
ಶಿರಹಟ್ಟಿ: ‘ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಧೈರ್ಯದಿಂದ ಪರೀಕ್ಷೆ ಎದುರಿಸಬೇಕು. ಉಪನ್ಯಾಸಕರ ಪಾಠಬೋಧನೆಯನ್ನು ಮನನ ಮಾಡಿಕೊಂಡು ಸತತ ಅಭ್ಯಾಸ ಮಾಡಬೇಕು’ ಎಂದು ಪ್ರಾಚಾರ್ಯ ಎಂ.ಸಿ.ಭಜಂತ್ರಿ ಹೇಳಿದರು.
ಇಲ್ಲಿನ ಎಫ್.ಎಂ. ಡಬಾಲಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶಿಕ್ಷಣಶಾಸ್ತ್ರ ವಿಷಯ ಕುರಿತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಿದ್ದ ಪ್ರಶ್ನೆಪತ್ರಿಕೆ ಬಿಡಿಸುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಹೊಸ ಪ್ರಶ್ನೆಪತ್ರಿಕೆಯ ಮಾದರಿಯನ್ನು ಸರಿಯಾಗಿ ಅರ್ಥೈಸಿಕೊಂಡು ಪರೀಕ್ಷೆಗೆ ಸಂಪೂರ್ಣ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಬೇಕು’ ಎಂದು ತಿಳಿಸಿದರು.
ಗದಗನ ಎಚ್ಸಿಇಎಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಸುನಂದಾ ಪವಾರ್ ಮಾತನಾಡಿ, ‘ಶಿಕ್ಷಣಶಾಸ್ತ್ರ ವಿಷಯವು ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿದೆ. ಅಂಕ ಗಳಿಕೆ ಒಂದೇ ಮುಖ್ಯವಲ್ಲ. ಅಂಕಗಳ ಜೊತೆಗೆ ನೈತಿಕ ಮೌಲ್ಯಗಳು ಜೀವನದಲ್ಲಿ ಅನ್ವಯವಾಗಬೇಕು. ಎಲ್ಲ ವಿದ್ಯಾರ್ಥಿಗಳು ವ್ಯವಸ್ಥಿತವಾಗಿ ಅಧ್ಯಯನಶೀಲರಾಗಿ ಆತಂಕವಿಲ್ಲದೆ ಧೈರ್ಯದಿಂದ ಪರೀಕ್ಷೆ ಬರೆಯಬೇಕು’ ಎಂದರು.
ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಮಾತನಾಡಿದರು. ಪ್ರೊ. ಎನ್.ಹನುಮರೆಡ್ಡಿ, ವೈ.ಎಸ್. ಪಂಗಣ್ಣವರ, ಪಿ.ಎನ್. ಕುಲಕರ್ಣಿ, ಎಂ.ಎಂ. ನದಾಫ, ಎಫ್.ಎ.ಬಾಬುಖಾನವರ, ಬಸವರಾಜ ಶಿರುಂದ, ಪಿ.ವಿ. ಹೊಸೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.