ADVERTISEMENT

ಶ್ರೀಗಳ ನರಗುಂದ ಪ್ರವೇಶಕ್ಕೆ ಪೊಲೀಸರಿಂದ ತಡೆ

ಪ್ರಭಾವ ಬಳಸಿ ಮಠಾಧೀಶರಿಗೆ ತಡೆ– ದಿಂಗಾಲೇಶ್ವರ ಶ್ರೀ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 19:01 IST
Last Updated 27 ಏಪ್ರಿಲ್ 2022, 19:01 IST
ನರಗುಂದದ ಕಲಕೇರಿ ಬಳಿಯ ಜಮೀನಿನಲ್ಲಿ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳು ಮಾತನಾಡಿದರು
ನರಗುಂದದ ಕಲಕೇರಿ ಬಳಿಯ ಜಮೀನಿನಲ್ಲಿ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳು ಮಾತನಾಡಿದರು   

ನರಗುಂದ (ಗದಗ ಜಿಲ್ಲೆ): ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರ ಮನೆ ಮುಂದೆ ಧರಣಿ ನಡೆಸಲು ಬರುತ್ತಿದ್ದ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳನ್ನು ತಾಲ್ಲೂಕಿನ ಕಲಕೇರಿ ಚೆಕ್‌ಪೋಸ್ಟ್ ಬಳಿ ಪೊಲೀಸರು ಬುಧವಾರ ತಡೆದರು.

ಬುಧವಾರ ಬೆಳಿಗ್ಗೆ 11.30ರ ಸುಮಾರಿಗೆ ಕಲಕೇರಿ ಬಳಿಗೆ ಬಂದ ದಿಂಗಾಲೇಶ್ವರ ಶ್ರೀಗಳನ್ನು ಶಾಂತಿ ಸುವ್ಯವಸ್ಥೆಯ ನೆಪವೊಡ್ಡಿ ಪೊಲೀಸರು ತಡೆದಿದ್ದರಿಂದ, ಶ್ರೀಗಳು ಸಿಡಿಮಿಡಿಗೊಂಡರು.

ನರಗುಂದಕ್ಕೆ ತೆರಳಿ ಧರಣಿ ಮಾಡಲು ಅವಕಾಶ ಕೊಡುವಂತೆ ಶ್ರೀಗಳುಬಿಗಿಪಟ್ಟು ಹಿಡಿದರು. ಪೊಲೀಸರು ಮತ್ತು ಸ್ವಾಮೀಜಿ ನಡುವೆ ವಾಗ್ವಾದ ನಡೆದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ADVERTISEMENT

‘ಸಚಿವ ಸಿ.ಸಿ.ಪಾಟೀಲ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ತೇಜೋವಧೆ ಮಾಡಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ಮಾಡಲು ಬಂದರೆ ಪೊಲೀಸರು ನಮ್ಮನ್ನು ರಸ್ತೆಯಲ್ಲೇ ತಡೆದಿದ್ದಾರೆ’ ಎಂದುದಿಂಗಾಲೇಶ್ವರ ಶ್ರೀಗಳು ಆರೋಪಿಸಿದರು.

‘ನಾವೆಲ್ಲ ಮಠಾಧಿಪತಿಗಳು. ನ್ಯಾಯ, ಕಾನೂನು ಸುವ್ಯವಸ್ಥೆ ಕಾಪಾಡುವಂತಹವರು. ನಮ್ಮನ್ನು ತಡೆದಿರುವುದು ಸಲ್ಲದು. ಇಂತಹ ಸಚಿವರಿಗೆ ಸಂಘ ಪರಿವಾರದಿಂದ ಸಂಸ್ಕಾರದ ಅಗತ್ಯವಿದೆ. ಸಿಎಂ ಬುದ್ಧಿಹೇಳಬೇಕು’ ಎಂದರು.

‘ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ನಾನು ಮಾತನಾಡಿದ್ದೇನೆ. ಅವುಗಳಿಗೆ ಸ್ಪಂದಿಸದೇ ನನ್ನ ತೇಜೋವಧೆಗೆ ಮುಂದಾಗಿರುವುದು ಸರಿಯೆ? ಪೊಲೀಸರು ತಡೆಯೊಡ್ಡಿದ್ದರಿಂದ ಧರಣಿ ಕೈಬಿಟ್ಟು ಹೋಗುತ್ತೇನೆ. ಇನ್ನು ಮುಂದಾದರೂ ಸಚಿವರು ಮಠಾಧಿಶರ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು’ ಎಂದು ಹೇಳಿದರು.

‘ರಾಜ್ಯದ ವಿವಿಧೆಡೆಯಿಂದ ನರಗುಂದಕ್ಕೆ ಬರುತ್ತಿದ್ದ 25 ಮಠಾಧೀಶ
ರನ್ನು ಪೊಲೀಸರು ತಡೆದಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಇಂದಿನಿಂದ ನಮ್ಮ
ಹೋರಾಟ ಬೇರೆ ರೀತಿಯಲ್ಲಿ ಮುಂದುವರಿಯುತ್ತದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.