ಗದಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕೊನೆಯ ದಿನವಾದ ಗುರುವಾರದಂದು 15,619 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಪರೀಕ್ಷೆ ಸುಗಮವಾಗಿ ನಡೆಯಿತು.
ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 15,652 ವಿದ್ಯಾರ್ಥಿಗಳ ಪೈಕಿ ಗುರುವಾರ ನಡೆದ ಪರೀಕ್ಷೆಗೆ 33 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
‘‘ನಗರದ ಪಾರ್ಶ್ವನಾಥ ಶಾಲೆಯ ಮಹಮ್ಮದ್ ಕೈಫ್ ಎಂಬ ವಿದ್ಯಾರ್ಥಿ ಫೇಲ್ ಆಗಬಹುದು ಎಂಬ ಭಯದಿಂದ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದವನು ಮರಳಿ ಮನೆಗೆ ಹೋಗಿದ್ದ. ಆತ ಪರೀಕ್ಷೆ ಬರೆಯುವ ಡೆಸ್ಕ್ನಲ್ಲಿ ಪ್ರವೇಶಪತ್ರ ಮಾತ್ರ ಇತ್ತು. ಅದನ್ನು ಗಮನಿಸಿ ವಿದ್ಯಾರ್ಥಿ ಎಲ್ಲಿ ಎಂದು ವಿಚಾರಿಸಿದಾಗ, ‘ಆತ ಸ್ವೆಟರ್ ತರುವುದಾಗಿ ಹೇಳಿ ಮನೆಗೆ ಹೋಗಿದ್ದಾನೆ’ ಎಂದು ಆತನ ಸ್ನೇಹಿತ ತಿಳಿಸಿದ. ತಕ್ಷಣವೇ ಆ ವಿದ್ಯಾರ್ಥಿಯ ಪೋಷಕರಿಗೆ ಕರೆ ಮಾಡಿ ಅವನನ್ನು ಕೇಂದ್ರಕ್ಕೆ ಕರೆತಂದು ಪರೀಕ್ಷೆ ಬರೆಯಿಸಲಾಯಿತು’’ ಎಂದು ಡಿಡಿಪಿಐ ಬಸವಲಿಂಗಪ್ಪ ಜಿ.ಎಂ. ತಿಳಿಸಿದ್ದಾರೆ.
‘ಗದಗ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮರ್ಪಕವಾಗಿ ನಿಭಾಯಿಸಲಾಗಿದೆ. ಎರಡು ದಿನಗಳ ಕಾಲ ನಡೆದ ಪರೀಕ್ಷೆಗಳಲ್ಲಿ ಎಲ್ಲೂ ಅಕ್ರಮ ನಡೆದಿಲ್ಲ. ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಆದರ್ಶ ವಿದ್ಯಾಲಯದ ಸೋಂಕಿತ ವಿದ್ಯಾರ್ಥಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾನೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.