ಲಕ್ಷ್ಮೇಶ್ವರ: ಸಮೀಪದ ಮಾಡಳ್ಳಿಯಿಂದ ಬರದ್ವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯು ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಗ್ರಾಮಸ್ಥರು ಹೊಲಗಳಿಗೆ ಹೋಗಿ ಬರಲು ನಿತ್ಯ ಪರದಾಡಬೇಕಾಗಿದೆ.
ಮಾಡಳ್ಳಿಯಿಂದ ಬರದ್ವಾಡ ಮಾರ್ಗಮಧ್ಯೆ ದೊಡ್ಡ ಹಳ್ಳ ಹರಿಯುತ್ತದೆ. ಪ್ರತಿ ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳಕ್ಕೆ ರಸ್ತೆ ಆಹುತಿಯಾಗುತ್ತದೆ. ಇಂಥ ಸಂದರ್ಭದಲ್ಲಿ ರೈತರು ಹಳ್ಳ ದಾಟಿಯೇ ಹೊಲಗಳಿಗೆ ಹೋಗಬೇಕಿದೆ. ಈ ವರ್ಷವೂ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿರುವ ಕಾರಣ ರೈತರು ಹೊಲಗಳಿಗೆ ಹೋಗಲು ಆಗುತ್ತಿಲ್ಲ. ಮಾಡಳ್ಳಿ ಗ್ರಾಮದ ಬಹುಪಾಲು ರೈತರ ಭೂಮಿ ಹಳ್ಳದ ಆಚೆಬದಿಗೆ ಇದೆ.
ಸದ್ಯ ರೈತರು ಶೇಂಗಾ ಬೆಳೆದಿದ್ದು, ಚಕ್ಕಡಿ ಅಥವಾ ಟ್ರಾಕ್ಟರ್ ತೆಗೆದುಕೊಂಡು ಹೊಲಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹಳ್ಳಕ್ಕೆ ಸೇತುವೆ ಸೇತುವೆ ನಿರ್ಮಿಸುವಂತೆ ಪ್ರತಿ ಬಾರಿ ಒತ್ತಾಯಿಸುತ್ತಲೇ ಇದ್ದೇವೆ. ಆದರೆ, ನಮ್ಮ ಮನವಿಗೆ ಅಧಿಕಾರಿಗಳಿಗಾಗಲಿ ಅಥವಾ ಜನಪ್ರತಿನಿಧಿಗಳಿಗಾಗಲಿ ಸ್ಪಂದಿಸುತ್ತಿಲ್ಲ’ ಎಂದು ಗ್ರಾಮಸ್ಥರಾದ ಜಿ.ವಿ.ಪಾಟೀಲ, ಬಸಪ್ಪ ಜಾಲಗಾರ, ಮಂಜಪ್ಪ ಅಣ್ಣಿಗೇರಿ, ಮಹಾಂತಪ್ಪ ಶ್ಯಾಬಳ, ಈಶಪ್ಪ ಅಣ್ಣಿಗೇರಿ, ಬೈಲೆಪ್ಪ ಅಣ್ಣಿಗೇರಿ, ಬಸಪ್ಪ ಹೊಸಮನಿ ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.