
ಗದಗ: ದಸ್ತಾವೇಜು ಬರಹಗಾರರಿಗೆ ಹಾಗೂ ವಕೀಲರಿಗೆ ಪ್ರತ್ಯೇಕ ಲಾಗಿನ್ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸ್ತಾವೇಜು ಬರಹಗಾರರ ಅಸೋಸಿಯೇಷನ್ ತಾಲ್ಲೂಕು ಘಟಕದ ಸದಸ್ಯರು ಹಾಗೂ ದಸ್ತಾವೇಜು ಬರಹಗಾರರು ನಗರದ ಉಪ ನೋಂದಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇತ್ತೀಚಿನ ಗಣಕೀಕೃತ ಇ-ಸ್ವತ್ತು ಮತ್ತು ಇ-ಅಸ್ತಿ ದಾಖಲೆಗಳಿಂದ ನೋಂದಣಿಗೆ ಆಗುತ್ತಿರುವ ತಪ್ಪುಗಳನ್ನು ಸರಿಪಡಿಸಬೇಕು. ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟಬೇಕು ಮತ್ತು ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾ ಪರಿವೀಕ್ಷಕರಿಂದ ರಾಜ್ಯದ ಎಲ್ಲಾ ಪತ್ರ (ದಸ್ತಾವೇಜು) ಬರಹಗಾರರಿಗೆ ಏಕ ಮಾದರಿಯ ಗುರುತಿನ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪತ್ರ ಬರಹಗಾರರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿ ನೋಂದಣಿಯಾಗುವ ಎಲ್ಲ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಅಥವಾ ವಕೀಲರ ಲೀಗಲ್ ಕಾಂಟ್ರ್ಯಾಕ್ಟ್ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಕಾವೇರಿ 2.0 ತಂತ್ರಾಂಶದಲ್ಲಿ ಸಿಟಿಜನ್ ಲಾಗಿನ್ ಅಳವಡಿಸಿದ್ದು, ಇದರ ಮೂಲಕ ದಸ್ತಾವೇಜುಗಳ ಬಗ್ಗೆ ಮಾಹಿತಿ ಇಲ್ಲದ ಅನಧಿಕೃತ ವ್ಯಕ್ತಿಗಳು ಸಹ ಪತ್ರ ಅಪ್ಲೋಡ್ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ, ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವಾಗುತ್ತಿದೆ. ಅಧಿಕೃತ ಪತ್ರ ಬರಹಗಾರರ ಜೀವನಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ದಸ್ತಾವೇಜು ಬರಹಗಾರರಾದ ಅಶೋಕ ಪರದೇಶಿ, ಹನುಮಂತಸಾ ರಂಗರೇಜ್, ಪ್ರಕಾಶ ಗಾಳಪ್ಪನವರ, ವೀರೇಶ ಕುಲಕರ್ಣಿ, ಗುರುದೇವ ಹಿರೇಮಠ, ನಾಗರಾಜ ದೊಡ್ಡಮನಿ ಹಾಗೂ ಪಿ.ವಿ.ಘಳಿಗೆ ಭಾಗವಹಿಸಿದ್ದರು.