ಗದಗ: ತಾಲ್ಲೂಕಿನ ವಿವಿಧೆಡೆ ಸೋಮವಾರ ಉತ್ತಮ ಮಳೆ ಸುರಿಯಿತು.
ಅವಳಿ ನಗರ ಗದಗ ಬೆಟಗೇರಿಯಲ್ಲಿ ಸೋಮವಾರ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಆಗಾಗ ತುಂತುರು ಮಳೆಯ ಸಿಂಚನವಾಗುತ್ತಿತ್ತು. ಮಧ್ಯಾಹ್ನ 1.30ಕ್ಕೆ ಆರಂಭಗೊಂಡ ಬಿರುಸು ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಬಳಿಕ ಬಿಡುವು ನೀಡಿದ ಮಳೆ ಸಂಜೆಯ ನಂತರ ಜಿಟಿಜಿಟಿಯಾಗಿ ಸುರಿಯಿತು.
ಸೋಮವಾರ ಸುರಿದ ಸಣ್ಣ ಮಳೆಗೆ ಗದಗ ನಗರದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಗುಂಡಿ ಬಿದ್ದಿರುವ ರಸ್ತೆಗಳಲ್ಲಿನ ಸಂಚಾರ ದುಸ್ತರವಾಗಿತ್ತು. ಮಣ್ಣಿನ ರಸ್ತೆಗಳೆಲ್ಲವೂ ಜಾರುಬಂಡಿಯಂತಾಗಿದ್ದರಿಂದ ಬೈಕ್ ಸವಾರರು ಬಿದ್ದು ಗಾಯಮಾಡಿಕೊಂಡರು.
ಮಳೆಗಾಲ ಆರಂಭಗೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ಚರಂಡಿ ಸ್ವಚ್ಛತೆಗೆ ಕ್ರಮವಹಿಸದ ಕಾರಣ ಚರಂಡಿಗಳು ಉಕ್ಕಿ ಹರಿದವು. ಪಾದಚಾರಿಗಳು ಮೂಗು ಮುಚ್ಚಿಕೊಂಡು, ಕೊಳಚೆ ನೀರನ್ನು ತುಳಿದುಕೊಂಡೇ ಅಡ್ಡಾಡಿದರು. ‘ನಗರದ ಸ್ವಚ್ಛತೆಗೆ ಕಾಳಜಿ ವಹಿಸದ, ನಗರಸಭೆ ಅಧಿಕಾರಿಗಳು ನಾಲಾಯಕ್’ ಎಂದು ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.
ಮಳೆ– ಮೋಡದ ಚಿಣ್ಣಾಟ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿತು. ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆಯಿಂದಾಗಿ ಮಾರುಕಟ್ಟೆಗಳಲ್ಲಿ ಜನ ಸಂಚಾರ ಕಡಿಮೆ ಆಗಿತ್ತು. ಹಳ್ಳಿಗಳಿಂದ ನಗರ ಪ್ರದೇಶಕ್ಕೆ ಬಂದಿದ್ದವರು ಬೇಗನೇ ಊರು ಸೇರಿಕೊಂಡರು. ನಗರದ ಜನರು ಸಂಜೆ ನಂತರ ಮನೆ ಬಿಟ್ಟು ಹೊರಬರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.