
ಶಿರಹಟ್ಟಿ: ತಾಲೂಕಿನ ಕಡಕೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಜಲ್ಲಿಗೆರಿ ಗ್ರಾಮಕ್ಕೆ 15 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗಿಲ್ಲ.ಇದರಿಂದ ಗ್ರಾಮಸ್ಥರು ಮಂಗಳವಾರ ಕಡಕೋಳ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಳೆದ ಕೆಲವು ದಿನಗಳಿಂದ ಕುಡಿಯುವ ನೀರು ಬಂದಿಲ್ಲ ಎಂದು ಗ್ರಾಮ ಪಂಚಾಯತಿ ಅಧಿಕಾರಿಯನ್ನು ಕೇಳಿದರೆ ಅವರು ಹತ್ತಾರು ಸುಳ್ಳಿನ ಆಶ್ವಾಸನೆ ಕೊಟ್ಟು ಗ್ರಾಮಸ್ಥರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಜನರ ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆ ಹರಿಸುತ್ತಿಲ್ಲ. ಇದೇ ತಿಂಗಳಲ್ಲಿ ಜಲ್ಲಿಗೇರಿ ಗ್ರಾಮದಲ್ಲಿ ದ್ಯಾಮವ್ವ ದೇವಿ ಜಾತ್ರೆ ಇರುವುದರಿಂದ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಕೂಡಲೇ ಈ ಸಮಸ್ಯೆ ಬಗೆಹರಿಸುವುದರ ಜೊತೆಗೆ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ದಿಂಗಾಲೇಶ ಹಿರೇಮಠ ಹೇಳಿದರು.
ಕಡಕೋಳ ಗ್ರಾಮ ಪಂಚಾಯಿತಿ ಮುಂದೆ ಮುಂಜಾನೆಯಿಂದಲೇ ಕುಡಿಯುವ ನೀರಿಗಾಗಿ ನೂರಾರು ಸಾರ್ವಜನಿಕರು ಜಮಾಯಿಸಿ ತಮ್ಮ ಬೇಡಿಕೆ ಈಡೇರುವವರೆಗೆ ಸ್ಥಳ ಬಿಟ್ಟು ಹೊಗುವುದಿಲ್ಲ ಎಂದು ಪಟ್ಟು ಹಿಡಿದಿದರು. ನಂತರ ಅಭಿವೃದ್ಧಿ ಅಧಿಕಾರಿ ಶಿವಾನಂದ ಮಾಳವಾಡ ಅಗಮಿಸಿದರು. ಅವರಿಗೆ ಜಲ್ಲಿಗೇರಿ ಗ್ರಾಮಸ್ಥರು ಕುಡಿಯುವ ನೀರು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಅವರು ಮಾತನಾಡಿದ ಪಿಡಿಒ ಮಾಳವಾಡ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಿ ತ್ವರಿತ ಗತಿಯಲ್ಲಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.
ಶಶಿಧರ ಸಾಳೊಂಕೆ, ಓಬಳೆಪ್ಪ ಬಳ್ಳಾರಿ, ವಿರುಪಾಕ್ಷಿ ಅಂಗಡಿ, ರವಿ ಸಾಳೊಂಕೆ, ಲಕ್ಷö್ಮಣ ಕಳಸದ, ಮಲ್ಲೇಶ ವಡ್ಡರ, ಪರಶುರಾಮ ಕಟಗಿ, ಮರಿಯಪ್ಪ ಬಳ್ಳಾರಿ, ಮಂಜು ಮ. ಕಂಬಾರ ಮಹಾಂತೇಶ ಅಂಗಡಿ, ವಿನಾಯಕ್ ಮಹಾದಿಕ್, ಮಂಜು ಕಂಬಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.