ADVERTISEMENT

ನರಗುಂದ: ಪುರಸಭೆ ಕದನಕ್ಕೆ ಕಣ ಸಿದ್ಧ

ಮೀಸಲಾತಿ ಬದಲು; ಪುನಾರಾಯ್ಕೆ ಬಯಸಿದ ಆಕಾಂಕ್ಷಿಗಳಿಗೆ ಹಿನ್ನೆಡೆ

ಬಸವರಾಜ ಹಲಕುರ್ಕಿ
Published 4 ಮೇ 2019, 19:46 IST
Last Updated 4 ಮೇ 2019, 19:46 IST
ನರಗುಂದ ಪುರಸಭೆ
ನರಗುಂದ ಪುರಸಭೆ   

ನರಗುಂದ: ಪಟ್ಟಣದಲ್ಲಿ ಪುರಸಭೆ ಚುನಾವಣೆ ಕಾವು ಆರಂಭವಾಗಿದ್ದು, ಉರಿ ಬಿಸಿಲು ಲೆಕ್ಕಿಸದೇ ಟಿಕೆಟ್‌ ಆಕಾಂಕ್ಷಿಗಳು ಸ್ಥಳೀಯ ಮುಖಂಡರ ಮನೆಗೆ ಅಲೆದಾಡುತ್ತಿದ್ದಾರೆ. ಚುನಾವಣೆಗೆ ಕೇವಲ 25 ದಿನ ಬಾಕಿ ಇದ್ದು ಸ್ಪರ್ಧಿಸಲು ನಾ ಮುಂದು, ನೀ ಮುಂದು ಎನ್ನು ವಾತಾವಾರಣ ಸೃಷ್ಟಿಯಾಗಿದೆ.

ಈಗಷ್ಟೇ ಲೋಕಸಭೆ ಚುನಾವಣೆ ಕಾವು ಇಳಿದಿದೆ. ಇದರ ಬೆನ್ನಲ್ಲೇ ಮತ್ತೊಂದು ಚುನಾವಣೆ ಬಂದಿರುವುದು ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚಿಸಿದೆ. ಕಳೆದ ಮೂರು ಅವಧಿಗಳಿಂದಲೂ ಪುರಸಭೆ ಆಡಳಿತ ಬಿಜೆಪಿ ತೆಕ್ಕೆಯಲ್ಲಿದೆ. ಈ ಬಾರಿಯೂ ಅದೇ ಹುಮ್ಮಸ್ಸಿನಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಎದುರಾಳಿ ಕಾಂಗ್ರೆಸ್ ಪಕ್ಷವು ಆಂತರಿಕ ಭಿನ್ನಮತವನ್ನು ಉಡಿಯಲ್ಲಿಟ್ಟುಕೊಂಡೇ ಚುನಾವಣೆ ಎದುರಿಸಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‍ಗಳಿದ್ದು ಕಳೆದ ಚುನಾವವಣೆಯಲ್ಲಿ 12 ಬಿಜೆಪಿ, 9 ಕಾಂಗ್ರೆಸ್ ತಲಾ ಒಂದೊಂದು ಸ್ಥಾನವನ್ನು ಬಿಎಎಸ್‍ಆರ್ ಹಾಗೂ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದರು.

ಈ ವರ್ಷ ಮೀಸಲಾತಿ ಬದಲಾವಣೆಯಾಗಿದ್ದು, ಪುನಾರಾಯ್ಕೆ ಬಯಸಿದ ಆಕಾಂಕ್ಷಿಗಳಿಗೆ ತುಸು ಹಿನ್ನೆಡೆಯಾಗಿದೆ. ತಮ್ಮ ವಾರ್ಡ್‌ನಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ಆಕಾಂಕ್ಷಿಗಳಿಗೆ ತೀವ್ರ ಬೇಸರವಾಗಿದ್ದು, ಬೇರೆ ವಾರ್ಡ್‍ಲ್ಲಿ ಅವಕಾಶ ಸಿಕ್ಕರೆ ಬಳಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಉರಿ ಬಿಸಿಲಿನಲ್ಲೂ ಪುರಸಭೆ ಚುನಾವಣೆ ಚರ್ಚೆ ಅರಳಿಕಟ್ಟೆಗಳ ಮೇಲೆ, ದೇವಸ್ಥಾನಗಳಲ್ಲಿ, ಬಯಲಲ್ಲಿ ಹೆಚ್ಚಿನ ಚರ್ಚೆ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.