ADVERTISEMENT

‘ಸಮಾನ ಸಮಾಜ ನಿರ್ಮಾಣಕ್ಕೆ ಶ್ರಮಿಸಿ’

ತೋಂಟದಾರ್ಯ ಮಠದಲ್ಲಿ ಲಿಂಗಾನಂದ ಸ್ವಾಮೀಜಿ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 15:36 IST
Last Updated 22 ಸೆಪ್ಟೆಂಬರ್ 2020, 15:36 IST
2,504ನೇ ಶಿವಾನುಭವದಲ್ಲಿ ವ್ಯಾಪಾರೋದ್ಯಮಿ ಶರಣು ಗದಗ ಅವರನ್ನು ಸನ್ಮಾನಿಸಲಾಯಿತು.
2,504ನೇ ಶಿವಾನುಭವದಲ್ಲಿ ವ್ಯಾಪಾರೋದ್ಯಮಿ ಶರಣು ಗದಗ ಅವರನ್ನು ಸನ್ಮಾನಿಸಲಾಯಿತು.   

ಗದಗ: ‘ಬಸವಾದಿ ಶರಣರ ತತ್ವದರ್ಶನಗಳಲ್ಲಿನ ಮಹತ್ವದ ವಿಚಾರಗಳನ್ನು ಜನಮಾನಸಕ್ಕೆ ತಲುಪಿಸಿ, ಧರ್ಮ ಜಾಗೃತಿ ಮೂಡಿಸುವ ಕಾರ್ಯವನ್ನು ಕಾಯಕದಂತೆ ನೆರವೇರಿಸಿದವರು ಲಿಂಗಾನಂದ ಸ್ವಾಮೀಜಿ’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ ನಡೆದ 2,504ನೇ ಶಿವಾನುಭವದಲ್ಲಿ ಪ್ರವಚನ ಪಿತಾಮಹ ಲಿಂಗಾನಂದ ಸ್ವಾಮೀಜಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ವಚನಗಳ ವಿಚಾರಗಳನ್ನು ವಿಶ್ಲೇಷಿಸಿ, ಸತ್ಯವಾದ ಸಂಗತಿಗಳನ್ನು ಸಮಾಜದ ಮುಂದೆ ಇರಿಸಿದಾಗ ಪ್ರತಿಭಟನೆ, ವಿರೋಧಗಳನ್ನು ಎದುರಿಸಬೇಕಾಗಿ ಬಂದಿದೆ. ಎದೆಗುಂದದೇ ಶರಣರ ಸಂದೇಶವನ್ನು ಮನೆ ಮನಗಳಿಗೆ ತಲುಪಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ನಾಸ್ತಿಕರಾಗಿದ್ದ ಲಿಂಗಾನಂದರು ಆಸ್ತಿಕರಾದ ಘಟನೆ ವಿಶೇಷವಾದುದು. ಯುವಜನತೆ ಶರಣರು ಪ್ರತಿಪಾದಿಸಿದ ವಿಚಾರಗಳನ್ನು ಅರಿತು ಸಮಾನ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು’ ಎಂದು ಹೇಳಿದರು.

ADVERTISEMENT

ಕೂಡಲಸಂಗಮ ಬಸವಪೀಠದ ಗಣ ನಾಯಕರಾದ ಕೊರ್ಲಹಳ್ಳಿ ವೀರಣ್ಣ ಲಿಂಗಾಯತ ಮಾತನಾಡಿ, ‘ಪ್ರವಚನಗಳ ಮೂಲಕ ಧರ್ಮಜಾಗೃತಿ ಕಾರ್ಯವನ್ನು ಲಿಂಗಾನಂದ ಸ್ವಾಮೀಜಿ ಮಾಡಿದರು. ಅವರ ವಿಚಾರಗಳಲ್ಲಿ ಸತ್ಯ, ಶುದ್ಧತೆ ಇತ್ತು. ಶರಣರು ಪ್ರತಿಪಾದಿಸಿದ ಸಮಾನತೆಯ ಅಂಶಗಳನ್ನು ಸ್ಪಷ್ಟವಾಗಿ ಸಮಾಜಕ್ಕೆ ತಿಳಿಸಿದರು. ಹಳ್ಳಿ ಪಟ್ಟಣಗಳೆನ್ನದೇ ಇಡೀ ರಾಜ್ಯವನ್ನು ಸುತ್ತಿ ಬಸವಧರ್ಮ ಜಾಗೃತಿ ಮೂಡಿಸಿದರು’ ಎಂದು ತಿಳಿಸಿದರು.

ಗದುಗಿನ ವ್ಯಾಪಾರೋದ್ಯಮಿ ಶರಣು ಗದಗ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಸ್ವಾವಲಂಬಿ ಭಾರತದತ್ತ ಯುವಜನತೆ ಹೊರಳಬೇಕು. ಇಂದಿನ ಯುವಜನತೆ ನೌಕರಿಯತ್ತ ಮುಖಮಾಡದೇ; ವ್ಯಾಪಾರ ವಹಿವಾಟಿನತ್ತ ಗಮನ ಹರಿಸಿದರೆ ವೈಯಕ್ತಿಕ ಸುಧಾರಣೆಯ ಜೊತೆಗೆ ದೇಶದ ಆರ್ಥಿಕತೆಯನ್ನೂ ಸದೃಢ ಮಾಡಲು ಸಾಧ್ಯ’ ಎಂದು ತಿಳಿಸಿದರು.‌

ಶ್ವೇತಾ ಪವಾಡಶೆಟ್ಟಿ ಲಕ್ಕುಂಡಿ, ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರಿಂದ ವಚನ ಸಂಗೀತ ನಡೆಯಿತು.

ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಶ್ರೀಧರ ಪಾಟೀಲ, ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಗೌರಕ್ಕ ಬಡಿಗಣ್ಣವರ, ವೀರಣ್ಣಗೊಡಚಿ, ವಿಜಯಕುಮಾರ ಹಿರೇಮಠ, ಶಶಿಧರ ಬೀರನೂರ, ಪ್ರಕಾಶ ಅಸುಂಡಿ, ಪ್ರಭು ಗಂಜಿಹಾಳ, ರತ್ನಕ್ಕ ಪಾಟೀಲ ಉಪಸ್ಥಿತರಿದ್ದರು. ಮಂಜುಳಾ ಹಾಸಲಕರ ನಿರೂಪಿಸಿದರು. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.