ADVERTISEMENT

ಜಿಟಿಜಿಟಿ ಮಳೆ; ಕೊಳೆತ ಈರುಳ್ಳಿ

ಶಿರಹಟ್ಟಿ ತಾಲ್ಲೂಕಿನಾದ್ಯಂತ 1,320 ಹೇಕ್ಟರ್‌ ಈರುಳ್ಳಿ ಬಿತ್ತನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 7:04 IST
Last Updated 29 ಸೆಪ್ಟೆಂಬರ್ 2020, 7:04 IST
ಶಿರಹಟ್ಟಿ ತಾಲ್ಲೂಕಿನ ಸುಗನಹಳ್ಳಿ ಗ್ರಾಮದ ರೈತರ ಹೊಲದಲ್ಲಿ ಸತತ ಮಳೆಗೆ ಕೊಳೆತಿರುವ ಈರುಳ್ಳಿ
ಶಿರಹಟ್ಟಿ ತಾಲ್ಲೂಕಿನ ಸುಗನಹಳ್ಳಿ ಗ್ರಾಮದ ರೈತರ ಹೊಲದಲ್ಲಿ ಸತತ ಮಳೆಗೆ ಕೊಳೆತಿರುವ ಈರುಳ್ಳಿ   

ಶಿರಹಟ್ಟಿ: ಕಳೆದ ವರ್ಷಕ್ಕಿಂತ ಈ ವರ್ಷ ತಾಲ್ಲೂಕಿನಲ್ಲಿ ಈರುಳ್ಳಿ ಬೆಳೆಗಳು ಉತ್ತಮವಾಗಿದ್ದವು. ಆದರೆ ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಈರುಳ್ಳಿ ಜಮೀನಿನಲ್ಲೇ ಕೊಳೆಯುತ್ತಿದೆ.

ಈ ವರ್ಷ ಮುಂಗಾರು ಹಂಗಾಮಿನಲ್ಲಿ ಶಿರಹಟ್ಟಿ ತಾಲ್ಲೂಕಿನ ವ್ಯಾಪ್ತಿಯಲ್ಲಿ 1,320 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿತ್ತು. ಮುಂಗಾರು ಮಳೆ ಸಮೃದ್ಧವಾಗಿ ಆಗಿದ್ದರಿಂದ ಈ ವರ್ಷ ಬಂಪರ್ ಬೆಳೆ ನಿರೀಕ್ಷಿಸಲಾಗಿತ್ತು.

ಸದ್ಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್‌ ಈರುಳ್ಳಿಗೆ 900 ರಿಂದ ₹1,400 ಇದ್ದು, ಮಾಡಿದ ಖರ್ಚು ಭರಿಸಲಾಗದ ಪರಿಸ್ಥಿತಿ ಎದುರಾಗಿದೆ.

ADVERTISEMENT

‘ಎಕರೆಗೆ ₹20 ಸಾವಿರ ಖರ್ಚು ಮಾಡಿದ್ದೆವು. ನಾವು ಸಂಕಷ್ಟದಲ್ಲಿದ್ದೇವೆ. ಸಂಬಂಧ ಪಟ್ಟ ಅಧಿಕಾರಿಗಳು ನಮ್ಮ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ರೈತರ ಕಷ್ಟಗಳನ್ನು ಪರಿಹರಿಸಬೇಕು’ ಎಂದು ಈರುಳ್ಳಿ ಬೆಳೆದ ತಾಲ್ಲೂಕಿನ ಭಾವನೂರು ಗ್ರಾಮದ ರೈತರಾದ ಹನುಮಂತಪ್ಪ ಬದಮ್ಮನವರ, ಫಕ್ಕೀರಗೌಡ ಪಾಟೀಲ ತಮ್ಮ ಅಳಲನ್ನು ತೋಡಿಕೊಂಡಿರು.

‘ಕಳೆದ ವರ್ಷ ಈರುಳ್ಳಿಗೆ ಬಂಗಾರದ ಬೆಲೆ ಇತ್ತು. ಅದೇ ನಿರೀಕ್ಷೆಯಲ್ಲಿ ಈರುಳ್ಳಿ ಬೆಳೆದಿದ್ದೆ. ಈಗ ದಿಕ್ಕು ತೋಚದಂತಾಗಿದೆ. ಸರ್ಕಾರ ನಮ್ಮ ನೆರವಿಗೆ ನಿಲ್ಲಬೇಕು’ ಎಂದು ಸುಗಮನಹಳ್ಳಿ ಗ್ರಾಮದ ರೈತ ಬಸವಣ್ಣೆಪ್ಪ.ಚ.ಜಕ್ಕಲಿ ಒತ್ತಾಯಿಸಿದರು.

‘ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನಾ ಕಾರ್ಯ ಕೈಗೊಂಡಿದ್ದು, ಸಮೀಕ್ಷಾ ಮಾಹಿತಿಯನ್ನು ಶೀಘ್ರದಲ್ಲೇ ತಹಶೀಲ್ದಾರ್‌ ಅವರಿಗೆ ಸಲ್ಲಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.