ADVERTISEMENT

ಪೌರಕಾರ್ಮಿಕರಿಗೆ ನಿವೇಶನ; ಪ್ರಸ್ತಾವ

ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 15:30 IST
Last Updated 11 ಡಿಸೆಂಬರ್ 2019, 15:30 IST
ಗದುಗಿನಲ್ಲಿ ಮಂಗಳವಾರ ನಡೆದ ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ, ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಎಸ್‌ಪಿ ಶ್ರೀನಾಥ ಜೋಶಿ, ಸಿಇಒ ಡಾ.ಆನಂದ್ ಕೆ., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾ ಹುಸೇನ್ ಮುಧೋಳ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್‌.ಎನ್‌.ರುದ್ರೇಶ್‌ ಇದ್ದಾರೆ
ಗದುಗಿನಲ್ಲಿ ಮಂಗಳವಾರ ನಡೆದ ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ, ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಎಸ್‌ಪಿ ಶ್ರೀನಾಥ ಜೋಶಿ, ಸಿಇಒ ಡಾ.ಆನಂದ್ ಕೆ., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾ ಹುಸೇನ್ ಮುಧೋಳ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್‌.ಎನ್‌.ರುದ್ರೇಶ್‌ ಇದ್ದಾರೆ   

ಗದಗ: ‘ಸಫಾಯಿ ಕಾರ್ಮಿಕರಿಗೆ ಮನೆ ಬದಲು ಸ್ವಂತ ನಿವೇಶನಗಳನ್ನು ನೀಡಲು, ಸೂಕ್ತ ಮಾರ್ಪಾಡು ಮಾಡಿ ರಾಜ್ಯ ಸರ್ಕಾರಕ್ಕೆ ಅನುಮತಿಗಾಗಿ ಹೊಸ ಪ್ರಸ್ತಾವ ಸಲ್ಲಿಸಬೇಕು’ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಅಧಿಕಾರಿಗಳಿಗೆ ಸೂಚಿಸಿದರು.

ಗದಗ ಜಿಲ್ಲಾ ಪಂಚಾಯಯ್ತಿ ಸಭಾ ಭವನದಲ್ಲಿ ಅಧಿಕಾರಿಗಳು ಹಾಗೂ ಸಫಾಯಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ‘ಬಹುಮಹಡಿ ಅಥವಾ ಗುಂಪು ಮನೆಗಳಿಂದ ಅವಿಭಕ್ತ ಕುಟುಂಬ ವ್ಯವಸ್ಥೆ ಇರುವ ಸಫಾಯಿ ಕರ್ಮಚಾರಿ ಕುಟುಂಬಗಳಿಗೆ ಅನಾನುಕೂಲವೇ ಜಾಸ್ತಿ. ಆದ್ದರಿಂದ ಅವರಿಗೆ ಸ್ವಂತ ನಿವೇಶನ ನೀಡಲು ಕ್ರಮ ವಹಿಸಬೇಕು. ಅವರ ಅವಲಂಬಿತರಿಗೆ ಕೈಗಾರಿಕೆ ಸೇರಿ ವಿವಿಧ ಇಲಾಖೆಗಳಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ನೀಡಬೇಕು. ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ ಕ್ಷೇತ್ರಗಳ ಕುರಿತು ಜಾಗೃತಿ ಮೂಡಿಸಿ ಅವರಿಗೆ ಹೊಸ ಬದುಕು ಕಟ್ಟಿಕೊಡಲು ಅಧಿಕಾರಿಗಳು ಪ್ರಯತ್ನಿಸಬೇಕು’‌ ಎಂದು ಅವರು ಹೇಳಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರ ನೇಮಕಾತಿ ಕುರಿತು ದೇಶದ ಸುಪ್ರೀಂಕೋರ್ಟ್‌ 2007ರಲ್ಲಿ ನೀಡಿದ ತೀರ್ಪಿನ ಅನ್ವಯ ಬಾಕಿ ಉಳಿದ ನೇಮಕಾತಿ ಅವಧಿ ವಿಸ್ತರಣೆ ಅಗತ್ಯ. ಕ್ಷೇಮಾಭಿವೃದ್ಧಿ ಯೋಜನೆಯಡಿ ಆದ ನೇಮಕಾತಿ ಹಾಗೂ 2017ರ ಹೊಸ ನಿಯಮಗಳಡಿ ಆಗಿರುವ ಸಫಾಯಿ ಕಾರ್ಮಿಕರ ನೇಮಕಾತಿ ಕುರಿತು ತಮಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.

ADVERTISEMENT

‘ಗದಗ ನಗರದಲ್ಲಿ ವಕಾರಸಾಲು ತೆರವುಗೊಳಿಸುವ ಸಂದರ್ಭದಲ್ಲಿ ಪೌರಕಾರ್ಮಿಕರು, ಒಗ್ಗಟ್ಟಿನಿಂದ ಪ್ರಶಂಸನೀಯ ಕಾರ್ಯ ಮಾಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.

ಸಿಇಒ ಡಾ.ಆನಂದ್ ಕೆ., ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾ ಹುಸೇನ್ ಮುಧೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.