ADVERTISEMENT

ಶಿವಾಜಿ ಯುದ್ಧ ನೀತಿ ವಿಶ್ವಕ್ಕೆ ಮಾದರಿ: ಪ್ರಮೋದ್‌ ಮುತಾಲಿಕ್‌ ಅಭಿಮತ

ಛತ್ರಪತಿ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 6:38 IST
Last Updated 20 ಫೆಬ್ರುವರಿ 2021, 6:38 IST
ಗದುಗಿನ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಶಿವಾಜಿ ಜಯಂತ್ಯುತ್ಸವದಲ್ಲಿ ಪ್ರಮೋದ್‌ ಮುತಾಲಿಕ್‌ ಮಾತನಾಡಿದರು
ಗದುಗಿನ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಶಿವಾಜಿ ಜಯಂತ್ಯುತ್ಸವದಲ್ಲಿ ಪ್ರಮೋದ್‌ ಮುತಾಲಿಕ್‌ ಮಾತನಾಡಿದರು   

ಗದಗ: ‘ಛತ್ರಪತಿ ಶಿವಾಜಿ ಗದಗ ಜಿಲ್ಲೆಯವರು ಎಂಬುದು ಹೆಮ್ಮೆಯ‌ ಸಂಗತಿ. ಅವರು ಒಂದು ಜಾತಿ, ರಾಜ್ಯಕ್ಕೆ ಸೀಮಿತರಾಗಿಲ್ಲ. ಅವರ ಶಿಕ್ಷಣ, ಆರ್ಥಿಕ ನೀತಿ ವಿಶೇಷವಾಗಿತ್ತು. ಶಿವಾಜಿ ಅವರ ಯುದ್ಧ ನೀತಿ ವಿಶ್ವಕ್ಕೆ ಮಾದರಿಯಾಗಿದೆ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ಹೇಳಿದರು. ‌

ಶಿವಾಜಿ ಜಯಂತ್ಯುತ್ಸವದ ಅಂಗವಾಗಿ ಶುಕ್ರವಾರ ನಗರದ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕ್ರಿಶ್ಚಿಯನ್ನರ ಶಾಲೆಗಳು, ವೃದ್ಧಾಶ್ರಮಗಳು ಮತಾಂತರದ ಕೇಂದ್ರಗಳಾಗಿವೆ. ಮತಾಂತರದ ಹುಳು ತುಂಬ ಅಪಾಯಕಾರಿ. ಅದು ದೇಶವನ್ನು ಹಾಳು ಮಾಡುತ್ತದೆ. ದೇಶದಲ್ಲಿ ಮತಾಂತರ ಪ್ರಕ್ರಿಯೆ ಹೀಗೆ ಮುಂದುವರಿದರೆ ನಮ್ಮ ಹೆಣ್ಣು ಮಕ್ಕಳು ಸೀರೆ ಬಿಟ್ಟು ಸ್ಕರ್ಟ್‌ ಹಾಕಿಕೊಂಡು ಓಡಾಡಬೇಕಾಗುತ್ತದೆ. ಕೇಕು, ಕ್ಯಾಂಡಲ್‌ ಸಂಸ್ಕೃತಿ ನಮ್ಮದಲ್ಲ. ದೀಪ ಬೆಳಗಿಸುವ ಸಂಸ್ಕೃತಿ ನಮ್ಮದು. ಇಂತಹ ಶ್ರೇಷ್ಠ ಸಂಸ್ಕೃತಿಯನ್ನು ಕ್ರೈಸ್ತರು ಮತಾಂತರದ ಮೂಲಕ ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಹಿಂದೂ ಕೂಡ ಶಿವಾಜಿ ಜನ್ಮದಿನದಂದು ದೇಶ ಉಳಿಸುವ ಸಂಕಲ್ಪ ಮಾಡಬೇಕು. ಕ್ರೈಸ್ತರು ಮುಂದೆ ಮತಾಂತರಕ್ಕೆ ಪ್ರಯತ್ನಿಸಿದರೆ ಒದೆ ಬೀಳುತ್ತವೆ’ ಎಂದು ಹೇಳಿದರು.

ADVERTISEMENT

‘ಭಗವಾನ್‌ ಬುದ್ಧಿಜೀವಿ ಅಲ್ಲ. ಆತ ಸೈತಾನ್‌. ಅವನ ಮುಖಕ್ಕೆ ಮೀರಾ ರಾಘವೇಂದ್ರ ಎಂಬ ವಕೀಲೆ ಮಸಿ ಹಚ್ಚಿದರು. ರಾಮನನ್ನು ಬೈದರೆ ನಮ್ಮ ಹೆಣ್ಣುಮಕ್ಕಳು ಸಗಣಿಯಲ್ಲಿ ಹೊಡೆಯುತ್ತಾರೆ ಎಂಬುದನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಹೇಳಿದರು.

500 ವರ್ಷದ ಹೋರಾಟದ ಬಳಿಕ ಶ್ರೀರಾಮ ಮಂದಿರ ನಿರ್ಮಾಣ ಸಾಕಾರವಾಗುತ್ತಿದೆ. ಆದರೆ ಬೆಂಗಳೂರಿನ ಓಣಿಯಲ್ಲಿ ರಾಮ ಮಂದಿರ ನಿಧಿ‌ ಸಂಗ್ರಹ ರಥಯಾತ್ರೆ ತಡೆದು ಹಲ್ಲೆ ನಡೆಸಿ, ರಾಮನ ಫೋಟೋ ಕಿತ್ತು ದಾಂಧಲೆ ನಡೆಸಿದೆ. ಅದೇ ಓಣಿಯಲ್ಲಿ ಮುಂದೆ ಮೆರವಣಿಗೆ ನಡೆಸುತ್ತೇವೆ. ತಾಕತ್ತಿದ್ದರೆ ತಡೆಯಲಿ ಎಂದು ಸವಾಲು ಹಾಕಿದರು.

ಆಯುಧಪೂಜೆಯಲ್ಲಿ ಪುಸ್ತಕ, ಪೆನ್ನು, ಸ್ಕೂಟರ್‌, ಸ್ಪ್ಯಾನರ್‌ ಪೂಜೆ ಮಾಡುವುದಲ್ಲ. ಅವೇನು ಆಯುಧಗಳೇ? ಹರಿತವಾದ ತಲ್ವಾರ್‌, ಭರ್ಜಿ, ಕತ್ತಿ, ಚಾಕು ಇಡಬೇಕು. ಆಯುಧಪೂಜೆ ಎಂಬುದು ನಮ್ಮ ಪರಂಪರೆ ಸಂಸ್ಕೃತಿ, ಅದಕ್ಕೆ ಅವಮಾನ ಮಾಡಬೇಡಿ. ದುರ್ಗಾ ಮಾತೆಯನ್ನು ಪೂಜಿಸುತ್ತೇವೆ. ಆಕೆಯ ಹತ್ತು ಕೈಗಳಲ್ಲಿ ಹತ್ತು ಶಸ್ತ್ರಗಳಿವೆ ಎಂಬುದನ್ನು ನೆನಪಿಡಿ ಎಂದು ಹೇಳಿದರು.

ಶಿವಾಜಿ ಜಯಂತ್ಯುತ್ಸವದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.