾಲ್ಲೂಕಾಗಿದ್ದು, ದೊರೆಯಬೇಕಾದ ಸೌಲಭ್ಯ ಸಮರ್ಪಕವಾಗಿ ದೊರೆಯುತ್ತಿಲ್ಲ. ತಾಲ್ಲೂಕಿನಲ್ಲಿ ಸರ್ಕಾರಿ ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಕಾಲೇಜು ಇಲ್ಲದಿದ್ದರಿಂದ ಬಡವರು ಹಾಗೂ ಹಿಂದುಳಿದ ವರ್ಗದ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ತಾಲ್ಲೂಕಿಗೆ ಕಾಲೇಜು ಮಂಜೂರು ಮಾಡಬೇಕು’ ಆಗ್ರಹಿಸಿದರು.
ಕೊರ್ಲಹಳ್ಳಿ ಗ್ರಾಮದಲ್ಲಿ ಎಸ್ಸಿ, ಎಸ್ಟಿ ವಸತಿ ನಿಲಯ ಮಂಜೂರು ಹಾಗೂ ವಸತಿ ನೀಲಯ ಮೇಲ್ದರ್ಜೆ, ಆದರ್ಶ ವಿದ್ಯಾಲಯದ ಕಿರು ಬಸ್ ನಿಲ್ದಾಣ ನಿರ್ಮಿಸಿಬೇಕು ಕಾರ್ಯಕರ್ತರು ಒತ್ತಾಯಿಸಿದರು.
ಕೊರ್ಲಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜಶೇಖರ ಗುಡ್ಲಾನೂರ, ಸಿದ್ದಪ್ಪ ಮುದ್ಲಾಪುರ, ನಿವೃತ್ತ ಸೈನಿಕ ವೆಂಕಟೇಶ್ ಗುಗ್ಗರಿ, ನಾಗರಾಜ ಮುರುಡಿ, ವೀರಭದ್ರಪ್ಪ ಮುದ್ದಿ, ಉಮೇಶ ತೆಂಗಿನಕಾಯಿ, ರಾಮಣ್ಣ ಮದನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.