ADVERTISEMENT

ಸ್ವಂತ ಖರ್ಚಿನಲ್ಲಿ ಕಚೇರಿ ದುರಸ್ತಿ; ಜನಸ್ನೇಹಿ ಕಚೇರಿಗೆ ಆದ್ಯತೆ ನೀಡಿದ ಅಧಿಕಾರಿ

ಲಕ್ಷ್ಮಣ ಎಚ್.ದೊಡ್ಡಮನಿ
Published 17 ಫೆಬ್ರುವರಿ 2021, 3:44 IST
Last Updated 17 ಫೆಬ್ರುವರಿ 2021, 3:44 IST
ಮುಂಡರಗಿ ತಾಲ್ಲೂಕಿನ ಡಂಬಳದ ಕಂದಾಯ ನಿರೀಕ್ಷಕರ ಕಾರ್ಯಾಲಯವನ್ನು ಸಾರ್ವಜನಿಕರ ಸಹಕಾರದಿಂದ ಕಂದಾಯ ನಿರೀಕ್ಷಕ ಎಂ.ಎ. ನದಾಫ ನವೀಕರಿಸಿದ್ದಾರೆ
ಮುಂಡರಗಿ ತಾಲ್ಲೂಕಿನ ಡಂಬಳದ ಕಂದಾಯ ನಿರೀಕ್ಷಕರ ಕಾರ್ಯಾಲಯವನ್ನು ಸಾರ್ವಜನಿಕರ ಸಹಕಾರದಿಂದ ಕಂದಾಯ ನಿರೀಕ್ಷಕ ಎಂ.ಎ. ನದಾಫ ನವೀಕರಿಸಿದ್ದಾರೆ   

ಡಂಬಳ(ಗದಗ): ಸರ್ಕಾರಿ ಕಚೇರಿ ಜನಸ್ನೇಹಿಯಾಗಿ ಇರಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು ಎಂಬ ಉದ್ದೇಶದಿಂದ ₹1.20 ಲಕ್ಷ ಸ್ವಂತ ಹಣ ವಿನಿಯೋಗಿಸಿ ಸರ್ಕಾರಿ ಕಟ್ಟಡವನ್ನು ದುರಸ್ತಿಗೊಳಿಸಿರುವ ಇಲ್ಲಿನ ಕಂದಾಯ ನಿರೀಕ್ಷಕ ಎಂ.ಎ.ನದಾಫ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

15 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಕಂದಾಯ ನಿರೀಕ್ಷಕರ ಕಟ್ಟಡ ದುರಸ್ತಿಗೆ ಬಂದಿತ್ತು. ಅವ್ಯವಸ್ಥೆಯಿಂದ ಕೂಡಿದ್ದ ಕಟ್ಟಡದ ನವೀಕರಣಕ್ಕೆ ಅವರು ಸರ್ಕಾರದ ಅನುದಾನ ನಿರೀಕ್ಷಿಸದೆ, ಸಾರ್ವಜನಿಕರ ಸಹಕಾರದೊಂದಿಗೆ ಚೆಂದಗಾಣಿಸಿದ್ದಾರೆ.

ಕಟ್ಟಡದ ಆವರಣದಲ್ಲಿನಮುಳ್ಳುಕಂಟಿಗಳನ್ನು ಸ್ವಚ್ಛಗೊಳಿಸಿ, ಸುತ್ತಲಿನ ನಾಲ್ಕು ಅಡಿ ಪ್ರದೇಶಕ್ಕೆ ಸಿಮೆಂಟ್‌ ಹಾಕಿಸಿದ್ದಾರೆ. ವಿದ್ಯುತ್ ಸಂಪರ್ಕ ನವೀಕರಣಗೊಳಿಸಿದ್ದಾರೆ. ಕಟ್ಟಡ ದುರಸ್ತಿ ಮಾಡಿಸುವುದರ ಜತೆಗೆ ಬಣ್ಣ ಹಚ್ಚಿಸಿದ್ದಾರೆ. ಕೊಠಡಿಗಳಿಗೆ ನೆಲಹಾಸು ಹಾಗೂ ಕಿಟಕಿ, ಬಾಗಿಲುಗಳಿಗೆ ಪರದೆ ಹಾಕಿಸಿದ್ದಾರೆ.

ADVERTISEMENT

‘ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ವೈಬ್‌ಸೈಟ್‌ ರೂಪಿಸಿ, ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನಸಂಖ್ಯೆ, ಶಾಲೆಗಳ ಸಂಖ್ಯೆ, ಪ್ರತಿ ಗ್ರಾಮದ ಸಾಮಾನ್ಯ ಮಾಹಿತಿ ಲಭ್ಯವಾಗುವಂತೆ ಮಾಡಬೇಕೆಂಬ ಆಸೆ ಇದೆ’ ಎಂದು ಎಂ.ಎ.ನದಾಫ ಹೇಳಿದರು.

‘ಸರ್ಕಾರಿ ಅಧಿಕಾರಿ ಎಂ.ಎ.ನದಾಫ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಸಾರ್ವಜನಿಕರ ಸಹಕಾರ ಪಡೆದು ಕಚೇರಿ ಅಭಿವೃದ್ಧಿ ಮಾಡಿರುವುದು ಮಾದರಿ’ ಎನ್ನುತ್ತಾರೆ ಸ್ಥಳೀಯ ಮುಖಂಡ ಮಲ್ಲಪ್ಪ ಮಠದ ಹಾಗೂ ಬೀರಪ್ಪ ಎಸ್. ಬಂಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.