
ಗಜೇಂದ್ರಗಡ: ತಾಲ್ಲೂಕಿನ ಗುಳಗುಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರುಗಳ ಭಾವಚಿತ್ರವಿರುವ ಫಲಕಕ್ಕೆ ಚಪ್ಪಲಿ ಕಟ್ಟಿ, ದಲಿತ ಸಮುದಾಯದ ವಿರುದ್ದ ಅವಾಚ್ಯ ಪದ ಬಳಸಿ ಚೀಟಿ ಬರೆದಿಟ್ಟ ದುಷ್ಕರ್ಮಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ʼಗುಳಗುಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಅವರ ಭಾವಚಿತ್ರವಿರುವ ಫಲಕಕ್ಕೆ ಚಪ್ಪಲಿ ಹಾಗೂ ದಲಿತ ಸಮುದಾಯದ ವಿರುದ್ದ ಅವಾಚ್ಯ ಪದ ಬಳಸಿ ಬರೆದ ಚೀಟಿ ಕಟ್ಟಿರುವುದು ಅವರ ಅನುಯಾಯಿಗಳಿಗೆ ಘಾಸಿಯುಂಟು ಮಾಡಿದೆ. ಕೋಮು ಗಲಭೆ ಹುನ್ನಾರ ಮಾಡಿದವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳ ಕ್ರಮ ಕೈಗೊಳ್ಳಬೇಕುʼ ಎಂದು ಒತ್ತಾಯಿಸಿದರು.
ಬಳಿಕ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಡಿ.ಜಿ.ಕಟ್ಟಿಮನಿ, ಈಶ್ವರ ದೊಡ್ಡಮನಿ, ಬಸವರಾಜ ಕಡಬಿನ, ಎಂ.ಸಿ.ಹಾದಿಮನಿ, ಯಮನೂರ ಅಬ್ಬಿಗೇರಿ, ಯಲ್ಲಪ್ಪ ಮಾದರ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.