ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆ ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಅನಾಹುತ ಸೃಷ್ಟಿಸಿದೆ. ಅರ್ಧ ಗಂಟೆ ಸುರಿದ ಬಿರುಸು ಮಳೆಗೆ ತಾಲ್ಲೂಕಿನ ಅಡರಕಟ್ಟಿ ಗ್ರಾಮದ ರೈತ ನಿಂಗಪ್ಪ ಬಸಪ್ಪ ರೊಳ್ಳಿ ಅವರ ಬೆಳೆದು ನಿಂತಿರುವ ಗೋವಿನಜೋಳದ ಹೊಲದಲ್ಲಿ ನೀರು ನಿಂತಿದ್ದು ಬೆಳೆಗೆ ಸಾಕಷ್ಟು ಹಾನಿ ಸಂಭವಿಸಿದೆ. ಬೆಳೆ ಹಾನಿ ಉಂಟಾಗಿರುವ ರೈತರಿಗೆ ತಕ್ಷಣ ಪರಿಹಾರ ಕೊಡಬೇಕು ಎಂದು ಗ್ರಾಮದ ರೈತರಾದ ಯಲ್ಲಪ್ಪ ಗಡೆಪ್ಪನವರ, ಶರಣಪ್ಪ ಬಂಗಿ ಸರ್ಕಾರವನ್ನು ಆಗ್ರಹಿಸಿದರು.
ಈ ವರ್ಷದ ಅತೀವೃಷ್ಟಿಗೆ ಈಗಾಗಲೇ ಮುಂಗಾರು ಬೆಳೆಗಳನ್ನು ಕಳೆದುಕೊಂಡಿರುವ ರೈತರು ಇದೀಗ ಸುರಿದ ಮಳೆಗೆ ಮತ್ತೆ ಹುಮ್ಮಸ್ಸುಗೊಂಡಿದ್ದಾರೆ. ಮುಂಗಾರು ಹಾಳಾದರೂ ಹಿಂಗಾರು ಬೆಳೆಗಳಾದರೂ ಬರಲಿ ಎಂಬ ಆಶೆಯಿಂದ ಹಿಂಗಾರು ಬಿತ್ತನೆಗೆ ಅಣಿ ಆಗುತ್ತಿದ್ದಾರೆ. ‘ಈ ವರ್ಷದ ಮುಂಗಾರು ಮಳಿಗೆ ಎಲ್ಲ ಬೆಳೆಗಳೂ ಹಾಳಾಗಿವೆ. ಹಿಂಗಾರು ಬೆಳೆಗಳಾದರೂ ಬರಲಿ ಎಂಬ ಕಾರಣಕ್ಕಾಗಿ ರೈತರು ಹಿಂಗಾರು ಬಿತ್ತನೆಗೆ ಮುಂದಾಗಿದಾರೆ’ ಎಂದು ಲಕ್ಷ್ಮೇಶ್ವರದ ರೈತ ನಾಗರಾಜ ಚಿಂಚಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.