ಶಿರಹಟ್ಟಿ: ‘ಆರೋಗ್ಯ ಮತ್ತು ಶಿಕ್ಷಣ ಇರುವ ನಾಡಿನಲ್ಲಿ ಬಡತನ ಮತ್ತು ಅಜ್ಞಾನ ಎಂದಿಗೂ ತಲೆದೂರುವುದಿಲ್ಲ. ಕರ್ನಾಟಕದ ಪ್ರತಿ ಮೂಲೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ತಲುಪಿದಾಗ ನನ್ನ ಕನಸು ಈಡೇರುತ್ತದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಶನಿವಾರ ನಡೆದ ಬಸವರಾಜ ಕೊಂಚಿಗೇರಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ನೂತನ ಕೊಠಡಿಗಳ ಉದ್ಘಾಟನೆ, ಗ್ರಂಥಾಲಯ ಉದ್ಘಾಟನೆ, ಗ್ರಾಮದ ಸಂತೆ ಕಟ್ಟೆ ಉದ್ಘಾಟನೆ, ಎಚ್ಡಿಎಫ್ಸಿ ಬ್ಯಾಂಕ್ ನೂತನ ಶಾಖೆ ಉದ್ಘಾಟನೆ, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಮೂರ್ತಿ ಅನಾವರಣ, ಬೀರೇಶ್ವರ ಸಭಾಭವನ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಾನು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ವಿವೇಕ ಎಂಬ ಯೋಜನೆ ಮೂಲಕ 9 ಸಾವಿರ ಶಾಲಾ ಕಟ್ಟಡ ನಿರ್ಮಾಣಕ್ಕೆ ₹3 ಸಾವಿರ ಕೋಟಿ ಅನುದಾನ ನೀಡಿದ್ದೇನೆ. ಇದೀಗ ಶಾಲಾ ಕಟ್ಟಡ ನನ್ನ ಕೈಯಿಂದಲೇ ಉದ್ಘಾಟನೆ ಆಗಿದೆ. ರಾಜ್ಯದ ಬಡವರು ಮತ್ತು ರೈತರ ಮಕ್ಕಳು ಸರಿಯಾದ ಶಿಕ್ಷಣ ಇಲ್ಲದೆ ವಂಚಿತರಾಗುತ್ತಿದ್ದಾರೆ. ಅದನ್ನು ಸರಿಪಡಿಸುವ ಉದ್ದೇಶದಿಂದ 30 ಸಾವಿರ ಶಾಲಾ ಕಟ್ಟಡ ಹಾಗೂ 2 ಲಕ್ಷ ಶಿಕ್ಷಕರನ್ನು ನೇಮಕ ಮಾಡಲು ಕೆಲಸ ಪ್ರಾರಂಭಿಸಿದ್ದೆ’ ಎಂದರು.
ಶಾಸಕ ಡಾ.ಚಂದ್ರು ಲಮಾಣಿ, ಶಿರಹಟ್ಟಿ ಬಿಜೆಪಿ ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಶರಣಪ್ಪ ಹರ್ಲಾಪೂರ, ಸಣ್ಣವೀರಪ್ಪ ಹಳ್ಳೆಪ್ಪನವರ, ವಿಶ್ವನಾಥ ಕಪ್ಪತ್ತನವರ, ಶಿವಪ್ರಕಾಶ ಮಹಾಜನಶೆಟ್ಟರ, ತಿಪ್ಪಣ್ಣ ಕೊಂಚಿಗೇರಿ ಇದ್ದರು.
ಬಾಡ ಗ್ರಾಮದಲ್ಲಿ ಸುಮಾರು ₹25 ಕೋಟಿ ವೆಚ್ಚದಲ್ಲಿ ಕನಕದಾಸರ ಅರಮನೆ ಕಟ್ಟಿಸಲಾಗಿದ್ದು ಕನಕದಾಸರ ಆದರ್ಶ ಕೃತಿಗಳನ್ನು ಕೆತ್ತಿಸಲಾಗಿದೆಬಸವರಾಜ ಬೊಮ್ಮಾಯಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.