ADVERTISEMENT

ಶಿಕ್ಷಕನಿಂದ ಅಮಾನುಷ ಕೃತ್ಯ: ವಿದ್ಯಾರ್ಥಿ ಸಾವು, ಶಿಕ್ಷಕಿ ಗಂಭೀರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 15:29 IST
Last Updated 19 ಡಿಸೆಂಬರ್ 2022, 15:29 IST
ಅತಿಥಿ ಶಿಕ್ಷಕ ಮುತ್ತಪ್ಪ ಯಲ್ಲಪ್ಪ ಹಡಗಲಿ
ಅತಿಥಿ ಶಿಕ್ಷಕ ಮುತ್ತಪ್ಪ ಯಲ್ಲಪ್ಪ ಹಡಗಲಿ   

ನರಗುಂದ (ಗದಗ ಜಿಲ್ಲೆ): ತಾಲ್ಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ಮುತ್ತಪ್ಪ ಯಲ್ಲಪ್ಪ ಹಡಗಲಿ ಸೋಮವಾರ ನಡೆಸಿದ ಹುಚ್ಚಾಟಕ್ಕೆ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಭರತ್‌ (10) ಸಾವನ್ನಪ್ಪಿದ್ದಾನೆ.

ಬಾಲಕನ ತಾಯಿ ಗೀತಾ ಯಲ್ಲಪ್ಪ ಬಾರಕೇರ ಕೂಡ ಅದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿದ್ದು, ಆರೋಪಿ ಅವರ ಮೇಲೂ ಕಬ್ಬಿಣದ ಸಲಿಕೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ. ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ (ಕುರಿ) ಪರಾರಿಯಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಹದ್ಲಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದ ಅದೇ ಗ್ರಾಮದ ಮುತ್ತಪ್ಪ ಹಡಗಲಿ ಸೋಮವಾರ ಬೆಳಿಗ್ಗೆ 11ರ ಸುಮಾರಿಗೆ ಅತಿಥಿ ಶಿಕ್ಷಕಿ ಗೀತಾ ಅವರ ಮಗ ಭರತ್‌ ಮೇಲೆ ಕಬ್ಬಿಣದ ಸಲಿಕೆಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಬಳಿಕ ಶಾಲೆಯ ಮೊದಲನೇ ಮಹಡಿಯಿಂದ ಬಾಲಕನನ್ನು ಎತ್ತಿ ಕೆಳಕ್ಕೆ ಎಸೆದಿದ್ದಾನೆ.

ADVERTISEMENT

ಈ ವೇಳೆ ಮಗನನ್ನು ಬಿಡಿಸಿಕೊಳ್ಳಲು ಬಂದ ತಾಯಿ ಗೀತಾ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತಡೆಯಲು ಹೋದ ಶಾಲೆಯ ಮತ್ತೊಬ್ಬ ಶಿಕ್ಷಕ ಸಂಗನಗೌಡ ಪಾಟೀಲ ಅವರಿಗೂ ಹೊಡೆದಿದ್ದಾನೆ.ಸಂಗನಗೌಡ ಪಾಟೀಲ ನರಗುಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದರು. ಶಾಲೆ ತುಂಬೆಲ್ಲಾ ರಕ್ತದ ಕಲೆಗಳಾಗಿದ್ದವು.

ಬಳಿಕ ಮುಖ್ಯ ಶಿಕ್ಷಕ ಬಿ.ಎಸ್.ಯಾವಗಲ್‌ ಅಂಬುಲೆನ್ಸ್‌ನಲ್ಲಿ ತಾಯಿ ಮಗುವನ್ನು ನರಗುಂದ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಿತಿ ಚಿಂತಾಜನಕವಾಗಿದ್ದರಿಂದ ಇಬ್ಬರನ್ನೂ ಹುಬ್ಬಳ್ಳಿ ಕಿಮ್ಸ್‌ಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಮಾರ್ಗಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ.

‘ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೋರು ಸಪ್ಪಳವಾದಾಗ ಹೊರ ಬಂದು ನೋಡಿದೆ. ಆಗ ಆರೋಪಿ ನನ್ನ ಮೇಲೂ ಹಲ್ಲೆಗೆ ಮುಂದಾದ. ನಾನು ಹೇಗೋ ಪಾರಾದೆ. ಬಳಿಕ ಆತ ಓಡಿ ಹೋದನು’ ಎಂದು ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ಯಾವಗಲ್ ತಿಳಿಸಿದ್ದಾರೆ.

ಶಾಲೆಯಲ್ಲಿ ನಡೆದ ಅಮಾನುಷ ಘಟನೆಯಿಂದ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಬಳಿಕ ಶಾಲೆಯತ್ತ ಬಂದ ಪೋಷಕರು ಘಟನೆ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಪೊಲೀಸರು ಶಾಲೆಯಲ್ಲಿಯೇ ಬೀಡು ಬಿಟ್ಟಿದ್ದು, ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹದ್ಲಿ ಗ್ರಾಮಕ್ಕೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಎಸ್‌ಪಿ ಶಿವಪ್ರಕಾಶ್ ದೇವರಾಜು, ಸಿಪಿಐ ಮಲ್ಲಯ್ಯ ಮಠಪತಿ, ಡಿಡಿಪಿಐ ಬಸವಲಿಂಗಪ್ಪ, ಬಿಇಒ ರಾಜು ಭೇಟಿ ನೀಡಿ ಪರಿಶೀಲಿಸಿದರು.

‘ಶಾಲೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಗ್ರಾಮಸ್ಥರಿಂದಲೂ ಇವರಿಬ್ಬರ ಕುರಿತು ಯಾವುದೇ ಆರೋಪಗಳು ಬಂದಿಲ್ಲ. ಈ ಘಟನೆ ನಡೆದಿದ್ದು ನಮಗೆ ವಿಸ್ಮಯ ತಂದಿದೆ
–ರಾಜು ಜೆ., ನರಗುಂದ ಬಿಇಒ

ಅಮಾನುಷ ಘಟನೆ ನಂತರ ಆರೋಪಿಯು ನಾಪತ್ತೆಯಾಗಿದ್ದು, ಅವನ‌ ಪತ್ತೆಗಾಗಿ ಕ್ರಮಕೈಗೊಂಡಿದ್ದೇವೆ. ಆರೋಪಿ ಪತ್ತೆಯಾದ ನಂತರವೇ ಸತ್ಯಾಂಶ ಹೊರಬೀಳಲಿದೆ
– ಮಲ್ಲಯ್ಯ ಮಠಪತಿ, ನರಗುಂದ ಸಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.