
ಗದಗ ತಾಲ್ಲೂಕಿನ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನದಲ್ಲಿ ಭಾನುವಾರ ಸರ್ಪದ ಚಿತ್ರವಿರುವ ಪ್ರಾಚ್ಯ ಅವಶೇಷ ಸಿಕ್ಕಿದೆ
ಗದಗ: ಐತಿಹಾಸಿಕ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನದಲ್ಲಿ ಭಾನುವಾರ ಸರ್ಪದ ಚಿತ್ರವಿರುವ ಪ್ರಾಚ್ಯಾವಶೇಷ, ತಾಮ್ರದ ಘಂಟೆ, ಮಣ್ಣಿನ ಧೂಪದಾರತಿ ಗೋಚರಿಸಿದೆ.
ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿ ಎ. ದೇವರಾಜ್., ಉಪವಿಭಾಗಾಧಿಕಾರಿ ಎಂ. ಗಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಭಾನುವಾರ 38 ಮಂದಿ ಕಾರ್ಮಿಕರು ಉತ್ಖನನದಲ್ಲಿ ಭಾಗವಹಿಸಿದ್ದರು. ಉತ್ಖನನ ನಡೆಯುವ ಸ್ಥಳದಲ್ಲಿ, 'ಈ ಸ್ಥಳದಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಲಾಗಿದೆ' ಎಂಬ ನಾಮಫಲಕವನ್ನು ಭಾನುವಾರ ಹಾಕಲಾಗಿತ್ತು. ಇದರಿಂದ ಆತಂಕಗೊಂಡ ಕೋಟೆ ವೀರಭದ್ರೇಶ್ವರ ಜಾತ್ರಾ ಕಮಿಟಿಯ ಸದಸ್ಯರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವೀರಭದ್ರೇಶ್ವರ ಜಾತ್ರೆಗೆ ಅಡ್ಡಿಯಾದರೆ ನಾವು ಉತ್ಖನನ ಕಾರ್ಯಕ್ಕೆ ವಿರೋಧ ಮಾಡುವೆವು ಎಂದು ಜಾತ್ರೆ ಕಮಿಟಿಯ ಅಶೋಕ ಬೂದಿಹಾಳ, ಕೊಟ್ರಯ್ಯ ಎಚ್ಚರಿಸಿದರು.
ಐತಿಹಾಸಿಕ ಕೋಟೆ ವೀರಭದ್ರೇಶ್ವರ ಜಾತ್ರೆಗೆ ಯಾವುದೇ ಅಡ್ಡಿಯಾಗದಂತೆ ಉತ್ಖನನ ಕಾರ್ಯ ನಡೆಯುತ್ತಿದೆ. ಜಾತ್ರೆಯ ಎರಡನೇ ದಿನದ ಅಗ್ನಿಕುಂಡ ರಚಿಸುವ ಸ್ಥಳಕ್ಕೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.