
ರೋಣ: ರೈತರು ರಾಸಾಯನಿಕಗಳನ್ನು ಬಳಸದೆ ಸಾವಯವ ಮಾದರಿಯಲ್ಲಿ ಕೃಷಿ ನಡೆಸಿದರೆ ಆರೋಗ್ಯದ ಜೊತೆಗೆ ಕೃಷಿ ವೆಚ್ಚಗಳು ಕಡಿಮೆಯಾಗಿ ಲಾಭ ಪಡೆಯಬಹುದು ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಸಾಬ್ ಹೊಸಮನಿ ಹೇಳಿದರು.
ತಾಲ್ಲೂಕಿನ ಕೊತಬಾಳ ಗ್ರಾಮದಲ್ಲಿ ಕೆಎಸ್ಎಸ್ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವತಿಯಿಂದ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಶನಿವಾರ ಸಾವಯವ ಕೃಷಿ ಕುರಿತು ಉಪನ್ಯಾಸ ನೀಡಿದರು.
ದೇಶದಲ್ಲಿ ಹಸಿರು ಕ್ರಾಂತಿಯ ನಂತರ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ಅತಿಯಾಗಿದ್ದು ಇದರಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಅಂತರ್ಜಲ ಕೂಡ ಸಂಪೂರ್ಣ ಕಲುಷಿತಗೊಳ್ಳುತ್ತಿದ್ದು ಇದನ್ನು ತಡೆಯಲು ಸಾವಯುವ ಕೃಷಿ ಕೈಗೊಳ್ಳುವುದು ಅವಶ್ಯಕವಾಗಿದೆ.
ರೈತರು ಪಶು ಸಾಕಾಣಿಕೆ ಮಾಡುವುದರಿಂದ ಹೈನೋತ್ಪಾದನೆ ಮೂಲಕ ಆದಾಯ ಗಳಿಸಬಹುದು ಜೊತೆಗೆ ಕೃಷಿ ತ್ಯಾಜ್ಯಗಳಿಂದ ಗೊಬ್ಬರ ಉತ್ಪಾದನೆ ಮಾಡಬಹುದಾಗಿರುವುದರಿಂದ ರೈತರಿಗೆ ಉಳಿತಾಯದ ಜೊತೆಗೆ ಅಧಿಕ ಖರ್ಚು ಮಾಡುವುದು ಕಡಿಮೆಯಾಗಿ ಕೃಷಿಯನ್ನು ಲಾಭದಾಯಕ ವನ್ನಾಗಿ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಎಚ್ಪಿಎಸ್ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮಲ್ಲಪ್ಪ ನಾಲ್ವಾಡದ, ಕೆಎಸ್ಎಸ್ ಕಾಲೇಜಿನ ಪ್ರಾಚಾರ್ಯ ಸಿ.ಬಿ.ಪೋಲಿಸ ಪಾಟೀಲ, ಎನ್ಎಸ್ಎಸ್ ಘಟಕದ ಎಸ್.ಆರ್.ನದಾಫ, ಉಪನ್ಯಾಸಕರಾದ ಎಂ.ಎಚ್.ನಾಯ್ಕರ, ಎಸ್.ಎಸ್.ಮಠದ, ಕೆ.ಕೆ.ಹಿರೇಕಲ್ಲಪ್ಪನವರ, ಬಸವರಾಜ ಜಂಗಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.