
ಗಜೇಂದ್ರಗಡ: ‘ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ, ಪ್ರಾಯೋಗಿಕ ಜ್ಞಾನ ಉತ್ತೇಜಿಸುವ ಪ್ರಮುಖ ವೇದಿಕೆಯಾಗಿದ್ದು, ವಿದ್ಯಾರ್ಥಿಗಳಿಗೆ ವಿಜ್ಞಾನ ತತ್ವಗಳನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ’ ಎಂದು ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯ ಉಪಾಧ್ಯಕ್ಷೆ ಉಮಾ ಮ್ಯಾಕಲ್ ಹೇಳಿದರು.
ಪಟ್ಟಣದ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಸ್ತು ಪ್ರದರ್ಶನಗಳಲ್ಲಿ ವಿದ್ಯಾರ್ಥಿಗಳ ಸೂಪ್ತ ಪ್ರತಿಭೆ ಅನಾವರಣಗೊಳ್ಳುತ್ತದೆ’ ಎಂದರು.
ವಿದ್ಯಾರ್ಥಿಗಳು ವಿಜ್ಞಾನ ಮಾದರಿ ತಯಾರಿಸುವುದರಿಂದ ಆತ್ಮವಿಶ್ವಾಸ ವೃದ್ಧಿಸುವುದರ ಜೊತೆಗೆ ಸಂವಹನ ಕೌಶಲ ಬೆಳೆಯುತ್ತದೆ. ವಿಜ್ಞಾನ ವಸ್ತು ಪ್ರದರ್ಶನದ ಹಿಂದೆ ಶಿಕ್ಷಕರ ಶ್ರಮ ಹೆಚ್ಚಿದೆ’ ಎಂದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸೌರವ್ಯೂಹ, ವಾಯು ಮಾಲಿನ್ಯ, ಜಲ ಮಾಲಿನ್ಯ, ಹಸಿರು ಮನೆ ಪರಿಣಾಮ, ಸೂರ್ಯ ಗ್ರಹಣ, ಪರಿಸರ ಸಂರಕ್ಷಣೆ, ಮಾನವನ ಅಂಗಾರ ರಚನೆ ಸೇರಿದಂತೆ 115 ವಿವಿಧ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ, ಅವುಗಳ ಕಾರ್ಯ ವಿಧಾನ ವಿವರಿಸಿದರು.
ಶಾಲೆಯ ಅಧ್ಯಕ್ಷ ಕಳಕಪ್ಪ ಮ್ಯಾಗೇರಿ ಮಾತನಾಡಿದರು. ಶಾಲೆಯ ಕಾರ್ಯದರ್ಶಿ ರಾಜೇಂದ್ರ ಚಳಮರದ, ಶಿಕ್ಷಕರಾದ ಎಸ್.ಆರ್. ಚಳಮರದ, ಆರ್.ಎಂ. ತಟಗಾರ, ಎನ್.ಎಸ್. ದಿಂಡವಾಡ, ಬಿ.ಪಿ. ಹೊರಪೇಟೆ, ಸಿ.ಆರ್. ಕಾನಾಪುರ, ಎ.ಎ. ಕೊಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.